ಸಂಘಟನಾ ಚತುರ, ಶುದ್ಧಹಸ್ತ, ಅಮಿತ್ ಆಪ್ತ ವಿಜಯ್ ರೂಪಾನಿ!
ಅಹಮದಾಬಾದ್, ಡಿಸೆಂಬರ್ 22: ಗುಜರಾತಿನಲ್ಲಿ ಮತ್ತೊಮ್ಮೆ ರೂಪಾನಿ ವಿಜಯೋತ್ಸವಕ್ಕೆ ನಾಂದಿ ಹಾಡಲಾಗಿದೆ. ಗುಜರಾತಿನಲ್ಲಿ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಇದ್ದ ಗೊಂದಲ ನಿವಾರಣೆಯಾಗಿದೆ. ವಿಜಯ್ ರೂಪಾನಿ ಮತ್ತೊಂದು ಅವಧಿಗೆ ಮುಖ್ಯಮಂತ್ರಿಯಾಗಿ ಆಯ್ಕೆ ಯಾಗಿದ್ದಾರೆ.
ಗುಜರಾತ್ -ಹಿಮಾಚಲ: ಯಾರು ಗೆದ್ದರು? ಯಾರು ಬಿದ್ದರು?
ವಿಜಯ್ ರೂಪಾನಿ ಮುಖ್ಯಮಂತ್ರಿ ಹಾಗೂ ನಿತಿನ್ ಪಟೇಲ್ ಅವರು ಉಪ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ.ಈ ಮೂಲಕ, ಉತ್ತರಪ್ರದೇಶ ಮಾದರಿಯಲ್ಲಿ ಇಬ್ಬರು ಡಿಸಿಎಂ ಆಯ್ಕೆಯಾಗಲಿದ್ದಾರೆ ಎಂಬ ಸುದ್ದಿಗೆ ಬಿಜೆಪಿ ಗುದ್ದು ನೀಡಿದೆ.
ಜೈನ್ ಬನಿಯಾ ಕುಟುಂಬದ ವಿಜಯ್ ರೂಪಾನಿ ಅವರು ಕಲಾ ವಿಭಾಗದಲ್ಲಿ ಪದವೀಧರರಾಗಿದ್ದು, ಎಲ್ಎಲ್ ಬಿ ಕೂಡಾ ಮಾಡಿದ್ದಾರೆ.
ವಿಜಯ್ ರೂಪಾನಿ ವ್ಯಕ್ತಿ ಚಿತ್ರ: ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲು ಸೇರಿದ್ದ ವಿಜಯ್ ರೂಪಾನಿ ಅವರು ವಿದ್ಯಾರ್ಥಿ ಜೀವನದಲ್ಲಿ ಸಂಘಟನಾ ಚತುರ ಎನಿಸಿದ್ದಾರೆ. ಗುಜರಾತಿನ ಈ ಹಿಂದಿನ ಮುಖ್ಯಮಂತ್ರಿಗಳಾದ ಕೇಶುಭಾಯಿ ಪಟೇಲ್, ನರೇಂದ್ರ ಮೋದಿ, ಅನಂದಿಬೆನ್ ಪಟೇಲ್ ಅವರ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಯಾವುದೇ ಹಗರಣಗಳಲ್ಲಿ ರೂಪಾನಿ ಹೆಸರು ಕೇಳಿ ಬಂದಿಲ್ಲ.
ವಿಜಯ್ ರೂಪಾನಿ ಅವರು ಗುಜರಾತ್ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ, ಸಂಸದರಾಗಿ ಕರ್ತವ್ಯ ನಿರ್ವಹಿಸಿದ್ದರು. ಆಗಸ್ಟ್ 3ರಂದು ವಿಜಯ್ ರಮಣಿಕ್ ಲಾಲ್ ರೂಪಾನಿ ಅವರ 61ನೇ ಹುಟ್ಟುಹಬ್ಬ.
ರಾಜ್ ಕೋಟ್ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು
ಗುಜರಾತಿನ ಹಾಲಿ ಸಿಎಂ ವಿಜಯ್ ರೂಪನಿ ಅವರು ಮೋದಿ ಅವರು ಪ್ರಪ್ರಥಮ ಬಾರಿಗೆ ಚುನಾವಣೆ ಎದುರಿಸಿದ್ದ ರಾಜ್ ಕೋಟ್ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. 52,155 ಮತಗಳನ್ನು ವಿಜಯ್ ಗಳಿಸಿದರು. ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ, 141 ಕೋಟಿ ಆಸ್ತಿ ಹೊಂದಿರುವ ಇಂದ್ರನೀಲ್ ರಾಜ್ಯಗುರು ಅವರು 29,000 ಮತಗಳನ್ನು ಪಡೆದು ಎರಡನೇ ಸ್ಥಾನ ಗಳಿಸಿತು.
