ಭಾರತದಲ್ಲಿ ಕೊರೊನಾವೈರಸ್ ಲಸಿಕೆ ಕೊರತೆ ಸೃಷ್ಟಿಗೆ ಅಸಲಿ ಕಾರಣ ಯಾರು?
ನವದೆಹಲಿ, ಜುಲೈ 14: ಕೊರೊನಾವೈರಸ್ ಲಸಿಕೆ ಪ್ರಮಾಣದ ಕುರಿತು ಅನಗತ್ಯ ಹೇಳಿಕೆ ನೀಡುವುದರ ಮೂಲಕ ಜನರಲ್ಲಿ ಆತಂಕ ಸೃಷ್ಟಿಸದಂತೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕೊರೊನಾವೈರಸ್ ಲಸಿಕೆ ಲಭ್ಯತೆ ಮತ್ತು ಸರಬರಾಜಿನ ಕುರಿತು ಮನ್ಸುಖ್ ಮಾಂಡವೀಯ ಸರಣಿ ಟ್ವೀಟ್ ಮಾಡಿದ್ದಾರೆ. "ನಾವು ಮೊದಲೇ ಕೊರೊನಾವೈರಸ್ ಲಸಿಕೆ ಲಭ್ಯತೆ ಬಗ್ಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾಹಿತಿ ನೀಡಿದ್ದೆವು. ಹೀಗಿದ್ದರೂ, ಲಸಿಕೆ ವಿತರಣೆ ಹಾಗೂ ನಿರ್ವಹಣೆಯಲ್ಲಿ ಸ್ಥಳೀಯ ಆಡಳಿತ ಮಂಡಳಿ ವೈಫಲ್ಯವನ್ನು ಅನುಭವಿಸಿದೆ," ಎಂದು ದೂಷಿಸಿದ್ದಾರೆ.
ಎಲ್ಲಿದೆಯೋ ಲಸಿಕೆ ಅಣ್ಣ; ಭಾರತದಲ್ಲಿ ಅಂಕಿ-ಸಂಖ್ಯೆಗಳೇ ಬಯಲು ಮಾಡುತ್ತೆ ಸರ್ಕಾರದ ಬಣ್ಣ?
ದೇಶದಲ್ಲಿ ಕೊರೊನಾವೈರಸ್ ಲಸಿಕೆ ಕೊರತೆ ಸೃಷ್ಟಿ ಹಿಂದಿನ ಅಸಲಿ ಕಾರಣವೇನು?. ಸಾರ್ವಜನಿಕರು ಇಂದು ಲಸಿಕೆ ಇಲ್ಲದೇ ಪರದಾಡುತ್ತಿರುವ ಪರಿಸ್ಥಿತಿಯ ಸೃಷ್ಟಿಕರ್ತರು ಯಾರು?. ಕೇಂದ್ರ ಸರ್ಕಾರದ ವೈಫಲ್ಯವೇ ಅಥವಾ ರಾಜ್ಯ ಸರ್ಕಾರಗಳ ನಿರ್ವಹಣೆ ವೈಫಲ್ಯವೇ?. ಲಸಿಕೆ ವಿತರಣೆ ಮತ್ತು ಸರಬರಾಜಿನ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಹೇಳುವುದೇನು ಎಂಬುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.
ಕೇಂದ್ರಕ್ಕೆ ಲಸಿಕೆಗಾಗಿ ರಾಜ್ಯಗಳಿಂದ ಮನವಿ
"ಕೊವಿಡ್-19 ಲಸಿಕೆ ಲಭ್ಯತೆ ಕುರಿತು ಈಗಾಗಲೇ ಹಲವು ರಾಜ್ಯಗಳು ಹಾಗೂ ನಾಯಕರಿಂದ ಮಾಹಿತಿ ಹಾಗೂ ಪತ್ರವನ್ನು ಸ್ವೀಕರಿಸಲಾಗಿದೆ. ಈ ಹಂತದಲ್ಲಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ನಡೆಯಬೇಕಿದೆ. ಇದರ ಹೊರತಾಗಿ ಅನಗತ್ಯ ಹೇಳಿಕೆಗಳನ್ನು ನೀಡುವುದರಿಂದ ಜನರಲ್ಲಿ ಆತಂಕ ಸೃಷ್ಟಿಯಾಗಲಿದೆ," ಎಂದು ಮನ್ಸುಖ್ ಮಾಂಡವೀಯಾ ಟ್ವೀಟ್ ಮಾಡಿದ್ದಾರೆ.
