ಗಡಿ ಗುದ್ದಾಟ: 2022ರ ಡಿಸೆಂಬರ್ ಘಟನೆಗೆ 2021ರ ವಿಡಿಯೋ!
ನವದೆಹಲಿ, ಡಿಸೆಂಬರ್ 14: ಅರುಣಾಚಲ ಪ್ರದೇಶದ ಗಡಿಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಡಿಸೆಂಬರ್ 9 ರಂದು ಘರ್ಷಣೆಯನ್ನು ಸರ್ಕಾರ ದೃಢಪಡಿಸಿದ ಮರುದಿನವೇ ಈ ಹಿಂದಿನ ಚಕಮಕಿಯ ವಿಡಿಯೋ ಸಖತ್ ಸುದ್ದಿ ಮಾಡುತ್ತಿದೆ.
ಕಳೆದ ವರ್ಷ ಅರುಣಾಚಲ ಪ್ರದೇಶದ ತವಾಂಗ್ನ ಇದೇ ಪ್ರದೇಶದಲ್ಲಿ ನಡೆದ ಘೋರ ಸಂಘರ್ಷವನ್ನು ಈ ವಿಡಿಯೋ ತೋರಿಸುತ್ತದೆ. ಆದರೆ ಈ ವಿಡಿಯೋ ಡಿಸೆಂಬರ್ 9ರ ಘಟನೆಗೆ ಸಂಬಂಧಿಸಿದ್ದು ಎಂಬುದನ್ನು ಭಾರತೀಯ ಸೇನೆ ದೃಢವಾಗಿ ನಿರಾಕರಿಸಿದೆ.
ಸೈನಿಕರ ಸೆಣಸಾಟ: ಭಾರತ-ಚೀನಾ ಗಡಿ ಘರ್ಷಣೆ ಬಗ್ಗೆ ಅಮೆರಿಕಾ ಹೇಳುವುದೇನು?
ಈ ವಿಡಿಯೋ ಕ್ಲಿಪ್ನಲ್ಲಿ ತೋರಿಸಿರುವುದು 2020ರ ಜೂನ್ನಲ್ಲಿ ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಘರ್ಷಣೆಯ ಚಿತ್ರಣವಾಗಿದೆ. ಅಂದು ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (LAC) ಬಳಿಯ ಯಾಂಗ್ಟ್ಸೆ ಸೆಕ್ಟರ್ನಲ್ಲಿ ನಡೆದ ಸಂಘರ್ಷದಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದು, 40ಕ್ಕೂ ಹೆಚ್ಚು ಚೀನೀ ಸೈನಿಕರು ಮೃತಪಟ್ಟರು ಎಂದು ತಿಳಿದು ಬಂದಿತ್ತು.
ಚೀನಾ ಯೋಧರನ್ನು ಹಿಮ್ಮೆಟ್ಟಿಸಿದ್ದ ಭಾರತೀಯ ಸೈನಿಕರು
ಭಾರತೀಯ ಯೋಧರ ರಕ್ಷಣಾ ಕೋಟೆಯ ಹೊರತಾಗಿಯೂ ಇಳಿಜಾರಿನಲ್ಲಿ ಬಂದು ತಮ್ಮ ಸ್ಥಾನವನ್ನು ಸ್ಥಾಪಿಸಲು ಮುಂದಾಗಿದ್ದ ಚೀನಾ ಸೈನಿಕರನ್ನು ದೇಶದ ಯೋಧರು ಹಿಮ್ಮೆಟ್ಟಿಸಿದ್ದರು. ಸಂಘಟಿತ ಪ್ರಯತ್ನದ ಮುಖೇನ ಭಾರತೀಯ ಸೈನಿಕರು ಹಿಮ್ಮೆಟ್ಟಿಸುವ ದೃಶ್ಯವನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಭಾರತೀಯ ಸೈನಿಕರು ಹಿಂಸಾತ್ಮಕವಾಗಿ ಘರ್ಷಣೆ ಮತ್ತು ದಾಟಲು ಪ್ರಯತ್ನಿಸುತ್ತಿರುವ ಚೀನಾ ಸೈನಿಕರನ್ನು ಥಳಿಸುತ್ತಿರುವುದು ಕಂಡುಬರುತ್ತದೆ.
ಆ ವಿಡಿಯೋದ ಆಡಿಯೋದಲ್ಲಿ ಏನಿತ್ತು?
"ಅವರು ಸುಮ್ಮನೆ ಹಿಂತಿರುಗುವುದಿಲ್ಲ, ಅವರನ್ನು ಸರಿಯಾಗಿ ಹೊಡೆಯಿರಿ," ಎಂದು ಪಂಜಾಬಿಯಲ್ಲಿ ಜವಾನರು ಹೇಳುವುದು ಕೇಳಿ ಬರುತ್ತದೆ. ಇದೇ ವೇಳೆ "ಅವರ ತಲೆಗೆ ಹೊಡೆದು... ಮಾರೋ,ಮಾರೋ. ಅವರಿಗೆ ವಾಪಸ್ ಕೊಡಿ.. ಅವರನ್ನು ಓಡಿಸಿ," ಎಂದು ಕೂಗುವ ಆಡಿಯೋ ಕೇಳಿ ಬಂದಿದೆ. ಭಾರತೀಯ ಸೈನಿಕರು ಚೀನೀ ಸೈನಿಕರನ್ನು ಲಾಠಿಗಳಿಂದ ಹೊಡೆಯುವುದು. ಚೀನಿಯರು ಮುನ್ನಡೆಯುವುದನ್ನು ಯಶಸ್ವಿಯಾಗಿ ತಡೆಯಲು ಮುಷ್ಟಿಯನ್ನು ಹೊಡೆಯುವುದು ಆ ವಿಡಿಯೋದಲ್ಲಿ ಸೆರೆಯಾಗಿತ್ತು.
