Breaking: ಜ್ಞಾನವಾಪಿ ವಿವಾದ- ತೀರ್ಪು ಮುಂದೂಡಿದ ನ್ಯಾಯಾಲಯ
ವಾರಣಾಸಿ, ನ. 08: ಜ್ಞಾನವಾಪಿ ಮಸೀದಿ ಆವರಣದಲ್ಲಿ ಶಿವಲಿಂಗ ಪತ್ತೆಯಾಗಿದ್ದು, ಇದಕ್ಕೆ ಪೂಜೆ ಸಲ್ಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿರುವ ವಾರಣಾಸಿಯ ತ್ವರಿತ ನ್ಯಾಯಾಲಯ ಮಂಗಳವಾರ ತೀರ್ಪು ಪ್ರಕಟಿಸಿಲ್ಲ.
ಅರ್ಜಿ ವಿಚಾರಣೆ ನಡೆಸಿದ್ದ ವಾರಣಾಸಿಯ ತ್ವರಿತ ನ್ಯಾಯಾಲಯ ಮಂಗಳವಾರ ತೀರ್ಪು ನೀಡಬೇಕಿತ್ತು. ಆದರೆ, ತೀರ್ಪಿ ದಿನಾಂಕವನ್ನು ಮತ್ತೆ ನವೆಂಬರ್ 14 ಕ್ಕೆ ಮುಂದೂಡಲಾಗಿದೆ.
ಜ್ಞಾನವಾಪಿ ವಿವಾದ: 'ಶಿವಲಿಂಗ' ಕಾರ್ಬನ್ ಡೇಟಿಂಗ್ ಬೇಡ ಎಂದ ವಾರಣಾಸಿ ಕೋರ್ಟ್
ಸ್ವಯಂಭೂ ಜ್ಯೋತಿರ್ಲಿಂಗ ಭಗವಾನ್ ವಿಶ್ವೇಶ್ವರನ ಪ್ರಾರ್ಥನೆಗೆ ತಕ್ಷಣದ ಅನುಮತಿ, ಸಂಪೂರ್ಣ ಜ್ಞಾನವಾಪಿ ಸಂಕೀರ್ಣವನ್ನು ಹಿಂದೂಗಳಿಗೆ ಹಸ್ತಾಂತರಿಸುವುದು ಮತ್ತು ಜ್ಞಾನವಾಪಿ ಸಂಕೀರ್ಣದ ಆವರಣದೊಳಗೆ ಮುಸ್ಲಿಮರ ಪ್ರವೇಶ ನಿಷೇಧಿಸುವುದು ಸೇರಿದಂತೆ ಮೂರು ಪ್ರಮುಖ ಬೇಡಿಕೆಗಳ ಅರ್ಜಿಯನ್ನು ಸಿವಿಲ್ ನ್ಯಾಯಾಧೀಶ ಹಿರಿಯ ವಿಭಾಗ ತ್ವರಿತ ನ್ಯಾಯಾಲಯವು ವಿಚಾರಣೆ ನಡೆಸಿತ್ತು. ಆದರೆ, ತೀರ್ಪು ನೀಡಿಲ್ಲ.
ಹಿಂದೂ ಅರ್ಜಿದಾರರು ವಾರಣಾಸಿ ಜಿಲ್ಲಾ ನ್ಯಾಯಾಲಯದಲ್ಲಿ ಸೆಪ್ಟೆಂಬರ್ 22 ರಂದು ಅರ್ಜಿಯನ್ನು ಸಲ್ಲಿಸಿದ್ದು, ಶಿವಲಿಂಗದಂತಹ ರಚನೆಯ ಕಾರ್ಬನ್ ಡೇಟಿಂಗ್ ಮತ್ತು ಇತರ ವೈಜ್ಞಾನಿಕ ಪರೀಕ್ಷೆಗೊಳಪಡಿಸಲು ಒತ್ತಾಯಿಸಿದ್ದರು. ಮಸೀದಿ ಆವರಣದಲ್ಲಿ ಸಿಕ್ಕಿರುವ ರಚನೆಯು ಕಾರಂಜಿ ಎಂದು ಮುಸ್ಲಿಂ ಅರ್ಜಿದಾರರು ವಾದಿಸಿದ್ದರು.
ಅಕ್ಟೋಬರ್ನಲ್ಲಿ ನಡೆದ ಹಿಂದಿನ ವಿಚಾರಣೆಯ ಸಂದರ್ಭದಲ್ಲಿ, ವಾರಣಾಸಿ ನ್ಯಾಯಾಲಯವು ಶಿವಲಿಂಗದ ವೈಜ್ಞಾನಿಕ ತನಿಖೆಗೆ ಅನುಮತಿ ನೀಡಲು ನಿರಾಕರಿಸಿತ್ತು. ಶಿವಲಿಂಗದ ವೈಜ್ಞಾನಿಕ ತನಿಖೆಗೆ ಅನುಮತಿ ನಿರಾಕರಿಸಿದ ವಾರಣಾಸಿ ನ್ಯಾಯಾಲಯದ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ನ ಮೊರೆ ಹೋಗುವುದಾಗಿ ಹಿಂದೂ ಅರ್ಜಿದಾರರು ಹೇಳಿದ್ದಾರೆ.
ಜ್ಞಾನವಾಪಿ ಪ್ರಕರಣದಲ್ಲಿ ಹಿಂದೂ ಪರ ವಕೀಲ ವಿಷ್ಣು ಜೈನ್, "ಕಾರ್ಬನ್ ಡೇಟಿಂಗ್ ಕೋರುವ ನಮ್ಮ ಬೇಡಿಕೆಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಈ ಆದೇಶದ ವಿರುದ್ಧ ನಾವು ಸುಪ್ರೀಂ ಕೋರ್ಟ್ಗೆ ಹೋಗುತ್ತೇವೆ. ಅಲ್ಲಿ ಅದನ್ನು ಪ್ರಶ್ನಿಸುತ್ತೇವೆ. ನಾನು ಈಗಲೇ ದಿನಾಂಕವನ್ನು ಘೋಷಿಸಲು ಸಾಧ್ಯವಿಲ್ಲ, ಆದರೆ ನಾವು ಶೀಘ್ರದಲ್ಲೇ ಈ ಆದೇಶವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸುತ್ತೇನೆ" ಎಂದಿದ್ದರು.