ಘೋಷಿತ ಆಸ್ತಿಯ ಮೌಲ್ಯ ಏರಿಕೆ
ರುಪಾನಿ ಅವರ ಘೋಷಿತ ಆಸ್ತಿಯ ಮೌಲ್ಯ 2017ರಲ್ಲಿ 9.09 ಕೋಟಿ ರು ನಷ್ಟಿದೆ. 2014ರಲ್ಲಿ ರುಪಾನಿ ಘೋಷಿಸಿದ್ದ ಆಸ್ತಿಗೆ ಹೋಲಿಸಿದರೆ ಆಸ್ತಿಯಲ್ಲಿ ಶೇ 21ರಷ್ಟು ಹೆಚ್ಚಳವಾಗಿದೆ.
18 ಲಕ್ಷ ರು ಮೌಲ್ಯದ ಮನೆ ಹೊಂದಿದ್ದಾರೆ. ಯಾವುದೇ ಕೃಷಿ ಭೂಮಿ, ವಾಣಿಜ್ಯ ಕಟ್ಟಡಗಳನ್ನು ತಮ್ಮ ಹೆಸರಿನಲ್ಲಿ ಅಥವಾ ಪತ್ನಿ ಹೆಸರಿನಲ್ಲಿ ವಿಜಯ್ ಅವರು ಹೊಂದಿಲ್ಲ. 2014ರಲ್ಲಿ ನೀಡಿದ ಮಾಹಿತಿಯಂತೆ ಯಾವುದೇ ಸಿವಿಲ್ ವ್ಯಾಜ್ಯಗಳು ಇಲ್ಲ.
ವೃತ್ತಿ ಬದುಕಿನ ಹೆಜ್ಜೆಗಳು
1971ರಲ್ಲಿ ಆರೆಸ್ಸೆಸ್ ಹಾಗೂ ಜನ ಸಂಘ್ ಸೇರಿದ ರೂಪಾನಿ ಅವರು ಬಿಜೆಪಿ ನಿಷ್ಠಾವಂತರಾಗಿದ್ದಾರೆ. ರಾಜ್ ಕೋಟ್ ನಲ್ಲಿ ಕಾರ್ಪೊರೇಟರ್ ಆಗಿ ಕಾರ್ಯನಿರ್ವಹಿಸಿದ್ದು, ಮೇಯರ್, ರಾಜ್ಯಸಭಾ ಸದಸ್ಯರಾಗಿ ಅನುಭವ ಹೊಂದಿದ್ದಾರೆ. ಕೇಶುಭಾಯಿ ಪಟೇಲ್ ಅವರು ಸಿಎಂ ಆಗಿದ್ದಾಗ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದರು. ನರೇಂದ್ರ ಮೋದಿ ಅವರು ಸಿಎಂ ಆಗಿದ್ದಾಗ ಬಿಜೆಪಿ ಗುಜರಾತ್ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ಆರ್ಥಿಕ ಸಮಿತಿ ಮುಖ್ಯಸ್ಥರಾಗಿದ್ದರು.
ಚುನಾವಣೆಯಲ್ಲಿ ಗೆಲುವಿನ ನಗೆ
ರಾಜ್ ಕೋಟ್ ನ ಪಶ್ಚಿಮ ಕ್ಷೇತ್ರಕ್ಕೆ ವಜುಭಾಯಿ ವಾಲಾ ಅವರು ರಾಜೀನಾಮೆ ನೀಡಿ ಕರ್ನಾಟಕದ ರಾಜ್ಯಪಾಲರಾದ ಮೇಲೆ ಇದೇ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಿ, ಮೊದಲ ಗೆಲುವು ಸಾಧಿಸಿದರು. 2014ರಲ್ಲಿ ಶಾಸಕರಾದರು. ಆಗಸ್ಟ್ 05,2016ರಂದು ಸಿಎಂ ಆಗಿ ಆಯ್ಕೆಯಾಗುವುದಕ್ಕೂ ಮುನ್ನ ಸಾರಿಗೆ, ಕಾರ್ಮಿಕ, ಜಲ ಸಂಪನ್ಮೂಲ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2017ರ ಅಸೆಂಬ್ಲಿ ಚುನಾವಣೆಯಲ್ಲಿ ರಾಜ್ ಕೋರ್ಟ್ ಪಶ್ಚಿಮ ಕ್ಷೇತ್ರದಿಂದಲೇ ಗೆಲುವು ಸಾಧಿಸಿದರು.