Haryana Election India Today Exit Poll Results: ಹರ್ಯಾಣದಲ್ಲಿ ಯಾರಿಗೆ ಗೆಲುವು, ಎಕ್ಸಿಟ್ ಪೋಲ್ ಫಲಿತಾಂಶ
ನವದೆಹಲಿ, ಅಕ್ಟೋಬರ್ 05: ಹರಿಯಾಣ ವಿಧಾನಸಭೆ ಚುನಾವಣೆ 2024ರ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ. 90 ಸದಸ್ಯ ಬಲದ ವಿಧಾನಸಭೆ, ಒಂದೇ ಹಂತದಲ್ಲಿ ಅಕ್ಟೋಬರ್ 5ರ ಶನಿವಾರ ಮತದಾನ ನಡೆದಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 46. ಕಾಂಗ್ರೆಸ್ ಮತ್ತು ಬಿಜೆಪಿ ರಾಜ್ಯದಲ್ಲಿ ಪ್ರಬಲ ಎದುರಾಳಿಗಳು. ಮೂರನೇ ಬಾರಿಗೆ ಅಧಿಕಾರಕ್ಕೆ ಬರುವ ನಿರೀಕ್ಷೆಯಲ್ಲಿಯೇ ಬಿಜೆಪಿ ಚುನಾವಣಾ ಪ್ರಚಾರವನ್ನು ಮಾಡಿದೆ.
ಶನಿವಾರ ಹರಿಯಾಣದಲ್ಲಿ ಸಂಜೆ 5 ಗಂಟೆಯ ವೇಳೆಗೆ ಶೇ 68.83ರಷ್ಟು ಮತದಾನವಾಗಿತ್ತು. ಎಷ್ಟು ಮತದಾನವಾಗಿದೆ? ಎಂಬ ಅಂತಿಮ ಚಿತ್ರಣ ಇನ್ನೂ ಲಭ್ಯವಾಗಬೇಕಿದೆ. ಮತದಾನ ಮುಗಿಯುತ್ತಿದ್ದಂತೆಯೇ ರಾಷ್ಟ್ರೀಯ ವಾಹಿನಿಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶಗಳು ಪ್ರಕಟವಾಗಿವೆ. ರಾಜ್ಯದ ಚುನಾವಣೆಯ ಮತ ಎಣಿಕೆ ಅಕ್ಟೋಬರ್ 8ರ ಮಂಗಳವಾರ ನಡೆಯಲಿದೆ.

2019ರ ವಿಧಾನಸಭೆ ಚುನಾವಣೆಯಲ್ಲಿಯೂ ಬಿಜೆಪಿಗೆ ಬಹುಮತ ಸಿಕ್ಕಲಿಲ್ಲ. ಆದ್ದರಿಂದ ಜೆಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರವನ್ನು ರಚನೆ ಮಾಡಿತು. ಆದರೆ ಈ ಮೈತ್ರಿ 2024ರ ಆರಂಭದಲ್ಲಿ ಮುರಿದು ಬಿತ್ತು. ಆದ್ದರಿಂದ ಈ ಬಾರಿಯ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ.
ಎಕ್ಸಿಟ್ ಪೋಲ್ ಫಲಿತಾಂಶ: ಹರ್ಯಾಣ ವಿಧಾನಸಭೆ ಚುನಾವಣೆ 2024ರ ಕುರಿತು India Today C-Voter ಸಮೀಕ್ಷೆಗಳನ್ನು ನಡೆಸಿವೆ. ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರ ಹಿಡಿಯಲಿದೆ.
