ಚಿತ್ರಗಳಲ್ಲಿ ಹಿರಾಖಂಡ್ ಎಕ್ಸ್ ಪ್ರೆಸ್ ರೈಲು ಅಪಘಾತ
ಕುನೇರು (ಆಂಧ್ರಪ್ರದೇಶ), ಜನವರಿ 22 : ಶನಿವಾರ ರಾತ್ರಿ 11.30ರ ಸುಮಾರಿಗೆ, ಒರಿಸ್ಸಾದ ರಾಯಗಢದಿಂದ 24 ಕಿ.ಮೀ. ದೂರದಲ್ಲಿರುವ ಆಂಧ್ರಪ್ರದೇಶದ ಕುನೇರು ಬಳಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ ಸತ್ತವರ ಸಂಖ್ಯೆ 41ಕ್ಕೇರಿದೆ.
ಆಂಧ್ರದ ವಿಜಯನಗರಂ ಜಿಲ್ಲೆಯ ಕುನೇರು ಬಳಿ ಜಗದಲಪುರ-ಭುವನೇಶ್ವರ ರೈಲಿನ 9 ಬೋಗಿಗಳು ಹಳಿ ತಪ್ಪಿದ ಪರಿಣಾಮ ಈ ಭೀಕರ ಅಪಘಾತ ಸಂಭವಿಸಿದೆ. ಎಸ್ 8 ಮತ್ತು ಎಸ್ 9 ಬೋಗಿಗಳ ಅಡಿಯಲ್ಲಿ ಇನ್ನೂ ಕೆಲವರು ಸಿಲುಕಿರಬಹುದು ಎಂದು ಶಂಕಿಸಲಾಗಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಂಭವನೀಯತೆ ಇದೆ.
ಈ ಅಪಘಾತ ಹೇಗೆ ಸಂಭವಿಸಿತು ಎಂದು ಇನ್ನೂ ತಿಳಿದುಬಂದಿಲ್ಲ. ಉಗ್ರರ ಕೈವಾಡ ಇರುವುದನ್ನು ರೈಲ್ವೆ ಇಲಾಖೆ ತಳ್ಳಿಹಾಕುತ್ತಿಲ್ಲ. ರೈಲ್ವೆ ಇಲಾಖೆ ಈ ಅಪಘಾತದ ತನಿಖೆಗೆ ಆದೇಶ ನೀಡಿದ್ದು, ನಂತರವಷ್ಟೇ ಈ ದುರ್ಘಟನೆ ಹೇಗೆ ಸಂಭವಿಸಿತು ಎಂದು ತಿಳಿದುಬರಲಿದೆ.
ಚತ್ತೀಸ್ಗಢದ ಜಗದಲಪುರವನ್ನು 4.25ಕ್ಕೆ ಬಿಟ್ಟಿದ್ದ ಹಿರಾಖಂಡ್ ಎಕ್ಸ್ ಪ್ರೆಸ್ ರೈಲು ಭಾನುವಾರ ಬೆಳಿಗ್ಗೆ ಭುವನೇಶ್ವರ ತಲುಪುವುದಿತ್ತು. ಅಷ್ಟರಲ್ಲಿ ರಾತ್ರಿ 11.30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.

ಅಪಘಾತ ರಾತ್ರಿ ಸಂಭವಿಸಿದ್ದರಿಂದ ಹೆಚ್ಚು ಸಾವುನೋವು
ಅಪಘಾತ ರಾತ್ರಿ ಸಂಭವಿಸಿದ್ದರಿಂದ ರಕ್ಷಣಾಕಾರ್ಯ ಕೂಡಲೆ ಸಾಧ್ಯವಾಗಲಿಲ್ಲ. ಅಲ್ಲದೆ, ಗಾಯಾಳುಗಳನ್ನು ತಕ್ಷಣ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲೂ ಆಗಲಿಲ್ಲ. ಎಕ್ಸ್ ಪ್ರೆಸ್ 2 ಜನರಲ್ ಬೋಗಿಗಳು, 4 ಸ್ಲೀಪರ್ ಕ್ಲಾಸ್ ಬೋಗಿಗಳು, 3 ಎಸಿ ಬೋಗಿಗಳು ಹಳಿ ತಪ್ಪಿವೆ. ಭಾನುವಾರ ಸಂಜೆಯೂ ರಕ್ಷಣಾ ಕಾರ್ಯ ನಡೆಯುತ್ತಿದೆ.