ಭಾರತ-ಚೀನಾ ಘರ್ಷಣೆ ಬಗ್ಗೆ ರಾಜನಾಥ್ ಸಿಂಗ್ ಮಾಹಿತಿ
ಕಳೆದ ಡಿಸೆಂಬರ್ 9ರಂದು ಅರುಣಾಚಲದ ತವಾಂಗ್ ಸೆಕ್ಟರ್ನ ಯಾಂಗ್ಟ್ಸೆ ಪ್ರದೇಶದಲ್ಲಿ ನೈಜ ನಿಯಂತ್ರಣ ರೇಖೆಯನ್ನು (ಎಲ್ಎಸಿ) ಉಲ್ಲಂಘಿಸದಂತೆ ಭಾರತೀಯ ಸೇನಾ ಪಡೆಗಳು ಚೀನಾ ಸೇನೆಯನ್ನು ಧೈರ್ಯದಿಂದ ತಡೆದವು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
"ಯಾವುದೇ ಭಾರತೀಯ ಸೈನಿಕರು ಸಾವನ್ನಪ್ಪಿಲ್ಲ ಅಥವಾ ತೀವ್ರವಾಗಿ ಗಾಯಗೊಂಡಿಲ್ಲ ಎಂದು ಸದನಕ್ಕೆ ಭರವಸೆ ನೀಡಲು ಬಯಸುತ್ತೇನೆ. ನಮ್ಮ ಸೇನೆಯು ದೇಶದ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸುತ್ತದೆ ಎಂದು ಸದನಕ್ಕೆ ಭರವಸೆ ನೀಡುತ್ತೇನೆ. ನಮ್ಮ ಸೇನೆಯು ಯಾವುದೇ ಉಲ್ಲಂಘನೆಯನ್ನು ನಿಭಾಯಿಸಲು ಸಿದ್ಧವಾಗಿದೆ. ನಮ್ಮ ಸಶಸ್ತ್ರ ಪಡೆಗಳ ಶೌರ್ಯ ಮತ್ತು ಧೈರ್ಯವನ್ನು ಸದನ ಬೆಂಬಲಿಸುತ್ತದೆ ಎಂದು ದೃಢವಾಗಿ ನಂಬುತ್ತೇನೆ," ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿನಲ್ಲಿ ಹೇಳಿದರು.
ಚೀನಾ ಸೈನಿಕರದ್ದು ಪ್ರತಿವರ್ಷ ಇದೇ ಆಯ್ತು
ಚೀನಿಯರು ಘರ್ಷಣೆಗಾಗಿ ಕ್ಲಬ್ಗಳು, ಕೋಲುಗಳು ಮತ್ತು ಇತರ ಸಲಕರಣೆಗಳೊಂದಿಗೆ ಶಸ್ತ್ರಸಜ್ಜಿತರಾಗಿದ್ದರು. ಎದುರಾಳಿಯ ಉದ್ದೇಶಗಳನ್ನು ತಿಳಿದಿದ್ದರಿಂದ ಭಾರತೀಯ ಸೈನಿಕರು ಸಹ ಘರ್ಷಣೆಗೆ ಸಿದ್ಧರಾಗಿದ್ದರು.
ಭಾರತೀಯ ಸೇನೆಯ ಒಂದು ತುಕಡಿಯು ಅಲ್ಲಿಂದ ಹೊರಡುವ ಹಾದಿಯಲ್ಲಿತ್ತು. ಹೊಸ ಘಟಕವನ್ನು ಆ ಪ್ರದೇಶಕ್ಕೆ ನಿಯೋಜನೆ ಮಾಡಲಾಗುತ್ತಿತ್ತು. ಆದಾಗ್ಯೂ, ಈ ಪ್ರದೇಶದಲ್ಲಿ ಎರಡೂ ಘಟಕಗಳಿದ್ದ ದಿನದಂದು ಚೀನಿಯರು ಘರ್ಷಣೆಯನ್ನು ಆರಿಸಿಕೊಂಡರು. ಚೀನಾದ ಸೇನಾ ಪಡೆಗಳು ಪ್ರತಿ ವರ್ಷವೂ ಈ ಪ್ರದೇಶಗಳನ್ನು ಪ್ರವೇಶಿಸಲು ಪ್ರಯತ್ನಿಸುತ್ತವೆ. ಭಾರತವು ಅದಕ್ಕೆ ಅನುಮತಿಸದೇ ಹಕ್ಕು ರೇಖೆಯನ್ನು ಗಸ್ತು ತಿರುಗಲು ಪ್ರಯತ್ನಿಸುತ್ತದೆ.