ಜೂನ್ ತಿಂಗಳಿನಲ್ಲೇ ಲಸಿಕೆ ಲಭ್ಯತೆ ಬಗ್ಗೆ ರಾಜ್ಯಗಳಿಗೆ ಮಾಹಿತಿ
ಕೇಂದ್ರ ಸರ್ಕಾರವು ಜುಲೈ ತಿಂಗಳಿನಲ್ಲಿ ಎಷ್ಟು ಡೋಸ್ ಲಸಿಕೆ ಲಭ್ಯವಿರುತ್ತದೆ ಎಂಬುದನ್ನು ಜೂನ್ 19ರಂದೇ ಸ್ಪಷ್ಟವಾಗಿ ತಿಳಿಸಿದೆ. ಇದಾದ ನಂತರದಲ್ಲಿ ಜೂನ್ 27 ಮತ್ತು ಜುಲೈ 13ರಿಂದ ಪ್ರತಿನಿತ್ಯ ರಾಜ್ಯಗಳು ಎಷ್ಟು ಡೋಸ್ ಲಸಿಕೆ ನೀಡುವುದು ಎಂಬುದರ ಬಗ್ಗೆ ತಿಳಿಸಲಾಗಿದೆ. ಜುಲೈ ಮೊದಲ ಎರಡು ವಾರ ಮತ್ತು ನಂತರದ ಎರಡು ವಾರದಲ್ಲಿ ಲಸಿಕೆ ಲಭ್ಯತೆಯ ಪ್ರಮಾಣವನ್ನು ತಿಳಿಸಲಾಗಿದೆ," ಎಂದು ಟ್ವೀಟ್ ಮಾಡಿದ್ದಾರೆ.
ಕೊರೊನಾವೈರಸ್ ಕಥೆ: ಓದಿ ತಿಳಿಯಿರಿ ಸಂಪೂರ್ಣ ಅಂಕಿ-ಸಂಖ್ಯೆ
"ರಾಜ್ಯ ಸರ್ಕಾರಗಳ ವೈಫಲ್ಯವೇ ಲಸಿಕೆ ಕೊರತೆಗೆ ಕಾರಣ"
"ಕೊರೊನಾವೈರಸ್ ಲಸಿಕೆ ಬಗ್ಗೆ ಕೇಂದ್ರ ಸರ್ಕಾರ ಮೊದಲೇ ಮಾಹಿತಿ ನೀಡಿದೆ. ಇದರಿಂದ ರಾಜ್ಯಗಳು ಎಚ್ಚೆತ್ತುಕೊಂಡು ಕಾರ್ಯಯೋಜನೆ ರೂಪಿಸಬೇಕಿತ್ತು. ರಾಜ್ಯ ಸರ್ಕಾರಗಳು ಸೂಕ್ತ ರೀತಿ ಲಸಿಕೆ ವಿತರಣೆ ಮಾಡಿದ್ದರೆ ಇಂದು ಸಾರ್ವಜನಿಕರು ಲಸಿಕೆ ಸಮಸ್ಯೆ ಎದುರಿಸುವ ಪ್ರಮೇಯವೇ ಇರುತ್ತಿರಲಿಲ್ಲ," ಎಂದು ಟ್ವೀಟ್ ಮಾಡಿದ್ದಾರೆ.
