ಭಾರತದ ಮುಂದಿನ ಅಟಾರ್ನಿ ಜನರಲ್ ಹರೀಶ್ ಸಾಳ್ವೆ?
ಭಾರತದ ಮುಂದಿನ ಅಟಾರ್ನಿ ಜನರಲ್ ಆಗಿ ಹಿರಿಯ ವಕೀಲ ಹರೀಶ್ ಸಾಳ್ವೆ ಅವರನ್ನು ನೇಮಿಸಲು ಕೇಂದ್ರ ಸರ್ಕಾರ ಉತ್ಸುಕವಾಗಿದೆ.
ನವದೆಹಲಿ, ಜೂನ್ 12: ಶೀಘ್ರದಲ್ಲೇ ತೆರವಾಗಲಿರುವ ಭಾರತದ ಅಟಾರ್ನಿ ಜನರಲ್ ಹುದ್ದೆಗೆ ಹಿರಿಯ ವಕೀಲ ಹರೀಶ್ ಸಾಳ್ವೆ ಅವರನ್ನು ನೇಮಿಸಲು ಕೇಂದ್ರ ಸರ್ಕಾರ ಉತ್ಸುಕವಾಗಿದೆ ಎಂದು ಮೂಲಗಳು ತಿಳಿಸಿವೆ.
ಹಾಲಿ ಅಟಾರ್ನಿ ಜನರಲ್ ವಿನೋದ್ ರೋಹಟಗಿ ಅವರು ಮತ್ತೊಂದು ಅವಧಿಗೆ ಈ ಹುದ್ದೆಯಲ್ಲಿ ಮುಂದುವರಿಯಲು ಒಪ್ಪದ ಹಿನ್ನೆಲೆಯಲ್ಲಿ ಸಾಳ್ವೆ ಅವರನ್ನು ಈ ಸ್ಥಾನಕ್ಕೆ ನೇಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಗೂಢಚರ್ಯೆ ಆರೋಪದ ಮೇರೆಗೆ ಪಾಕಿಸ್ತಾನದಲ್ಲಿ ಬಂಧಿತರಾಗಿರುವ ಕುಲಭೂಷಣ್ ಜಾಧವ್ ಅವರ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು ಹರೀಶ್ ಸಾಳ್ವೆ. ಅವರ ಸಮರ್ಥ ವಾದದಿಂದಾಗಿ ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನ ಸರ್ಕಾರ ವಹಿಸಿರುವ ಗಲ್ಲು ಶಿಕ್ಷೆಗೆ ತಡೆಯಾಜ್ಞೆ ಸಿಕ್ಕಿದ್ದನ್ನು ಇಲ್ಲಿ ಸ್ಮರಿಸಬಹುದು.
ಅಂದಹಾಗೆ, ರೋಹಟಗಿ ಅವರನ್ನು ಆ ಹುದ್ದೆಗೆ ನೇಮಿಸುವ ಮುನ್ನ ಸಾಳ್ವೆ ಅವರನ್ನೇ ನೇಮಿಸಲು ಕೇಂದ್ರ ಸರ್ಕಾರ ಹಿಂದೆಯೂ ಪ್ರಯತ್ನ ನಡೆಸಿತ್ತು. ಆದರೆ, ಆಗ ಸಾಳ್ವೆಯವರು ಕಾರಣಾಂತರಗಳಿಂದ ಆ ಹುದ್ದೆಯನ್ನು ಒಪ್ಪಿಕೊಂಡಿರಲಿಲ್ಲ. ಹಾಗಾಗಿ, ಆ ಹುದ್ದೆ ರೋಹಟಗಿ ಪಾಲಾಯಿತು.
ಇದೀಗ, ಸಾಳ್ವೆ ಅವರಿಗೆ ಮತ್ತೊಂದು ಅವಕಾಶ ನೀಡಲು ಕೇಂದ್ರ ನಿರ್ಧರಿಸಿದೆ. ಈಗಲೂ ಅವರು ಒಪ್ಪದಿದ್ದ ಪಕ್ಷದಲ್ಲಿ ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ಅಥವಾ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿರುವ ತುಷಾರ್ ಮೆಹ್ತಾ ಅವರನ್ನು ಪರಿಗಣಿಸಲು ಕೇಂದ್ರ ನಿರ್ಧರಿಸಿದೆ.












Click it and Unblock the Notifications