ಗುಜರಾತ್ ಚುನಾವಣೆ: ಪ್ರತೀ ದಿನವು ಬಿಜೆಪಿಗೆ 'ಎಚ್ಚರಿಕೆಯ ಗಂಟೆ'
Recommended Video

ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ತವರೂರು, ಮತ್ತು ಗುಜರಾತಿನ 'ಪುತ್ರ' ಪ್ರಧಾನಿ ಮೋದಿಗೆ ಭಾರೀ ಪ್ರತಿಷ್ಟೆಯ ವಿಷಯವಾಗಿರುವ ಗುಜರಾತ್ ವಿಧಾನಸಭಾ ಚುನಾವಣೆಯ, ಕಾವು ದಿನದಿಂದ ದಿನಕ್ಕೆ ಏರುತ್ತಿದೆ.
ಡಿಸೆಂಬರ್ 9, 14ರಂದು ಗುಜರಾತ್ ಅಸೆಂಬ್ಲಿಗೆ ಚುನಾವಣೆ ನಡೆಯಲಿದ್ದು, ಡಿ. 18ರಂದು ಫಲಿತಾಂಶ ಪ್ರಕಟವಾಗಲಿದೆ. 22 ವರ್ಷದಿಂದ ಅಧಿಕಾರದಲ್ಲಿರುವ ಬಿಜೆಪಿಯ ವಿರುದ್ದ ಅಲ್ಲಲ್ಲಿ ಆಡಳಿತ ವಿರೋಧಿ ಅಲೆ ಇರುವುದು ಸಹಜ. ಜೊತೆಗೆ, ಮೋದಿ ಪ್ರಧಾನಿಯಾದ ನಂತರ ಗುಜರಾತ್ ಬಿಜೆಪಿ ಘಟಕ ತನ್ನ ಹಿಂದಿನ ಜನಪ್ರಿಯತೆಯನ್ನು ಉಳಿಸಿಕೊಳ್ಳುವಲ್ಲಿ ದಿನದಿಂದ ದಿನಕ್ಕೆ ಹಿಂದಕ್ಕೆ ಬೀಳುತ್ತಿದೆ.
ಮೀಸಲಾತಿ, ಪಟೇದಾರ್ ಚಳುವಳಿಯನ್ನು ವೃತ್ತಿಪರತೆಯಿಂದ ನಿಭಾಯಿಸದೇ ಇದ್ದದ್ದು, ಪ್ರಮುಖವಾಗಿ ತಮ್ಮ ಸ್ಟ್ರಾಂಗ್ ಬೆಲ್ಟ್ ಆಗಿರುವ ಸೌರಾಷ್ಟ್ರ ಭಾಗದಲ್ಲಿ ಬಿಜೆಪಿ ಹಿನ್ನಡೆ ಅನುಭವಿಸುವಂತಾಗಿದೆ. ಇತ್ತೀಚಿನ ಕೆಲವೊಂದು ಸಮೀಕ್ಷೆಗಳು ಹೇಳುವುದು ಕೂಡಾ ಅದನ್ನೇ.
ಗುಜರಾತ್ ಚುನಾವಣೆಯ ದಿನಾಂಕ ಘೋಷಣೆಯಾದ ನಂತರ ಇದುವರೆಗೆ ವಿವಿಧ ವಾಹಿನಿಗಳ ಮೂರು ಚುನಾವಣಾಪೂರ್ವ ಸಮೀಕ್ಷೆ ಹೊರಬಿದ್ದಿದೆ. ಮೂರೂ ಸಮೀಕ್ಷೆಗಳು ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿವೆಯಾದರೂ, ಕಾಂಗ್ರೆಸ್ ಜನಪ್ರಿಯತೆ 'ಮಿಂಚಿನ ಓಟ'ದಲ್ಲಿ ಸಾಗುತ್ತಿದೆ ಎಂದು ಹೇಳಿದ್ದನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸದೇ ಇದ್ದಲ್ಲಿ, ಬಿಜೆಪಿಗೆ ಗೆಲುವು ಕಟ್ಟಿಟ್ಟಬುತ್ತಿ ಎಂದು ಹೇಳಲು ಸಾಧ್ಯವಿಲ್ಲ.
ಕಳೆದ ಒಂದು ತಿಂಗಳಿನಿಂದ ಇದುವರೆಗಿನ ಅಂಕಿಅಂಶಗಳನ್ನು ಅವಲೋಕಿಸಿದರೆ, ಕಾಂಗ್ರೆಸ್ ತನ್ನ ನೆಲೆಯನ್ನು ಭದ್ರಪಡಿಸುತ್ತಲೇ ಸಾಗುತ್ತಿದೆ. ಚುನಾವಣೆಗೆ ಇನ್ನೂ ಬರೋಬ್ಬರಿ ಒಂದು ತಿಂಗಳು ಇರುವುದರಿಂದ, ಮತದಾರನ ಚಿತ್ತ, ಎತ್ತ ಬೇಕಾದರೂ ಬದಲಾಗಬಹುದು. ಕಳೆದ ಎರಡುವರೆ ತಿಂಗಳಿನಿಂದ ಇದೇ ಆಗುತ್ತಿರುವುದು. ಮುಂದೆ ಓದಿ..