ಸಮೀಕ್ಷೆಗಳ ಪ್ರಕಾರ ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷ 50-58 ಸೀಟುಗಳಲ್ಲಿ ಗೆಲ್ಲುವ ಮೂಲಕ ಸ್ಪಷ್ಟ ಬಹುಮತವನ್ನು ಪಡೆದು ಸರ್ಕಾರ ರಚನೆ ಮಾಡಲಿದೆ. ಬಿಜೆಪಿ 20-28 ಸೀಟುಗಳಲ್ಲಿ ಮತ್ತು ಇತರರು 10-16 ಕ್ಷೇತ್ರಗಳಲ್ಲಿ ಜಯಗಳಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಸಮೀಕ್ಷೆಯ ವರದಿಯಂತೆ ಕಾಂಗ್ರೆಸ್ ಶೇ 44ರಷ್ಟು, ಬಿಜೆಪಿ ಶೇ 37ರಷ್ಟು ಮತ್ತು ಇತರರು ಶೇ 19ರಷ್ಟು ಮತಗಳನ್ನು ಪಡೆಯಲಿದ್ದಾರೆ. ಹರಿಯಾಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇತ್ತು. ಚುನಾವಣಾ ಪೂರ್ವ ಸಮೀಕ್ಷೆಗಳು ಸಹ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಲಿವೆ ಎಂದು ಅಂದಾಜಿಸಿದ್ದವು.
ಹರ್ಯಾಣದಲ್ಲಿ ಮುಂದಿನ ಮುಖ್ಯಮಂತ್ರಿ ಯಾರು? ಎಂಬ ಚರ್ಚೆಗಳು ಆರಂಭವಾಗಿವೆ. ಕುಮಾರಿ ಸೆಲ್ಜಾ ಮತ್ತು ಮಾಜಿ ಮುಖ್ಯಮಂತ್ರಿ ಭೂಪೇಂದರ್ ಸಿಂಗ್ ಹೂಡಾ ಹೆಸರು ಕೇಳಿ ಬರುತ್ತಿದೆ. ಎಕ್ಸಿಟ್ ಪೋಲ್ ಫಲಿತಾಂಶಗಳು ಪ್ರಕಟವಾದ ಬಳಿಕ ಮಾತನಾಡಿದ ಭೂಪೇಂದರ್ ಸಿಂಗ್ ಹೂಡಾ, "ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಹೈಕಮಾಂಡ್ ತೀರ್ಮಾನವನ್ನು ಕೈಗೊಳ್ಳಬೇಕು" ಎಂದರು.
ರಣದೀಪ್ ಸಿಂಗ್ ಸುರ್ಜೇವಾಲ, ಭೂಪೇಂದರ್ ಸಿಂಗ್ ಹೂಡಾ ಮತ್ತು ಕುಮಾರಿ ಸೆಲ್ಜಾ ಹೆಸರುಗಳು ಸದ್ಯಕ್ಕೆ ಕೇಳಿ ಬರುತ್ತಿವೆ. ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ 50-58 ಸೀಟುಗಳಲ್ಲಿ ಜಯಗಳಿಸುವ ಮೂಲಕ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚನೆ ಮಾಡಲಿದೆ ಎಂದು ಅಂದಾಜಿಸಲಾಗಿದೆ. ಅಕ್ಟೋಬರ್ 8ರ ಮಂಗಳವಾರ ಮತ ಎಣಿಕೆ ನಡೆಯಲಿದೆ.
"ಚುನಾವಣೋತ್ತರ ಸಮೀಕ್ಷೆಗಿಂತ ಹೆಚ್ಚಿನ ಸ್ಥಾನಗಳಲ್ಲಿ ನಾವು ಜಯಗಳಿಸಲಿದ್ದೇವೆ. ಬಿಜೆಪಿ ಆಡಳಿತದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿತ್ತು. ಭ್ರಷ್ಟಾಚಾರ ಹೆಚ್ಚಾಗಿತ್ತು. ಕ್ರೀಡೆಗೆ ಹೆಚ್ಚಿನ ಆದ್ಯತೆ ದೊರೆಯಲಿಲ್ಲ" ಎಂದು ಭೂಪೇಂದರ್ ಸಿಂಗ್ ಹೂಡಾ ಆರೋಪಿಸಿದ್ದಾರೆ.












Click it and Unblock the Notifications