ಲಸಿಕೆ ನೀಡುವಂತೆ ಪ್ರಧಾನಿಗೆ ಪತ್ರ ಬರೆದ ಸಿಎಂ ಸ್ಟಾಲಿನ್
ತಮಿಳುನಾಡು ಮತ್ತು ದೆಹಲಿ ಸರ್ಕಾರ ಸೇರಿದಂತೆ ಹಲವು ರಾಜ್ಯಗಳು ಲಸಿಕೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಹಿನ್ನೆಲೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚಿಗಷ್ಟೇ ಪ್ರಧಾನಿಗೆ ಪತ್ರ ಬರೆದ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್, ದಕ್ಷಿಣದ ರಾಜ್ಯಗಳಲ್ಲಿ ಕೊವಿಡ್-19 ಲಸಿಕೆ ಖಾಲಿಯಾಗಿದೆ. ತಕ್ಷಣವೇ ಮತ್ತಷ್ಟು ಲಸಿಕೆ ವಿತರಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದರು.
ತಮಿಳುನಾಡಿನಿಂದ 1 ಕೋಟಿ ಡೋಸ್ ಲಸಿಕೆಗೆ ಮನವಿ
ದಕ್ಷಿಣ ಭಾರತದ ರಾಜ್ಯಗಳಲ್ಲಿ ಕೊರೊನಾವೈರಸ್ ಲಸಿಕೆಗೆ ತೀವ್ರ ಕೊರತೆ ಸೃಷ್ಟಿಯಾಗಿದೆ. ಕೇಂದ್ರ ಸರ್ಕಾರದಿಂದ 1 ಕೋಟಿ ಡೋಸ್ ಲಸಿಕೆ ಸರಬರಾಜು ಮಾಡಲು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಮನವಿ ಮಾಡಿಕೊಂಡಿದ್ದರು. ಅಲ್ಲದೇ ಪ್ರತಿನಿತ್ಯ 1,000 ಅರ್ಹ ಫಲಾನುಭವಿಗಳ ಪೈಕಿ ತಮಿಳುನಾಡಿನಲ್ಲಿ ಕೇವಲ 302 ಮಂದಿಗೆ ಲಸಿಕೆ ನೀಡಲು ಸಾಧ್ಯವಾಗುತ್ತಿದೆ. ಗುಜರಾತಿಗೆ ಹೋಲಿಕೆ ಮಾಡಿದರೆ ಅಲ್ಲಿ 533 ಫಲಾನುಭವಿಗಳಿಗೆ ಲಸಿಕೆ ನೀಡಲಾಗುತ್ತಿದೆ. ಕರ್ನಾಟಕದಲ್ಲಿ 493 ಜನರಿಗೆ ಹಾಗೂ ರಾಜಸ್ಥಾನದಲ್ಲಿ 446 ಮಂದಿಗೆ ಲಸಿಕೆ ನೀಡುವುದಕ್ಕೆ ಸಾಧ್ಯವಾಗುತ್ತಿದೆ ಎಂದು ಉಲ್ಲೇಖಿಸಿದ್ದರು.
ಸ್ಪುಟ್ನಿಕ್-ವಿ ಸೂಪರ್: ಕೊರೊನಾವೈರಸ್ ಡೆಲ್ಟಾ ರೂಪಾಂತರಕ್ಕೆ ರಷ್ಯಾ ಲಸಿಕೆಯೇ ಮದ್ದು!?
