ವಿದ್ಯಾರ್ಥಿಗಳ ರಕ್ಷಣೆಗೆ ಕ್ರಮಗಳನ್ನು ಸೂಚಿಸಿದ ಸಿಬಿಎಸ್ ಇ
ನವದೆಹಲಿ, ಸೆಪ್ಟೆಂಬರ್ 14: ಗುರುಗ್ರಾಮದ ರಿಯಾನ್ ಶಾಲೆಯಲ್ಲಿ ಇತ್ತೀಚೆಗೆ ನಡೆದಿದ್ದ ಬಾಲಕನ ಹತ್ಯೆ ಪ್ರಕರಣದ ನಂತರ ಎಚ್ಚೆತ್ತ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ ಇ) ಮಂಡಳಿ, ತನ್ನ ಅಧೀನದಲ್ಲಿರುವ ಎಲ್ಲಾ ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಗಾಗಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಅಧಿಸೂಚನೆ ಹೊರಡಿಸಿದೆ.
ಈ ಅಧಿಸೂಚನೆಯಲ್ಲಿ ಕೆಲವಾರು ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಸಿಬಿಎಸ್ ಇ ತಿಳಿಸಿದೆ. ಅದರಂತೆ, ಪ್ರತಿಯೊಂದು ಸಿಬಿಎಸ್ ಇ ಶಾಲೆಗಳಲ್ಲೂ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಸೂಚಿಸಲಾಗಿದೆ.

ಅಲ್ಲದೆ, ಶಾಲೆಗಳಲ್ಲಿ ಸೇವೆ ಸಲ್ಲಿಸುವ ಎಲ್ಲಾ ಸಿಬ್ಬಂದಿಯ ಹಿನ್ನೆಲೆಗಳ ಬಗ್ಗೆ ಪೊಲೀಸರಿಂದ ಕಡ್ಡಾಯವಾಗಿ ಪರಿಶೀಲನೆ ಮಾಡಿಸಬೇಕು. ಇನ್ನು, ಶಾಲೆಗಳಿಗೆ ಹೊರಗಿನ ವ್ಯಕ್ತಿಗಳು ದಾಖಲಾಗದಂತೆ ಸೂಕ್ತ ಬಿಗಿ ಬಂದೋಬಸ್ತ್ ಕೈಗೊಳ್ಳಬೇಕು ಎಂದು ಅದು ತಾಕೀತು ಮಾಡಿದೆ.
ಇತ್ತೀಚೆಗೆ, 2ನೇ ತರಗತಿಯ ಬಾಲಕನೊಬ್ಬ ಹತ್ಯೆಗೊಳಗಾದ ರಿಯಾನ್ ಶಾಲೆಗೆ ಸಿಬಿಎಸ್ ಇ ಯಿಂದ ಐವರು ಸದಸ್ಯರುಳ್ಳ ಸಮಿತಿಯೊಂದು ಆಗಮಿಸಿ, ಶಾಲೆಯಲ್ಲಿನ ಭದ್ರತಾ ಲೋಪಗಳ ಬಗ್ಗೆ ವರದಿ ಸಲ್ಲಿಸಿತ್ತು. ಈ ವರದಿಯ ಆಧಾರದ ಮೇಲೆ ಸಿಬಿಎಸ್ ಇ ಈ ಹೊಸ ಪ್ರಕಟಣೆ ಹೊರಡಿಸಿದೆ.












Click it and Unblock the Notifications