ಬೆಂಗಳೂರು ರೆಸಾರ್ಟಿಗೆ ಬಂದಿದ್ದ ಗುಜರಾತ್ ಶಾಸಕರು ಚುನಾವಣೆ ಗೆದ್ರಾ?
ಇಡೀ ದೇಶದ ಗಮನವನ್ನು ತನ್ನತ್ತ ಸೆಳೆದಿದ್ದ ಗುಜರಾತ್ ರಾಜ್ಯಸಭಾ ಚುನಾವಣೆಯ ವೇಳೆ, ನಡೆದಿದ್ದ ರೆಸಾರ್ಟ್ ರಾಜಕಾರಣದ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ. ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಅವರನ್ನು ಸೋಲಿಸಲೇ ಬೇಕೆಂದು ಹಠಕ್ಕೆ ಬಿದ್ದಿದ್ದ ಬಿಜೆಪಿ ಕೊನೆಗೂ ಸೋಲು ಒಪ್ಪಿಕೊಂಡಿತ್ತು.
ಬಿಜೆಪಿ ಕುದುರೆ ವ್ಯಾಪಾರ ನಡೆಸುತ್ತಿದೆ ಎಂದು ಕಾಂಗ್ರೆಸ್ ಹೈಕಮಾಂಡ್, ಗುಜರಾತಿನ 44 ಶಾಸಕರನ್ನು ಬೆಂಗಳೂರು ಹೊರವಲಯದ ಈಗಲ್ಟನ್ ದಿ ಗಾಲ್ಫ್ ರೆಸಾರ್ಟಿಗೆ ಕಳುಹಿಸಿತ್ತು. ಕರ್ನಾಟಕ ಇಂಧನ ಸಚಿವ ಡಿ ಕೆ ಶಿವಕುಮಾರ್ ಶಾಸಕರ ಉಸ್ತುವಾರಿ ನೋಡಿಕೊಂಡಿದ್ದರು.
2017-ಗುಜರಾತ್ ಅಸೆಂಬ್ಲಿ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೇ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಚಿವ ಡಿ ಕೆ ಶಿವಕುಮಾರ್, ಅಂದು ಗುಜರಾತ್ ನಿಂದ ಬೆಂಗಳೂರಿಗೆ ಬಂದಿದ್ದ 44 ಶಾಸಕರ ಪೈಕಿ, 32 ಶಾಸಕರು ಚುನಾವಣೆ ಗೆದ್ದಿದ್ದಾರೆಂದು, ಡಿಕೆಶಿ ಹೇಳಿದ್ದಾರೆ.

ಅಹಮದ್ ಪಟೇಲ್ ಅವರನ್ನು ಸೋಲಿಸಲೇ ಬೇಕೆಂದು ಅಂದು ನಮ್ಮ ಪಕ್ಷವನ್ನು ಹೋಳು ಮಾಡಿದರು. ಆದರೂ, ನಾವು ಈ ಬಾರಿಯ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಗಳಿಸಿದ್ದೇವೆ, ಶೇಕಡಾವಾರು ಮತಗಳಿಕೆ ಕೂಡ ಹೆಚ್ಚಾಗಿದೆ ಎಂದು ಡಿ ಕೆ ಶಿವಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು, ಗೆಲುವು ಸಾಮಾನ್ಯ. 150ಸ್ಥಾನ ಗೆಲ್ಲುತ್ತೇವೆ ಎಂದಿದ್ದ ಅಮಿತ್ ಶಾ ಅವರ ಹೇಳಿಕೆ ಏನಾಯಿತು? ನಮಗೆ ಕಡಿಮೆ ಸ್ಥಾನ ಬಂದಿರಬಹುದು, ಆದರೆ ಈ ಚುನಾವಣೆ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಗುಜರಾತ್ ಚುನಾವಣಾ ಫಲಿತಾಂಶ ಕರ್ನಾಟಕದಲ್ಲೂ ಮರುಕಳಿಸುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಅವರು ಆಸೆ ಪಡುವುದರಲ್ಲಿ ತಪ್ಪಿಲ್ಲ, ಆದರೆ ರಾಜ್ಯದಲ್ಲಿ ನಮ್ಮ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವೇ ಬೇಡ ಎಂದು ಸಚಿವ ಡಿ ಕೆ ಶಿವಕುಮಾರ್ ಭರವಸೆಯ ಮಾತನ್ನಾಡಿದ್ದಾರೆ.












Click it and Unblock the Notifications