4-5 ರಾಜ್ಯಗಳಲ್ಲಿ ಲಸಿಕೆ ಇಲ್ಲದೇ ಕೇಂದ್ರಗಳಿಗೆ ಬೀಗ
ಮಂಗಳವಾರವಷ್ಟೇ ದೆಹಲಿಯಲ್ಲಿ ಕೊವಿಶೀಲ್ಡ್ ಲಸಿಕೆ ಕೊರತೆಯನ್ನು ದೊಡ್ಡದಾಗಿ ಬಿಂಬಿಸಲಾಗಿತ್ತು. ಇದರ ಜೊತೆ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಪಂಜಾಬ್ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಲಸಿಕೆ ಇಲ್ಲದೇ ವಿತರಣೆ ಕೇಂದ್ರಗಳನ್ನು ಬಂದ್ ಮಾಡುವುದಾಗಿ ಹೇಳಿದ್ದವು. ಈ ಹಿನ್ನೆಲೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ, "ಕಳೆದ ಜೂನ್ ತಿಂಗಳಿನಲ್ಲಿ 11.46 ಕೋಟಿ ಡೋಸ್ ಲಸಿಕೆ ಸರಬರಾಜು ಮಾಡಲಾಗಿದ್ದು, ಅದಕ್ಕಿಂತ ಹೆಚ್ಚು ಅಂದರೆ ಜುಲೈ ತಿಂಗಳಿನಲ್ಲಿ 13.5 ಕೋಟಿ ಡೋಸ್ ಲಸಿಕೆ ಪೂರೈಕೆ ಮಾಡಲಾಗಿದೆ," ಎಂದು ಸ್ಪಷ್ಟಪಡಿಸಿದ್ದಾರೆ.
"ರಾಜ್ಯ ಸರ್ಕಾರಗಳನ್ನು ದೂಷಿಸಿದ ಮನ್ಸುಖ್ ಮಾಂಡವೀಯಾ"
"ಕೇಂದ್ರ ಸರ್ಕಾರದಿಂದ ಮೊದಲೇ ಮಾಹಿತಿ ನೀಡಿದ್ದರೂ, ನಾವು ಇಂದಿಗೂ ಲಸಿಕೆ ಕೇಂದ್ರಗಳಲ್ಲಿನ ಉದ್ದನೆಯ ಸಾಲು ಹಾಗೂ ನಿರ್ವಹಣೆಯ ವೈಫಲ್ಯವನ್ನು ನೋಡುತ್ತಿದ್ದೇವೆ. ಸಮಸ್ಯೆಗೆ ಕಾರಣವೇನು, ಇಂದಿನ ಈ ಪರಿಸ್ಥಿತಿ ಸೃಷ್ಟಿಗೆ ಯಾರು ಹೊಣೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದರ ಹೊರತಾಗಿಯೂ ರಾಜ್ಯ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 1.54 ಕೋಟಿ ಡೋಸ್ ಲಸಿಕೆ ಬಾಕಿ ಉಳಿದುಕೊಂಡಿದೆ," ಎಂದು ಸಚಿವ ಮನ್ಸುಖ್ ಮಾಂಡವೀಯಾ ಸ್ಪಷ್ಟಪಡಿಸಿದ್ದಾರೆ.
ದೇಶದಲ್ಲಿ 38.76 ಕೋಟಿ ಜನರಿಗೆ ಕೊರೊನಾವೈರಸ್ ಲಸಿಕೆ
ಕೊರೊನಾವೈರಸ್ ಲಸಿಕೆ ಅಭಿಯಾನ ಆರಂಭವಾಗಿ 179 ದಿನಗಳಲ್ಲಿ 38.76 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಲಸಿಕೆ ವಿತರಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 37,14,441 ಜನರಿಗೆ ಲಸಿಕೆ ನೀಡಲಾಗಿದ್ದು, ಈವರೆಗೂ 38,76,97,935 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ನೀಡಲಾಗಿದೆ. 18 ರಿಂದ 44 ವಯೋಮಾನದ 15,49,982 ಜನರಿಗೆ ಮೊದಲ ಡೋಸ್ ಹಾಗೂ 1,19,121 ಮಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ದೇಶದಲ್ಲಿ ಇದೇ ವಯೋಮಾನದ 11,59,50,619 ಫಲಾನುಭವಿಗಳಿಗೆ ಮೊದಲ ಡೋಸ್ ಹಾಗೂ 40,19,089 ಜನರು ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.