ಭಯಂಕರವಾಗಿ ಅಲ್ಲಾಡಿದ ರೈಲು
11.30 ಸುಮಾರಿಗೆ ಹಲವರು ನಿದ್ರಿಸುತ್ತಿದ್ದರು, ಕೆಲವರು ಇನ್ನೂ ಮಾತುಕತೆಯಲ್ಲಿ ನಿರತರಾಗಿದ್ದರು. ಆಗ ಇದ್ದಕ್ಕಿದ್ದಂತೆ ಭಾರೀ ಸದ್ದು ಕೇಳಿಬಂತು. ಭಯಂಕರವಾಗಿ ಅಲ್ಲಾಡಲು ಪ್ರಾರಂಭಿಸಿತು. ರೈಲು ಹಳಿ ತಪ್ಪಿದೆ ಎಂದು ತಿಳಿಯಲು ಹೆಚ್ಚಹೊತ್ತು ಬೇಕಾಗಲಿಲ್ಲ. ನನಗೆ ಜ್ಞಾನ ತಪ್ಪಿತು. ಎಚ್ಚರ ಬಂದಾಗ ನನ್ನ ಕಾಲ ಮೇಲೆ ನೀರಿನ ಟ್ಯಾಂಕ್ ಬಿದ್ದಿತ್ತು. ಹಲವರು ಅಳುತ್ತಿದ್ದರು, ನರಳಾಡುತ್ತಿದ್ದರು ಎಂದು ಪ್ರಯಾಣಿಕರೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ನನ್ನ ಹೆಂಡತಿಗೆ ಏನಾಗಿದೆಯೋ ಗೊತ್ತಿಲ್ಲ
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮತ್ತೊಬ್ಬರ ಪ್ರಕಾರ, ಅವರೆಲ್ಲ ಗಾಢನಿದ್ರೆಯಲ್ಲಿದ್ದರು. ಆಗ ಇದ್ದಕ್ಕಿತ್ತಂತೆ ರೈಲು ಹಳಿತಪ್ಪಿದ್ದು ಅರಿವಾಯಿತು. ಪ್ರಯಾಣಿಕರ ಮೇಲೆಲ್ಲ ವಸ್ತುಗಳು, ಜನರು ಬಿದ್ದಿದ್ದರು. ನಾನು ಬಳಿಯಿದ್ದ ಕಿಟಕಿಯಿಂದ ಹೇಗೋ ಹೊರಬಂದೆ. ಆದರೆ ನನ್ನ ಹೆಂಡತಿಗೆ ಏನಾಗಿದೆಯೋ ಗೊತ್ತಿಲ್ಲ.

ರೈಲ್ವೆ ಇಲಾಖೆಯಿಂದ ಪರಿಹಾರ
ರೈಲ್ವೆ ಸಚಿವ ಸುರೇಶ್ ಪ್ರಭು ಅವರು ಸ್ಥಳಕ್ಕೆ ಸ್ವತಃ ಆಗಮಿಸಿ ರಕ್ಷಣಾ ಕಾರ್ಯ ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯದ ಮೇಲ್ವಿಚಾರಣೆ ನೋಡಿಕೊಂಡರು. ಸತ್ತವರ ಕುಟುಂಬಕ್ಕೆ 5 ಲಕ್ಷ ರು. ಗಂಭೀರವಾಗಿ ಗಾಯಗೊಂಡವರಿಗೆ 50 ಸಾವಿರ ಮತ್ತು ಸಣ್ಣಪುಟ್ಟ ಗಾಯಾಳುಗಳಿಗೆ 25 ಸಾವಿರ ರು. ಪರಿಹಾರ ಘೋಷಿಸಲಾಗಿದೆ.

ಇನ್ನೂ ಸಾಗಿರುವ ರಕ್ಷಣಾಕಾರ್ಯ
ರಕ್ಷಣಾ ಕಾರ್ಯಕ್ಕೆ ಎನ್ಡಿಆರ್ಎಫ್, ಆರ್ಪಿಎಫ್, ಸಿಆರ್ಪಿಎಫ್ ತುಕುಡಿಗಳನ್ನು ಕರೆಯಿಸಲಾಗಿತ್ತು. ಒರಿಸ್ಸಾದ ರಾಯಗಢದ ಜಿಲ್ಲಾಧಿಕಾರಿ ಮತ್ತು ಸಿಆರ್ಪಿಎಫ್ ಕಮಾಂಡರ್ ರಕ್ಷಣಾ ಕಾರ್ಯ ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಕೆಲಸದ ಮೇಲ್ವಿಚಾರಣೆ ವಹಿಸಿದ್ದರು.

ಕೆಲವರ ಸ್ಥಿತಿ ಚಿಂತಾಜನಕ
ಗಾಯಗೊಂಡವರನ್ನು ರಾಯಗಢ, ಪಾರ್ವತಿಪುರಂ ಮತ್ತು ವಿಶಾಖಪಟ್ಟಣಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಈ ದುರ್ಘಟನೆಯಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.

ರಾಯಗಢದ ಸಹಾಯವಾಣಿ
ಬಿಎಸ್ಎನ್ಎಲ್: 06856-223400, 06856-223500
ಬಿಎಸ್ಎನ್ಎಲ್ ಮೊಬೈಲ್ : 09439741181, 09439741071
ಏರ್ ಟೆಲ್: 07681878777.
ರೈಲ್ವೆ ಇಲಾಖೆ ಸಂಖ್ಯೆಗಳು : 83331, 83332, 83333, 83334
ಬಿಎಸ್ಎನ್ಎಲ್ : 08922-221202, 08922-221206












Click it and Unblock the Notifications