ಸಲಿಂಗಕಾಮ ಅನೈತಿಕ, ಅಪರಾಧ : ಸುಪ್ರೀಂಕೋರ್ಟ್
ನವದೆಹಲಿ, ಡಿ. 11 : ಗುದ ಸಂಭೋಗ ಅನೈತಿಕ ಮತ್ತು ಕಾನೂನಿಗೆ ವಿರುದ್ಧವಾಗಿದೆ ಎಂದು ಭಾರತದ ಸರ್ವೋಚ್ಚ ನ್ಯಾಯಾಲಯ ಬುಧವಾರ ಮಹತ್ವದ ಮತ್ತು ಐತಿಹಾಸಿಕ ತೀರ್ಪು ನೀಡಿದ್ದು, ಸ್ತ್ರೀ, ಪುರುಷ, ದ್ವಿಲಿಂಗಿ ಮತ್ತು ನಪುಂಸಕ ಸಲಿಂಗಕಾಮಿಗಳಿಗೆ ಭಾರೀ ಹೊಡೆತ ನೀಡಿದೆ.
ಸಲಿಂಗರತಿ ಅಪರಾಧವಲ್ಲ ಎಂದು 2009ರಲ್ಲಿ ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ. ಈ ಮೂಲಕ ಗುದ ಸಂಭೋಗ ದಂಡಾರ್ಹ ಎಂದು ಹೇಳುವ ಭಾರತೀಯ ದಂಡ ಸಂಹಿತೆಯ ನಿಯಮ 377ರ ಸಾಂವಿಧಾನಿಕ ಸಿಂಧುತ್ವವನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿಹಿಡಿದಿದೆ.
ಭಾರತೀಯ ದಂಡ ಸಂಹಿತೆಯ 377ನೇ ಸೆಕ್ಷನ್ ಅನ್ನು ತೆಗೆದುಹಾಕುವ ಅಧಿಕಾರ ಸಂಸತ್ತಿಗಿದೆ. ಆದರೆ, ಆ ನಿಯಮವನ್ನು ಸಂಸತ್ತು ರದ್ದು ಮಾಡುವವರೆಗೆ ಈ ಬಗೆಯ ಲೈಂಗಿಕ ಸಂಬಂಧಕ್ಕೆ ಕಾನೂನಿನ ಮಾನ್ಯತೆ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ವಿಭಾಗೀಯ ಪೀಠ ಖಡಾಖಂಡಿತವಾಗಿ ಹೇಳಿದೆ. [ಸಲಿಂಗಕಾಮ : ತೀರ್ಪಿನ ವಿರುದ್ಧ ಸಿಡಿಮಿಡಿ]
ನ್ಯಾಯಮೂರ್ತಿ ಜಿ.ಎಸ್. ಸಿಂಘ್ವಿ ಮತ್ತು ನ್ಯಾ. ಎಸ್.ಜೆ. ಮುಖ್ಯೋಪಾಧ್ಯಾಯ ಅವರಿದ್ದ ವಿಭಾಗೀಯ ಪೀಠ ಸಲಿಂಗಕಾಮವನ್ನು ಬೆಂಬಲಿಸುವ ಮತ್ತು ವಿರೋಧಿಸುವವರ ವಾದಗಳನ್ನು ಸುಮಾರು 1 ತಿಂಗಳ ಕಾಲ ಆಲಿಸಿ 2012ರ ಮಾರ್ಚ್ 27ರಂದು ತೀರ್ಪನ್ನು ಕಾಯ್ದಿರಿಸಿತ್ತು. ನ್ಯಾ. ಸಿಂಘ್ವಿ ಅವರು ನಿವೃತ್ತಿಯಾಗುತ್ತಿರುವ ದಿನ, ಒಂಬತ್ತು ತಿಂಗಳ ನಂತರ ತೀರ್ಪು ಹೊರಬಿದ್ದಿದೆ.