ಹಾರ್ದಿಕ್ ಪಟೇಲ್, ಅಲ್ಪೇಶ್ ಠಾಕೂರ್, ಜಿಗ್ನೇಶ್ ಮೇವಾನಿ
ಹಾರ್ದಿಕ್ ಪಟೇಲ್, ಅಲ್ಪೇಶ್ ಠಾಕೂರ್, ಜಿಗ್ನೇಶ್ ಮೇವಾನಿಯಂಥ ನಾಯಕರು, ಬಿಜೆಪಿ ವಿರುದ್ದ ನಿಂತಿರುವುದು ಪಕ್ಷಗಾಗುತ್ತಿರುವ ಬಹುದೊಡ್ಡ ಹಿನ್ನಡೆ. ಇವರನ್ನು ಮಟ್ಟಹಾಕಲು ಹೋದಂತೆಲ್ಲಾ ಅದು ಬಿಜೆಪಿಗೆ ತಿರುಗುಬಾಣವಾಗುತ್ತಿದೆ. ಆಯಾಯ ಸಮುದಾಯದ ಮತದಾರರ ಮೇಲೆ ಈ ಮೂವರು ಯುವ ನಾಯಕರು ಪ್ರಭಾವ ಬೀರುವಷ್ಟು ಶಕ್ತರಾಗಿದ್ದಾರೆ ಎನ್ನುವುದು ಎಲ್ಲಾ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.

ಹಾರ್ಥಿಕ್ ಪಟೇಲ್ ಜೊತೆ ಕಪಿಲ್ ಸಿಬಲ್ ಮಾತುಕತೆ
ಕಾಂಗ್ರೆಸ್ಸಿನ ಹಿರಿಯ ಮುಖಂಡ ಕಪಿಲ್ ಸಿಬಲ್, ಬುಧವಾರ (ನ 8) ರಾತ್ರಿ ಮೂರು ತಾಸು ಪಟೇದಾರ್ ಚಳುವಳಿಯ ಮುಖಂಡ ಹಾರ್ಥಿಕ್ ಪಟೇಲ್ ಜೊತೆ ಮಾತುಕತೆ ನಡೆಸಿದ್ದಾರೆ. ಮೀಸಲಾತಿ ಸಂಬಂಧ ಮೂರು ಆಯ್ಕೆ ನೀಡಿರುವ ಕಾಂಗ್ರೆಸ್ಸಿನ ಈ ರಾಜಕೀಯ ತಂತ್ರಗಾರಿಕೆ ವರ್ಕೌಟ್ ಆದರೆ, ದಶಕಗಳಿಂದ ಬಿಜೆಪಿಗೆ ನಿಷ್ಠೆ ತೋರುತ್ತಿರುವ, ಗುಜರಾತಿನ ಅತ್ಯಂತ ಪ್ರಭಾವಿ ಪಟೇದಾರ್ ಸಮುದಾದದ ಒಲವು ಬದಲಾದರೆ ಆಶ್ಚರ್ಯ ಪಡಬೇಕಾಗಿಲ್ಲ. ಒಂದು ವೇಳೆ ಈ ರೀತಿಯಾದಲ್ಲಿ, ಸೌರಾಷ್ಟ್ರ ಭಾಗದಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯಾಗಲಿದೆ.

ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ಸಿಗೆ ಬೆಂಬಲ
ಪಟೇದಾರ್ ಸಮುದಾಯವನ್ನು ಬಿಟ್ಟು, ಓಬಿಸಿ ಮತಬ್ಯಾಂಕ್ ಅನ್ನು ತನ್ನತ್ತ ಸೆಳೆಯುವ ಪ್ರಯತ್ನವೂ ಸದ್ಯದ ಮಟ್ಟಿಗೆ ಬಿಜೆಪಿಗೆ ಫಲ ನೀಡುತ್ತಿಲ್ಲ. ಓಬಿಸಿ ಸಮುದಾಯದ ಅಲ್ಪೇಶ್ ಠಾಕೂರ್, ಸೋಮವಾರ (ನ 6), ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್ಸಿಗೆ ಬೆಂಬಲ ಸೂಚಿಸಿದ್ದಾರೆ. ಠಾಕೂರ್, ದಲಿತರು ಮತ್ತು ಪಟೇಲ್ ಸಮುದಾಯ, ಗುಜರಾತಿನ ಒಟ್ಟು ಜನಸಂಖ್ಯೆಯ ಶೇ. 42ರಷ್ಟಿದ್ದಾರೆ. ಈ ಮೂರೂ ಸಮುದಾಯವನ್ನು ಎದುರು ಹಾಕಿಕೊಂಡಿದ್ದ ಬಿಜೆಪಿ 2015ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿತ್ತು.

