"ನೀವೆಲ್ಲರೂ ಸಾಯುತ್ತೀರಿ": ಪೊಲೀಸರ ಮೇಲೆ ದ್ವೇಷ ಭಾಷಣದ ಆರೋಪಿ ಶಾಪ
ಹರಿದ್ವಾರ ದ್ವೇಷ ಭಾಷಣ ಪ್ರಕರಣದಲ್ಲಿ ಆರೋಪಿಯಾಗಿರುವ ಧಾರ್ಮಿಕ ಮುಖಂಡರಲ್ಲಿ ಒಬ್ಬರಾದ ಯತಿ ನರಸಿಂಹಾನಂದ್ ಅವರ ಸಹವರ್ತಿ ಆರೋಪಿ ಜಿತೇಂದ್ರ ನಾರಾಯಣ ಸಿಂಗ್ ತ್ಯಾಗಿಯನ್ನು ಬಂಧಿಸಲಾಗಿದೆ. ತ್ಯಾಗಿ ಅವರನ್ನು ಗುರುವಾರ ಹರಿದ್ವಾರ ಜಿಲ್ಲೆಯ ರೂರ್ಕಿಯಲ್ಲಿ ಬಂಧಿಸಲಾಗಿದೆ. ಜಿತೇಂದ್ರ ನಾರಾಯಣ ಸಿಂಗ್ ತ್ಯಾಗಿ ಬಂಧನದ ವೇಳೆ ಯತಿ ನರಸಿಂಹಾನಂದ್ ಅವರು "ತುಮ್ ಸಬ್ ಮಾರೋಗೆ (ನೀವೆಲ್ಲರೂ ಸಾಯುತ್ತೀರಿ)" ಎಂದು ಪೊಲೀಸ್ ಅಧಿಕಾರಿಗಳಿಗೆ ಹೇಳಿರುವುದು ಕಂಡುಬಂದಿದೆ.
ಈ ಹಿಂದೆ ವಸೀಂ ರಿಜ್ವಿ ಎಂದು ಕರೆಯಲ್ಪಡುವ ತ್ಯಾಗಿ, ಧರ್ಮ ಸಂಸದ್ ನಲ್ಲಿ ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ ದ್ವೇಷ ಭಾಷಣ ಪ್ರಕರಣದಲ್ಲಿ ಬಂಧಿತರಾದ ಮೊದಲ ಆರೋಪಿಯಾಗಿದ್ದಾರೆ. ಉತ್ತರಾಖಂಡ ಪೊಲೀಸರು ಯತಿ ನರಸಿಂಹಾನಂದ್ ಮತ್ತು ಇನ್ನೋರ್ವ ಆರೋಪಿ ಸಾಧ್ವಿ ಅನ್ನಪೂರ್ಣ ಅವರಿಗೆ ತಮ್ಮ ಮುಂದೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವ ವಿಡಿಯೋದಲ್ಲಿ ಪೊಲೀಸ್ ಅಧಿಕಾರಿಗಳು ತ್ಯಾಗಿಯನ್ನು ಕಸ್ಟಡಿಗೆ ತೆಗೆದುಕೊಳ್ಳುವಂತೆ ನರಸಿಂಹಾನಂದ್ ಅವರಿಗೆ ಸಹಕರಿಸುವಂತೆ ವಿನಂತಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಕಾರಿನಲ್ಲಿ ಕುಳಿತ ಅವರು ತ್ಯಾಗಿಯನ್ನು ಏಕೆ ಬಂಧಿಸಿದ್ದೀರಿ ಎಂದು ಅಧಿಕಾರಿಗಳನ್ನು ಕೇಳುತ್ತಿದ್ದಾರೆ. ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಧಿಸಬೇಕಾಗಿದೆ ಎಂದು ಅಧಿಕಾರಿಗಳು ವಿವರಿಸುತ್ತಾರೆ. "ಮೂರೂ ಪ್ರಕರಣಗಳಲ್ಲಿ ನಾನು ಅವರೊಂದಿಗೆ ಇದ್ದೇನೆ. ಅವನು ಒಬ್ಬನೇ ಮಾಡಿದ್ದಾನೆಯೇ?" ಎಂದು ನರಸಿಂಹಾನಂದರು ಪೊಲೀಸರನ್ನು ಕೇಳುತ್ತಾರೆ.ಈ ವೇಳೆ ತ್ಯಾಗಿ ಬಂಧನಕ್ಕೆ ಅಡ್ಡಿಯನ್ನುಂಟು ಮಾಡಿದ ಯತಿ ಅವರಿಗೆ ಪೊಲೀಸ್ ಅಧಿಕಾರಿಗಳು ಕಾರಿನಿಂದ ಇಳಿಯುವಂತೆ ಕೇಳುತ್ತಾರೆ. ಈ ವೇಳೆ ನರಸಿಂಹಾನಂದರು ಅಚಲವಾಗಿ ಕಾಣಿಸಿಕೊಳ್ಳುತ್ತಾರೆ.
ತ್ಯಾಗಿ ನಮ್ಮ ಬೆಂಬಲದ ಮೇಲೆ ಅವರು ಹಿಂದೂ ಆದರು ಎಂದು ಪೊಲೀಸರ ಮುಂದೆ ಹೇಳಿಕೊಳ್ಳುತ್ತಾರೆ. ಉತ್ತರ ಪ್ರದೇಶ ಶಿಯಾ ಸೆಂಟ್ರಲ್ ವಕ್ಫ್ ಬೋರ್ಡ್ನ ಮಾಜಿ ಅಧ್ಯಕ್ಷ ವಸೀಮ್ ರಿಜ್ವಿ ಕಳೆದ ತಿಂಗಳು ಹಿಂದೂ ಧರ್ಮಕ್ಕೆ ಮತಾಂತರಗೊಂಡರು. ಆಗ ಜಿತೇಂದ್ರ ಸಿಂಗ್ ನಾರಾಯಣ್ ತ್ಯಾಗಿ ಹೆಸರನ್ನು ಪಡೆದರು.