ಐಪಿಸಿಯ 377ನೇ ಸೆಕ್ಷನ್ ಸಲಿಂಗಕಾಮಿಗಳ ಲೈಂಗಿಕತೆ ಅಸ್ವಾಭಾವಿಕ ಎಂದು ವಿವರಿಸಿದ್ದು, ಆರೋಪ ಸಾಬೀತಾದರೆ ಜೀವಾವಧಿ ಶಿಕ್ಷೆ ವಿಧಿಸಬಹುದಾಗಿದೆ. ಆದರೆ, 2009ರ ಜುಲೈ 2ರಂದು ದೆಹಲಿ ಹೈಕೋರ್ಟ್, ಸಲಿಂಗಕಾಮಕ್ಕೆ ಕಾನೂನಿನ ಮಾನ್ಯತೆ ಒದಗಿಸಿಕೊಟ್ಟಿತ್ತು, ಸಲಿಂಗ ಕಾಮ ಅಪರಾಧವಲ್ಲ, ಅನೈತಿಕವಲ್ಲ ಎಂದು ತೀರ್ಪನ್ನು ನೀಡಿತ್ತು.
ಈ ಹೈಕೋರ್ಟ್ ತೀರ್ಪನ್ನು ವಿರೋಧಿಸಿ ನಾಜ್ ಫೌಂಡೇಷನ್ ಎಂಬ ಎನ್ಜಿಓ, ಬಿಜೆಪಿ ನಾಯಕ ಬಿ.ಪಿ. ಸಿಂಘಾಲ್, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ, ಉತ್ಕಲ್ ಕ್ರಿಶ್ಚಿಯನ್ ಕೌನ್ಸಿಲ್ ಮತ್ತು ಅಪೊಸ್ಟೋಲಿಕ್ ಚರ್ಚಸ್ ಅಲೈಯನ್ಸ್ ಸಂಸ್ಥೆಗಳು ಜಂಟಿಯಾಗಿ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದವು. ದೆಹಲಿಯ ಮಕ್ಕಳ ಹಕ್ಕು ರಕ್ಷಣಾ ಆಯೋಗ, ಯೋಗ ಗುರು ಬಾಬಾ ರಾಮದೇವ್ ಮುಂತಾದವರು ಕೂಡ ಸಲಿಂಗಕಾಮವನ್ನು ವಿರೋಧಿಸಿದ್ದರು.
ಸುಪ್ರೀಂ ತೀರ್ಪಿಗೆ ಪರ, ವಿರೋಧ : ಸುಪ್ರೀಕೋರ್ಟ್ ತೀರ್ಪು ರಸ್ತೆಯಲ್ಲಿ ಸಿಗುವ ಒಂದು ಉಬ್ಬು ಮಾತ್ರ. ಸಲಿಂಗಕಾಮದ ಪರ ನಮ್ಮ ಹೋರಾಟ ಮುಂದುವರಿಯುತ್ತದೆ. ಈ ದೇಶದ ಜನರು ಮುಂದುವರಿದವರು, ನಮಗೆ ಪಾಲಕರಿಂದಲೂ ಸಾಕಷ್ಟು ಬೆಂಬಲವಿದೆ. ಆದರೆ, ಆ ತೀರ್ಪು ತೀವ್ರ ನೋವು ತಂದಿದೆ ಎಂದು ಸಲಿಂಗಕಾಮವನ್ನು ಬೆಂಬಲಿಸುತ್ತಿರುವ ಹೋರಾಟಗಾರರು ಹೇಳಿದ್ದಾರೆ.
ಮೇಲ್ಮನವಿ ಸಲ್ಲಿಸಿದ್ದ ರಾಮದೇವ್ ಸಹವರ್ತಿ ತಿಜಾರವಾಲಾ ಅವರು ತೀರ್ಪನ್ನು ಸ್ವಾಗತಿಸಿದ್ದು, ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದು ಐತಿಹಾಸಿಕ ತೀರ್ಪು ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಹಲವಾರು ಮುಸ್ಲಿಂ, ಹಿಂದೂ, ಕ್ರಿಶ್ಚಿಯನ್ ಸಂಘಟನೆಗಳು ಕೂಡ ಈ ತೀರ್ಪನ್ನು ಸ್ವಾಗತಿಸಿವೆ.