ಸೆಂಟ್ರಲ್ ಗುಜರಾತ್ ಹೊರತು ಪಡಿಸಿ, ಎಲ್ಲಾ ಭಾಗಗಳಲ್ಲೂ ಬಿಜೆಪಿಗೆ, ಕಾಂಗ್ರೆಸ್ ಪೈಪೋಟಿ
ಚುನಾವಣೆಯ ಹೊಸ್ತಿಲಲ್ಲಿ ಕಾಂಗ್ರೆಸ್ ದಿನದಿಂದ ದಿನಕ್ಕೆ ಬಲವೃದ್ದನೆಗೊಳ್ಳುತ್ತಿದೆ. ಕಾಂಗ್ರೆಸ್ಸಿನ ಭದ್ರಕೋಟೆಯಾಗಿರುವ ಸೆಂಟ್ರಲ್ ಗುಜರಾತ್ ಹೊರತು ಪಡಿಸಿ, ಇತರ ಎಲ್ಲಾ ಭಾಗಗಳಲ್ಲೂ ಬಿಜೆಪಿಗೆ ಸರಿಸಮನಾಗಿ ಕಾಂಗ್ರೆಸ್ ಮುನ್ನುಗ್ಗುತ್ತಿದೆ. ವರ್ತಕರ ಬೆಂಬಲವನ್ನು ಕಾಂಗ್ರೆಸ್ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ನಗರ ಭಾಗದಲ್ಲಿನ ಅಸೆಂಬ್ಲಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿಗೆ ಇದು ವರ್ಕೌಟ್ ಆಗಬಹುದು.

ಎಬಿಪಿ ನ್ಯೂಸ್ ಸರ್ವೇ ಪ್ರಕಾರ
ಕೆಲವು ತಿಂಗಳಿನ ಹಿಂದೆ ಇದ್ದ ಪರಿಸ್ಥಿತಿಗೂ, ಈಗಿನ ಪರಿಸ್ಥಿತಿಗೂ ಬಹಳ ವ್ಯತ್ಯಾಸ ಕಂಡುಬಂದಿರುವುದು ಸಮೀಕ್ಷೆಗಳಿಂದ ರುಜುವಾತಾಗಿದೆ. ಸದ್ಯ ಗುಜರಾತಿನ ವಿವಿಧ ಭಾಗಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೈಪೋಟಿ ಹೀಗಿದೆ. (ಎಬಿಪಿ ಸರ್ವೇ ಪ್ರಕಾರ)
ಸೌರಾಷ್ಟ್ರ, ಕಛ್ - (ಬಿಜೆಪಿ: ಶೇ. 42(-23), ಕಾಂಗ್ರೆಸ್ : ಶೇ. 42 (+16)
ಉತ್ತರ ಗುಜರಾತ್ - (ಬಿಜೆಪಿ: ಶೇ. 44 (-15) , ಕಾಂಗ್ರೆಸ್ : ಶೇ.49 (+16 )
ಮಧ್ಯ ಗುಜರಾತ್ - (ಬಿಜೆಪಿ: ಶೇ. 54 (-2), ಕಾಂಗ್ರೆಸ್ : ಶೇ.38 (+8 )
ದಕ್ಷಿಣ ಗುಜರಾತ್ - (ಬಿಜೆಪಿ: ಶೇ.51 (-3) , ಕಾಂಗ್ರೆಸ್ : ಶೇ.33 (+6 )

ಗುಜರಾತ್ ಚುನಾವಣೆ: ಪ್ರತೀ ದಿನವು ಬಿಜೆಪಿಗೆ ಎಚ್ಚರಿಕೆಯ ಗಂಟೆ
ಚುನಾವಣೆಗೆ ಇನ್ನೂ ಮೂವತ್ತು ದಿನಗಳು ಇರುವುದರಿಂದ, ಜನರ ನಿಷ್ಠೆ ಬದಲಾಗುವ ಸಾಧ್ಯತೆಯಿಲ್ಲದಿಲ್ಲ. ಬಿಜೆಪಿಗೆ ತಿರುಗೇಟು ನೀಡಲೇ ಬೇಕೆಂದು ಶತಾಯಗತಾಯು ಹೋರಾಡುತ್ತಿರುವ ರಾಹುಲ್ ಗಾಂಧಿ ಗುಜರಾತ್ ಉದ್ದಗಲಕ್ಕೂ ಸುತ್ತುತ್ತಿದ್ದಾರೆ. ಸದ್ಯದ ಮಟ್ಟಿಗೆ ಬಿಜೆಪಿ ಮುನ್ನಡೆಯಲ್ಲಿದ್ದರೂ, ಅತಿಯಾದ ವಿಶ್ವಾಸದಿಂದ ಬಿಜೆಪಿ ನಡೆದರೆ ಕಳೆದ ದೆಹಲಿ ಮತ್ತು ಬಿಹಾರ ಚುನಾವಣೆಯಲ್ಲಿ ಬಂದಂತ ಫಲಿತಾಂಶ ಹೊರಬಿದ್ದರೂ ಬೀಳಬಹುದು.












Click it and Unblock the Notifications