ಶಬರಿಮಲೆ ಯಾತ್ರಿಗಳಿಗೆ ಹೆಲಿಕಾಪ್ಟರ್ ಸೇವೆ: ಕೇರಳ ಹೈಕೋರ್ಟ್ ನೀಡಿದ ಆದೇಶ ಏನು?
ತಿರುವನಂತಪುರಂ, ನವೆಂಬರ್, 22: ಶಬರಿಮಲೆಗೆ ತೆರಳುವ ಯಾತ್ರಿಗಳಿಗೆ ಹೆಲಿಕಾಪ್ಟರ್ ಸೇವೆಯನ್ನು ಒದಗಿಸುವುದಕ್ಕೆ ಖಾಸಗಿ ನಾಗರಿಕ ವಿಮಾನಯಾನ ಸಂಸ್ಥೆಗೆ ಕೇರಳ ಹೈಕೋರ್ಟ್ ನಿರ್ಬಂಧ ಹೇರಿದೆ. ಹೀಗೆ ಸೇವೆಗಳನ್ನು ನೀಡಲು ಪ್ರಯತ್ನಿಸುತ್ತಿರುವ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹೈಕೋರ್ಟ್ ಸೂಚಿಸಿದೆ.
ಇದೀಗ ನಡೆಯುತ್ತಿರುವ ಮಕರವಿಳಕ್ಕು ಉತ್ಸವದ ಸಂದರ್ಭದಲ್ಲಿ ಅಪಾರ ಪ್ರಮಾಣದ ಜನಸಂದಣಿಯನ್ನು ಕಾಣುವ ದೇವಾಲಯವು ನೈಸರ್ಗಿಕ ವಿಕೋಪಗಳಿಗೆ ತುತ್ತಾಗುವ ದಟ್ಟ ಅರಣ್ಯ ಪ್ರದೇಶದಲ್ಲಿ ನೆಲೆಗೊಂಡಿದೆ. ಈ ಬಗ್ಗೆ ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಪಿ.ಜಿ. ಅಜಿತ್ಕುಮಾರ್ ಅವರ ವಿಭಾಗೀಯ ಪೀಠ ಗಮನಿಸಿದೆ ಎಂದು ಬಾರ್ ಆಂಡ್ ಬೆಂಚ್ ವರದಿ ಮಾಡಿದೆ.
ಹಬ್ಬದ ಸಂದರ್ಭದಲ್ಲಿ ಪೊಲೀಸರು ಸುರಕ್ಷಿತ ಮತ್ತು ಸಮಸ್ಯೆ ಇಲ್ಲದ ತೀರ್ಥಯಾತ್ರೆಯನ್ನು ಖಚಿತಪಡಿಸಿಕೊಳ್ಳಲು ತಿಳಿಸಿತ್ತು. ಶಬರಿಮಲೆಯನ್ನು ರಾಜ್ಯ ಸರ್ಕಾರವು ಇತ್ತೀಚಿನ ಆದೇಶದ ಮೂಲಕ ವಿಶೇಷ ಭದ್ರತಾ ವಲಯ ಅಂತಾ ಘೋಷಿಸಿದೆ ಎಂದು ಗಮನಿಸಿದೆ. "ಎನ್ಹಾನ್ಸ್ ಏವಿಯೇಷನ್ ಸರ್ವಿಸಸ್ ಲಿಮಿಟೆಡ್" ಎಂಬ ಸಂಸ್ಥೆ ನಾಗರಿಕ ವಿಮಾನಯಾನ ಸಚಿವಾಲಯ, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಅಥವಾ ತಿರುವಾಂಕೂರು ದೇವಸ್ವಂ ಮಂಡಳಿಯಿಂದ ಅಗತ್ಯ ಅನುಮತಿಗಳನ್ನು ಪಡೆಯದೆ ನಿಲಕ್ಕಲ್, ಶಬರಿಮಲೆಗೆ ಹೆಲಿಕಾಪ್ಟರ್ ಸೇವಾ ಪ್ಯಾಕೇಜ್ಗಳನ್ನು ನೀಡುತ್ತಿದೆ. ಸದ್ಯ ನಿಲಕ್ಕಲ್ನಲ್ಲಿ ಹೆಲಿಕಾಪ್ಟರ್ ಸೌಲಭ್ಯಕ್ಕಾಗಿ ವಿಮಾನಯಾನ ವಲಯದ ಯಾವುದೇ ಟೂರ್ ಆಪರೇಟರ್ಗೆ ಅನುಮತಿ ನಿಷೇಧಿಸಲಾಗಿದೆ. ಈ ಬಗ್ಗೆ ಯಾತ್ರಾರ್ಥಿಗಳಿಗೆ ತನ್ನ ವರ್ಚುವಲ್-ಕ್ಯೂ ಪ್ಲಾಟ್ಫಾರ್ಮ್ ಮೂಲಕ ತಿಳಿಸುವಂತೆ ಪೀಠವು ದೇವಸ್ವಂ ಮಂಡಳಿಗೆ ಸೂಚಿಸಿತ್ತು.

