ಹರಿಯಾಣದಲ್ಲಿ 'ರೈತರ ತಲೆ ಒಡಿಯಿರಿ' ಎಂದಿದ್ದ ಅಧಿಕಾರಿ ವರ್ಗಾವಣೆ
ನವದೆಹಲಿ, ಸೆಪ್ಟೆಂಬರ್ 02: ಹರಿಯಾಣದಲ್ಲಿ ಪ್ರತಿಭಟನಾನಿರತ ''ರೈತರ ತಲೆಗಳನ್ನು ಒಡೆದು ಹಾಕಿರಿ'' ಎಂದು ಹಿಂಸಾತ್ಮಾಕವಾಗಿ ಪೊಲೀಸರಿಗೆ ಆದೇಶವನ್ನು ನೀಡಿದ್ದ ಕರ್ನಾಲ್ ಉಪವಿಭಾಗಾಧಿಕಾರಿ ಆಯುಷ್ ಸಿನ್ಹಾ ಸೇರಿದಂತೆ ಸುಮಾರು 19 ಐಎಎಸ್ ಅಧಿಕಾರಿಗಳನ್ನು ಹರಿಯಾಣ ಸರ್ಕಾರ ವರ್ಗಾವಣೆ ಮಾಡಿದೆ.
ಉಪವಿಭಾಗಾಧಿಕಾರಿ ಆಯುಷ್ ಸಿನ್ಹಾ ಈಗ ನಾಗರಿಕ ಸಂಪನ್ಮೂಲ ಮಾಹಿತಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯಾಗಲಿದ್ದಾರೆ ಎಂದು ಹರಿಯಾಣದ ಸರ್ಕಾರದ ಆದೇಶ ಹೇಳಿದೆ. ಹಾಗೆಯೇ ಆಯುಷ್ ಸಿನ್ಹಾರನ್ನು ಖಾಲಿ ಇರುವ ಹುದ್ದೆಗೆ ವರ್ಗಾಯಿಸಲಾಗಿದೆ ಎಂದು ಸರ್ಕಾರದ ಆದೇಶ ತಿಳಿಸಿದೆ.
ಹರಿಯಾಣ ರೈತರ ಮೇಲೆ ಲಾಠಿ ಚಾರ್ಜ್: 'ಮತ್ತೆ ರಕ್ತ ಹರಿದಿದೆ' ಎಂದ ರಾಹುಲ್ ಗಾಂಧಿ
"ಹರಿಯಾಣ ಕರ್ನಾಲ್ ಜಿಲ್ಲೆಯ ಘರೌದಾ ಟೋಲ್ ಪ್ಲಾಜಾದ ಬಳಿ ಪ್ರತಿಭಟನಾನಿರತ ರೈತರ ಮೇಲೆ ದಯೆದಾಕ್ಷಿಣ್ಯ ಇರದಂತೆ ಲಾಠಿ ಬೀಸಿರಿ. ನಿಯಮಗಳನ್ನು ಉಲ್ಲಂಘಿಸಿದವರ ತಲೆಗಳನ್ನು ಒಡೆದು ಹಾಕಿರಿ," ಎಂದು ಉಪ ವಿಭಾಗಾಧಿಕಾರಿ ಆಯುಷ್ ಸಿನ್ಹಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.
ಈ ಹಿನ್ನೆಲೆ ಹರಿಯಾಣದಲ್ಲಿ ಪ್ರತಿಭಟನಾನಿರತ ರೈತರ ತಲೆಗಳನ್ನು ಒಡೆದು ಹಾಕಿರಿ ಎಂದು ಪೊಲೀಸರಿಗೆ ಆದೇಶಿಸಿದ ಸರ್ಕಾರಿ ಅಧಿಕಾರಿ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಉಪ ಮುಖ್ಯಮಂತ್ರಿ ದುಶ್ಯಂತ್ ಚೌತಾಲಾ ಎಚ್ಚರಿಕೆ ನೀಡಿದ್ದರು. ಹಾಗೆಯೇ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಉಪ ವಿಭಾಗಾಧಿಕಾರಿ ಆಯುಷ್ ಸಿನ್ಹಾರ ಈ ಹೇಳಿಕೆಯು ತಪ್ಪು ಎಂದು ಹೇಳಿದ್ದರು. ಆದರೆ ಪೊಲೀಸರ ಕ್ರಮವನ್ನು ಮಾತ್ರ ಸಮರ್ಥನೆ ಮಾಡಿದ್ದರು.
ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದಲ್ಲಿ ನಡೆದ ಸಭೆಯ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ರೈತರು ರಾಜ್ಯ ಬಿಜೆಪಿ ಮುಖ್ಯಸ್ಥ ಒಪಿ ಧಂಕರ್ರನ್ನು ತಡೆಯಲು ಯತ್ನ ಮಾಡಿದ ಸಂದರ್ಭದಲ್ಲಿ ರೈತರ ಮೇಲೆ ಬಸ್ತಾರಾ ಟೋಲ್ ಪ್ಲಾಜಾದ ಬಳಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಹಂಚಲಾದ ಚಿತ್ರದಲ್ಲಿ ರೈತರು ರಕ್ತಸಿಕ್ತ ಬಟ್ಟೆಯಲ್ಲಿ ಇರುವುದು ಕಂಡು ಬಂದಿದೆ. ಒಂದು ವೀಡಿಯೋದಲ್ಲಿ ಇಬ್ಬರು ಪೋಲಿಸರು ರಕ್ತಸಿಕ್ತ ಬಟ್ಟೆಯಲ್ಲಿದ್ದ ರೈತನನ್ನು ಎಳೆದಾಡುತ್ತಿರುವುದು ತೋರಿಸಿದೆ.
ಹರಿಯಾಣದಲ್ಲಿ ಪ್ರತಿಭಟನಾನಿರತ 'ರೈತರ ತಲೆ ಒಡಿಯಿರಿ' ಎಂದ ಅಧಿಕಾರಿ ವಿರುದ್ಧ ಕ್ರಮ
ಈ ಲಾಠಿ ಚಾರ್ಜ್ ಅನ್ನು ಹಲವಾರು ವಿರೋಧ ಪಕ್ಷದ ನಾಯಕರುಗಳು ಖಂಡಿಸಿದ್ದರು. ಕಾಂಗ್ರೆಸ್ನ ಹರಿಯಾಣ ಮುಖ್ಯಸ್ಥರು ವೈರಲ್ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ವೈರಲ್ ವಿಡಿಯೋದಲ್ಲಿ ಕರ್ನಾಲ್ನ ಉಪವಿಭಾಗಾಧಿಕಾರಿ ಆಯುಷ್ ಸಿನ್ಹಾ ಅವರ (ರೈತರ) ತಲೆಯನ್ನು ಹೊಡೆಯಿರಿ" ಎಂದು ಪೊಲೀಸರಿಗೆ ಹೇಳುವುದು ಕಂಡು ಬಂದಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಅಧಿಕಾರಿಯ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಬಿಜೆಪಿ ಸಂಸದ ವರುಣ್ ಗಾಂಧಿ ಸೇರಿದಂತೆ ಹಲವು ರಾಜಕೀಯ ಮುಖಂಡರು ಹಾಗೂ ರೈತರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದರು. ಅಧಿಕಾರಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದರು. ಹಾಗೆಯೇ ಹರಿಯಾಣದಲ್ಲಿ ಪ್ರತಿಭಟನಾನಿರತ ರೈತರ ತಲೆಗಳನ್ನು ಒಡೆದು ಹಾಕಿರಿ ಎಂದು ಪೊಲೀಸರಿಗೆ ಆದೇಶಿಸಿದ ಸರ್ಕಾರಿ ಅಧಿಕಾರಿ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಉಪ ಮುಖ್ಯಮಂತ್ರಿ ದುಶ್ಯಂತ್ ಚೌತಾಲಾ ಎಚ್ಚರಿಕೆ ನೀಡಿದ್ದರು.
(ಒನ್ ಇಂಡಿಯಾ ಸುದ್ದಿ)