ಸೇತುವೆ ದುರಂತ: ತನಿಖೆಗೆ ಐವರು ಸದಸ್ಯರ ವಿಶೇಷ ತನಿಖಾ ತಂಡ ರಚನೆ
ಅಹಮದಾಬಾದ್, ಅ. 31: ಬ್ರಿಟಿಷರ ಕಾಲದ ಸೇತುವೆ ನವೀಕರಣಗೊಂಡ ಒಂದು ವಾರದಲ್ಲೇ ಕುಸಿದು ಬಿದ್ದ ಪರಿಣಾಮ ಗುಜರಾತ್ನಲ್ಲಿ ಕನಿಷ್ಠ 141 ಮಂದಿ ಸಾವನ್ನಪ್ಪಿದ್ದಾರೆ. ಘಟನೆಯ ತನಿಖೆಗೆ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ.
ಛತ್ ಪೂಜೆ ಸಂಬಂಧಿಸಿದಂತೆ ಕೆಲವು ಆಚರಣೆಗಳನ್ನು ಮಾಡಲು ಮತ್ತು ದೀಪಾವಳಿ ರಜೆಯ ಕಾರಣಕ್ಕೆ ಸುಮಾರು 500 ಜನರು ತೂಗು ಸೇತುವೆಯ ಮೇಲೆ ಜಮಾಯಿಸಿದ್ದರು .ಸುಮಾರು 150 ವರ್ಷಗಳಷ್ಟು ಹಳೆಯದಾದ ಸೇತುವೆಯ ಮೇಲೆ ಹಲವಾರು ಮಹಿಳೆಯರು ಮತ್ತು ಮಕ್ಕಳು ಇದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಗುಜರಾತ್ ಮೊರ್ಬಿ ಸೇತುವೆ ದುರಂತಕ್ಕೆ ಬಿಜೆಪಿ ವಿರುದ್ಧ ಭಾರೀ ಟೀಕೆ
ಕನಿಷ್ಠ 141 ಮಂದಿ ಸಾವನ್ನಪ್ಪಿದ್ದು, ಈವರೆಗೆ ಸುಮಾರು 19 ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ದೋಣಿಗಳನ್ನು ಬಳಸಿ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳದಲ್ಲಿ ಹಾಜರಿರುವ ಗುಜರಾತ್ ಗೃಹ ಖಾತೆ ರಾಜ್ಯ ಸಚಿವ ಹರ್ಷ್ ಸಂಘವಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರವು ಸೇತುವೆ ಕುಸಿತ ಪ್ರಕರಣದ ತನಿಖೆಗಾಗಿ ಸಮಿತಿಯನ್ನು ರಚಿಸಿದೆ ಎಂದು ಹೇಳಿದ್ದಾರೆ.
ನಿನ್ನೆಯೇ ಅಹಮದಾಬಾದ್ನಿಂದ ತೆರಳುವ ವೇಳೆ ಸಿಎಂ ಹೈಪವರ್ ಕಮಿಟಿಯನ್ನು ರಚಿಸಿದ್ದಾರೆ. ಘಟನೆಯ ತನಿಖೆಗಾಗಿ ಐವರು ಸದಸ್ಯರ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಲಾಗಿದೆ. ಸೇತುವೆ ಕುಸಿತದಲ್ಲಿ ಎಫ್ಐಆರ್ ಅನ್ನು ಸೆಕ್ಷನ್ 304 (ಕೊಲೆಗೆ ಸಮನಾಗಿರುವುದಿಲ್ಲ), 308 (ಸಾವಿಗೆ ಕಾರಣವಾಗುವ ಉದ್ದೇಶಪೂರ್ವಕ ಕೃತ್ಯ) ಮತ್ತು 114 (ಅಪರಾಧ ನಡೆದಾಗ ಕುಮ್ಮಕ್ಕು ನೀಡುವವರು) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಘಟನೆಗೆ ಯಾರು ಜವಾಬ್ದಾರರು ಎಂಬುದನ್ನು ಸಮಿತಿ ಕಂಡುಹಿಡಿಯಲಿದೆ ಎಂದು ಹರ್ಷ್ ಸಂಘವಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹರ್ಷ ಸಾಂಘವಿ, 'ಘಟನೆಯಲ್ಲಿ ಇಲ್ಲಿಯವರೆಗೆ 132 ಜನರು ಸಾವನ್ನಪ್ಪಿದ್ದಾರೆ. ಭಾನುವಾರ ಸಂಜೆ 6.30 ರ ಸುಮಾರಿಗೆ ಸೇತುವೆ ಕುಸಿದಿದೆ. ಪ್ರಮುಖ ಪ್ರವಾಸಿ ಆಕರ್ಷಣೆಯಾಗಿರುವ ಸೇತುವೆ ಮೇಲೆ ದೀಪಾವಳಿ ರಜೆ ಮತ್ತು ಭಾನುವಾರದ ಕಾರಣ ಪ್ರವಾಸಿಗರ ನೂಕುನುಗ್ಗಲು ಇತ್ತು. ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಪ್ರಧಾನಿ ಮೋದಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ" ಎಂದಿದ್ದಾರೆ.