ಸಂಸ್ಥೆಗೆ ಯಾವುದೇ ಅನುಮತಿ ನೀಡಿಲ್ಲ
ಹೆಲಿಕಾಪ್ಟರ್ ಸೇವೆಗಳಿಗೆ ಸಂಬಂಧಿಸಿದಂತೆ ಕೆಲವು ವರದಿಗಳ ಆಧಾರದ ಮೇಲೆ ನ್ಯಾಯಾಲಯವು ಸ್ವಯಂ ಪ್ರೇರಿತವಾಗಿ ವಿಚಾರಣೆ ಆರಂಭಿಸಿ ಈ ಆದೇಶವನ್ನು ನೀಡಿದೆ ಎನ್ನಲಾಗಿದೆ. ಇಂತಹ ಯಾವುದೇ ಸೌಲಭ್ಯಗಳ ಬಗ್ಗೆ ತಮಗೆ ತಿಳಿದಿಲ್ಲ. ಅಥವಾ ಸಂಬಂಧಪಟ್ಟ ಸಂಸ್ಥೆಗೆ ಯಾವುದೇ ಅನುಮತಿಯನ್ನು ನೀಡಿಲ್ಲ ಎಂದು ಸರ್ಕಾರಿ ವಕೀಲರು ಮತ್ತು ದೇವಸ್ವಂ ಮಂಡಳಿಯ ವಕೀಲರು ಶುಕ್ರವಾರ ನ್ಯಾಯಾಲಯಕ್ಕೆ ತಿಳಿಸಿದ್ದರು. ನಂತರ ನ್ಯಾಯಾಲಯ ಪ್ರಕರಣವನ್ನು ಶನಿವಾರ ವಿಚಾರಣೆಗೆ ಮುಂದೂಡಿತ್ತು. ದರ್ಶನ, ಡೋಲಿ ಸೇವೆ, ನಿಲಕ್ಕಲ್ನಿಂದ ಪಂಬಾಗೆ ಟ್ಯಾಕ್ಸಿ ಸೇವೆ ಇತ್ಯಾದಿ ಸೇರಿದಂತೆ "ಶಬರಿಮಲೆ ಅಯ್ಯಪ್ಪ ದರ್ಶನ ಹೆಲಿಕಾಪ್ಟರ್ ಸೇವೆ ಪ್ಯಾಕೇಜ್" ಕುರಿತು ತಪ್ಪು ಜಾಹೀರಾತು ಬಿಡುಗಡೆ ಮಾಡಿರುವ ಸಂದರ್ಭವನ್ನು ವಿವರಿಸಲು ಸಂಸ್ಥೆಯ ಪರ ವಕೀಲರು ಅಸಮರ್ಥರಾಗಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.

ಸೇವೆ ಮುಂದುವರೆಸುವುದಿಲ್ಲ ಎಂದು ಸ್ಪಷ್ಟನೆ
ಸಂಸ್ಥೆಯು ಇನ್ಮುಂದೆ ಸೇವೆಯನ್ನು ಮುಂದುವರಿಸುವುದಿಲ್ಲ ಖಚಿತಪಡಿಸಿದ್ದಾರೆ. ಈ ಕುರಿತು ಕ್ರಮ ಕೈಗೊಂಡಿರುವ ವರದಿಗಳನ್ನು ಸಲ್ಲಿಸುವಂತೆ ದೇವಸ್ವಂ ಮಂಡಳಿ, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ನ್ಯಾಯಾಲಯ ಸೂಚನೆ ನೀಡಿದೆ. ವಿಶೇಷ ಭದ್ರತಾ ವಲಯ ಎಂದು ಘೋಷಿಸಲಾದ ಪ್ರದೇಶದಲ್ಲಿ ಹೆಲಿಕಾಪ್ಟರ್ ಸೇವೆಗಳ ಕಾರ್ಯಾಚರಣೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯದಿಂದ ಅಗತ್ಯ ಸೂಚನೆಗಳನ್ನು ಪಡೆಯುವಂತೆ ಭಾರತದ ಡೆಪ್ಯೂಟಿ ಸಾಲಿಸಿಟರ್ ಜನರಲ್ ಅವರಿಗೆ ನಿರ್ದೇಶನ ನೀಡಿದೆ. ಇನ್ನು ನ್ಯಾಯಾಲಯ ಯಾವ ತೀರ್ಪು ಪ್ರಕಟಿಸಲಿದೆ ಅನ್ನುವುದನ್ನು ಕಾದುನೋಡಬೇಕಿದೆ.












Click it and Unblock the Notifications