ತ್ಯಾಗಿ ಅವರನ್ನು ರೂರ್ಕಿಯಲ್ಲಿ ಬಂಧಿಸಲಾಗಿದೆ ಎಂದು ಹರಿದ್ವಾರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಯೋಗೇಂದ್ರ ರಾವತ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಅಧಿಕಾರಿಗಳು ತ್ಯಾಗಿ ಬಂಧನಕ್ಕೆ ಒತ್ತಾಯಿಸುತ್ತಿದ್ದಂತೆ, "ತುಮ್ ಸಬ್ ಮಾರೋಗೇ, ಅಪ್ನೆ ಬಚ್ಚೋ ಕೋ ಭೀ...(ನೀವೆಲ್ಲರೂ ಸಾಯುತ್ತೀರಿ, ನಿಮ್ಮ ಮಕ್ಕಳೂ ಸಹ...)" ಎಂದು ಯತಿ ನರಸಿಂಹಾನಂದ್ ಹೇಳುವುದು ಕೇಳಿಬರುತ್ತದೆ. ದ್ವೇಷ ಭಾಷಣ ಪ್ರಕರಣದಲ್ಲಿ ದಾಖಲಾಗಿರುವ ಎಫ್ಐಆರ್ಗಳಲ್ಲಿ ನರಸಿಂಹಾನಂದ, ತ್ಯಾಗಿ ಮತ್ತು ಅನ್ನಪೂರ್ಣ ಸೇರಿದಂತೆ 10ಕ್ಕೂ ಹೆಚ್ಚು ಜನರನ್ನು ಹೆಸರಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡ ಕ್ರಮಗಳ ಕುರಿತು 10 ದಿನಗಳಲ್ಲಿ ಅಫಿಡವಿಟ್ ಸಲ್ಲಿಸುವಂತೆ ಉತ್ತರಾಖಂಡ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಬುಧವಾರ ಸೂಚಿಸಿದ ನಂತರ ಪ್ರಕರಣದಲ್ಲಿ ಮೊದಲ ಬಂಧನವಾಗಿದೆ. ಹರಿದ್ವಾರದಲ್ಲಿ ಡಿಸೆಂಬರ್ 17 ರಿಂದ 19 ರವರೆಗೆ ನಡೆದ ಧರ್ಮ ಸಂಸದ್ನಲ್ಲಿ ಭಾಗವಹಿಸಿದ ಕೆಲವರು ಮುಸ್ಲಿಮರ ವಿರುದ್ಧ ಹೆಚ್ಚು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮುಸ್ಲಿಂ ಸಮುದಾಯ ವಿರುದ್ಧ ದ್ವೇಷದ ಭಾಷಣ ಮಾಡಿ ಮಾರಣಹೋಮಕ್ಕೆ ಪ್ರಚೋದನೆ ನೀಡುವ ಧರ್ಮ ಸಂಸದ್ನಂತ ಕಾರ್ಯಕ್ರಮಗಳನ್ನು ನಿಷೇಧ ಮಾಡಬೇಕು ಎಂದು ಆಗ್ರಹಿಸಿ ಮುಸ್ಲಿಂ ವಿದ್ವಾಂಸರ ಒಕ್ಕೂಟ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ.ಜಮೀಯತ್- ಉಲ್- ಉಲಾಮಾ - ಹಿಂದ್ ಎನ್ನುವ ಮುಸ್ಲಿಂ ನಾಯಕರ ಸಂಘಟನೆ ಈ ಬಗ್ಗೆ ಸೋಮವಾರ ಸರ್ವೋಚ್ಚ ನ್ಯಾಯಾಯಲಕ್ಕೆ ಅರ್ಜಿ ಸಲ್ಲಿಸಿದ್ದು, ಇಂಥ ಕಾರ್ಯಕ್ರಮಗಳನ್ನು ನಿಷೇಧಿಸಬೇಕು. ಹಾಗೂ ದ್ವೇಷ ಭಾಷಣ ಮಾಡುವವರ ವಿರುದ್ಧ ಕಾನೂನು ರಿತ್ಯಾ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದೆ.
ಉತ್ತರಾಖಂಡ ಹರಿದ್ವಾರದಲ್ಲಿ ಇತ್ತೀಚೆಗೆ ನಡೆದ ಧರ್ಮ ಸಂಸದ್ ಕಾರ್ಯಕ್ರಮದಲ್ಲಿ ಮುಸಲ್ಮಾನರ ವಿರುದ್ಧ ದ್ವೇಷ ಭಾಷಣ ನಡೆಸಲಾಗಿತ್ತು. ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ನಾವೆಲ್ಲ ಹೋರಾಡಬೇಕು ಎಂದು ಹೇಳಿ ಪ್ರಚೋದಿಸಲಾಗಿತ್ತು. ಈ ಧರ್ಮ ಸಂಸತ್ ಅನ್ನು ಉಲ್ಲೇಖಿಸಿ ಸುಪ್ರೀಂ ನಲ್ಲಿ ಅರ್ಜಿ ಸಲ್ಲಿಕೆ ಮಾಡಲಾಗಿದೆ.