Haryana Assembly Election 2024 Results: ಹರಿಯಾಣ ಸಿಎಂ ಆಯ್ಕೆ ಕುಮಾರಿ ಸೆಲ್ಜಾ ಹೇಳುವುದೇನು?
ನವದೆಹಲಿ, ಅಕ್ಟೋಬರ್ 08: ಹರಿಯಾಣ ವಿಧಾನಸಭೆ ಚುನಾವಣೆ 2024ರ ಮತ ಎಣಿಕೆ ನಡೆಯುತ್ತಿದೆ. 90 ಸದಸ್ಯ ಬಲದ ವಿಧಾನಸಭೆಗೆ ಒಂದೇ ಹಂತದಲ್ಲಿ ಅಕ್ಟೋಬರ್ 5ರ ಶನಿವಾರ ಮತದಾನ ನಡೆದಿತ್ತು. ಮಂಗಳವಾರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿದೆ. ಸದ್ಯದ ಮಾಹಿತಿ ಪ್ರಕಾರ ಕಾಂಗ್ರೆಸ್ 35 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದೆ. ಬಿಜೆಪಿ 49 ಸೀಟುಗಳಲ್ಲಿ ಮುನ್ನಡೆಯಲ್ಲಿದೆ.
ಹರಿಯಾಣ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 46. ಸಮಯ 11.05ರ ಮಾಹಿತಿಯಂತೆ ಬಿಜೆಪಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ ದಾಟಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಐಎನ್ಎಲ್ಡಿ 1, ಬಿಎಸ್ಪಿ 1 ಮತ್ತು ಇತರರು 4 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದಾರೆ.

ಮುಖ್ಯಮಂತ್ರಿ ಯಾರು?; ಹರಿಯಾಣ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದರೆ ಮುಖ್ಯಮಂತ್ರಿ ಯಾರು? ಎಂಬುದು ಎಲ್ಲರ ಪ್ರಶ್ನೆ. ಕುಮಾರಿ ಸೆಲ್ಜಾ, ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ರಾಷ್ಟ್ರೀಯ ವಾಹಿನಿಗಳ ಜೊತೆ ಈ ಕುರಿತು ಕುಮಾರಿ ಸೆಲ್ಜಾ ಮಾತನಾಡಿದ್ದಾರೆ.
ಕುಮಾರಿ ಸೆಲ್ಜಾ ಮಾತನಾಡಿ, "ಹರಿಯಾಣದ ಜನರಿಗೆ ತಮ್ಮ ಭವಿಷ್ಯದ ಬಗ್ಗೆ ಕಾಳಜಿ ಇದೆ. ಅದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದಾರೆ. ಹೌದು ಮುಖ್ಯಮಂತ್ರಿ ಹುದ್ದೆಗೆ ನಾನು ಸೇರಿ ಹಲವು ಆಕಾಂಕ್ಷಿಗಳಿದ್ದಾರೆ. ಈ ಕುರಿತು ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ" ಎಂದು ಹೇಳಿದ್ದಾರೆ.
"ರಾಜ್ಯದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡಾ ಯಾತ್ರೆ ಕಾರ್ಯಕರ್ತರನ್ನು ಒಂದುಗೂಡಿಸಿದೆ. ಬಿಜೆಪಿ ಆಡಳಿತದಿಂದ ಬೇಸತ್ತಿರುವ ಜನರು ಪಕ್ಷವನ್ನು ಬೆಂಬಿಸಿದ್ದಾರೆ" ಎಂದರು.
"ಚುನಾವಣೆ ನಡೆಯುವಾಗ ಆಡಳಿತ ವಿರೋಧಿ ಅಲೆ ಏಳುವುದು ಸಾಮಾನ್ಯವಾಗಿದೆ. ಬಿಜೆಪಿ ಆಡಳಿತ ವೈಫಲ್ಯವೂ ಇದೆ. ಅಂಚೆ ಮತಗಳ ಎಣಿಕೆಯಲ್ಲಿ ಕಾಂಗ್ರೆಸ್ ಮುನ್ನಡೆ ಪಡೆದಿತ್ತು. ಈಗ ಬಿಜೆಪಿ ಮುನ್ನೆಡೆ ಪಡೆದುಕೊಂಡಿದೆ" ಎಂದು ಹೇಳಿದರು.
ಐದು ಬಾರಿಯ ಸಂಸದೆ ಕುಮಾರಿ ಸೆಲ್ಜಾ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಮೂರನೇ ಬಾರಿಗೆ ಸಿಎಂ ಆಗಲು ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಬಯಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸರ್ಕಾರ ರಚನೆ ಮಾಡುವ ಮ್ಯಾಜಿಕ್ ನಂಬರ್ ಗಳಿಸಲಿದೆಯೇ? ಎಂಬುದು ಸದ್ಯದ ಪ್ರಶ್ನೆ.
ಮುಖ್ಯಮಂತ್ರಿ ಹುದ್ದೆಗೆ ಯಾರು ಸೂಕ್ತ ಎಂದು ಚುನಾವಣೋತ್ತರ ಸಮೀಕ್ಷೆಯಲ್ಲಿ ಪ್ರಶ್ನಿಸಲಾಗಿತ್ತು. ಭೂಪಿಂದರ್ ಸಿಂಗ್ ಹೂಡಾ ಪರವಾಗಿ ಶೇ 4.9 ಮತ್ತು ಕುಮಾರಿ ಸೆಲ್ಜಾ ಪರವಾಗಿ ಶೇಕಡಾ 9.5 ರಷ್ಟು ಜನರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
"ನಾನು ದಣಿದಿಲ್ಲ, ನಿವೃತ್ತಿಯಾಗಿಲ್ಲ. ಮುಖ್ಯಮಂತ್ರಿ ಬಗ್ಗೆ ಪಕ್ಷದ ಶಾಸಕರು, ಹೈಕಮಾಂಡ್ ನಾಯಕರು ತೀರ್ಮಾನವನ್ನು ಕೈಗೊಳ್ಳುತ್ತಾರೆ" ಎಂದು ಭೂಪಿಂದರ್ ಸಿಂಗ್ ಹೂಡಾ ಹೇಳಿದ್ದಾರೆ.
ಮುಖ್ಯಮಂತ್ರಿ ಹೆಸರನ್ನು ಘೋಷಣೆ ಮಾಡದೇ ಕಾಂಗ್ರೆಸ್ ಪಕ್ಷ ಹರಿಯಾಣದಲ್ಲಿ ಚುನಾವಣೆಯನ್ನು ಎದುರಿಸಿದೆ. ಕುಮಾರಿ ಸೆಲ್ಜಾ ಪಕ್ಷದ ನಾಯಕರಾದ ಪ್ರಿಯಾಂಕಾ ವಾದ್ರಾ ಮತ್ತು ರಾಹುಲ್ ಗಾಂಧಿ ಆಪ್ತರು. ಒಂದು ವೇಳೆ ಪಕ್ಷ ಅಧಿಕಾರಕ್ಕೆ ಬಂದರೆ ಭೂಪಿಂದರ್ ಸಿಂಗ್ ಹೂಡಾ ಅವರನ್ನು ಸಹ ಕಡೆಗಣಿಸಲಾಗದು. ಆದ್ದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಮ್ಯಾಜಿಕ್ ನಂಬರ್ ಪಡೆದರೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಲಿದೆ.












Click it and Unblock the Notifications