ಸೂರತ್ನಲ್ಲಿ ಆಪ್ ರೋಡ್ ಶೋ ಮೇಲೆ ಕಲ್ಲುತೂರಾಟ!
ಗಾಂಧಿನಗರ, ನವೆಂಬರ್ 28: ಗುಜರಾತ್ನ ಸೂರತ್ನಲ್ಲಿ ಆಮ್ ಆದ್ಮಿ ಪಕ್ಷದ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ರೋಡ್ ಶೋನಲ್ಲಿ ಭದ್ರತಾ ಉಲ್ಲಂಘನೆ ಆಗಿರುವುದು ವರದಿಯಾಗಿದೆ. ಆಪ್ ಚುನಾವಣಾ ಮೆರವಣಿಗೆಯು ನಗರದಲ್ಲಿ ಗಡಿ ದಾಟುತ್ತಿದ್ದಾಗ ಕಲ್ಲು ತೂರಾಟ ನಡೆದಿದೆ.
ಈ ಕಲ್ಲು ತೂರಾಟದ ಬಗ್ಗೆ ಮಾತನಾಡಿರುವ ಅರವಿಂದ ಕೇಜ್ರಿವಾಲ್, ಈ ಜನರು ಕಳೆದ 27 ವರ್ಷಗಳಲ್ಲಿ ಯಾವುದೇ ಕೆಲಸ ಮಾಡಿಲ್ಲ ಎಂದು ಹೇಳಿದರು. ರಾಜ್ಯದಲ್ಲಿ ಎಲ್ಲೆಂದರಲ್ಲಿ ಹಣದುಬ್ಬರ, ನಿರುದ್ಯೋಗ ಇದೆ, ಕೇವಲ ಗೂಂಡಾಗಿರಿ ಮಾಡಿದ್ದಾರೆ, ಈಗಷ್ಟೇ ನಮ್ಮ ಮೇಲೆ ಕಲ್ಲು ತೂರಿದ್ದಾರೆ. ಕಳೆದ 27 ವರ್ಷಗಳಲ್ಲಿ ಕೆಲಸ ಮಾಡಿದ್ದರೆ ನಮ್ಮ ಮೇಲೆ ಕಲ್ಲು ತೂರಾಟ ನಡೆಸಬೇಕಾಗಿರಲಿಲ್ಲ ಎನ್ನುವ ಮೂಲಕ ಬಿಜೆಪಿಗೆ ತಿರುಗೇಟು ನೀಡಿದರು.
Breaking: ಗುಜರಾತ್ನಲ್ಲಿ 12 ಬಂಡಾಯ ನಾಯಕರನ್ನು ಅಮಾನತುಗೊಳಿಸಿದ ಬಿಜೆಪಿ
ಬಿಜೆಪಿ ವಿರುದ್ಧ ಕಥಿರಿಯಾ ಆರೋಪ:
ಭಾರತೀಯ ಜನತಾ ಪಕ್ಷದ ಗೂಂಡಾಗಳು ಕಲ್ಲು ಎಸೆದಿದ್ದಾರೆ ಎಂದು ಎಎಪಿ ಅಭ್ಯರ್ಥಿ ಅಲ್ಪೇಶ್ ಕಥಿರಿಯಾ ಆರೋಪಿಸಿದ್ದಾರೆ. "ಈ ಜನರು ಅರವಿಂದ ಕೇಜ್ರಿವಾಲ್ ಮೇಲೆ ಹೂವುಗಳನ್ನು ಹಾಕುತ್ತಿದ್ದರೆ, ಬಿಜೆಪಿ ಗೂಂಡಾಗಳು ಕಲ್ಲು ಎಸೆಯುತ್ತಿದ್ದಾರೆ," ಎಂದು ಕಥಿರಿಯಾ ಹೇಳಿದರು.
ನಾನು ಮಾಡಿದ ತಪ್ಪಾದರೂ ಏನು?:
ಕಲ್ಲು ತೂರಾಟದ ಬಗ್ಗೆ ಪ್ರತಿಕ್ರಿಯಿಸಿದ ಅರವಿಂದ ಕೇಜ್ರಿವಾಲ್, "ಅವರು ನನ್ನ ಕಣ್ಣಿಗೆ ಹೊಡೆಯುತ್ತಾರೆ. ನಾನು ಏನಾದರೂ ತಪ್ಪು ಮಾಡಿದ್ದೀನಾ? ನಾನು ಶಾಲೆಗಳು ಮತ್ತು ಆಸ್ಪತ್ರೆಗಳನ್ನು ನಿರ್ಮಿಸುತ್ತೇನೆ ಎಂದು ಹೇಳಿದ್ದೀನಿ. ನೀವು ಮಾಡಿದ ಕೆಲಸಗಳನ್ನು ನನಗೆ ತೋರಿಸಿ, ಸುಮ್ಮನೆ ನಿಂದನೆ ಮಾಡಬೇಡಿ," ಎಂದು ಹೇಳಿದರು. ಚುನಾವಣೆಗಳು ನಡೆಯಲಿರುವ ರಾಜ್ಯಗಳಲ್ಲಿನ ಸಾರ್ವಜನಿಕ ಸಭೆಗಳ ಮೇಲೆ ಕಲ್ಲು ತೂರಾಟ ನಡೆಸಲಾಗುತ್ತದೆ ಎಂದು ಎಎಪಿ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ಇಂಥದೊಂದು ಘಟನೆ ನಡೆದಿದೆ.
ಇದರ ಮಧ್ಯೆ ಗುಜರಾತ್ನಲ್ಲಿ ಮಹಿಳೆಯರು ಮತ್ತು ಯುವಜನರಲ್ಲಿ ಎಎಪಿಗೆ ಭಾರಿ ಕ್ರೇಜ್ ಇದ್ದು, ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು 182 ಸ್ಥಾನಗಳಲ್ಲಿ 92ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ಮಹಿಳೆಯರು ಮತ್ತು ಯುವಕರು ಬಹಿರಂಗವಾಗಿ ಹೇಳದಿದ್ದರೂ ಎಎಪಿಗೆ ಮತ ಹಾಕುತ್ತಾರೆ ಎಂಬ ಭಯ ಭಾರತೀಯ ಜನತಾ ಪಕ್ಷವನ್ನು ಕಾಡುತ್ತಿದೆ ಎಂದು ಅರವಿಂದ ಕೇಜ್ರಿವಾಲ್ ಹೇಳಿದರು.
ಕಲ್ಲು ತೂರಾಟದ ವಿಡಿಯೋ ಶೇರ್:
ಆಮ್ ಆದ್ಮಿ ಪಕ್ಷದ ಗುಜರಾತ್ ಮುಖ್ಯಸ್ಥ ಗೋಪಾಲ್ ಇಟಾಲಿಯಾ ಟ್ವಿಟರ್ನಲ್ಲಿ ಘಟನೆಯ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಈ ಕಲ್ಲು ತೂರಾಟದಲ್ಲಿ ಮಗುವಿಗೆ ಗಾಯವಾಗಿದೆ ಎಂದು ಹೇಳಿದ್ದಾರೆ. "ಕತರಗಾಂ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬಿಜೆಪಿಯ ಗೂಂಡಾಗಳು ಇಂದು ನಮ್ಮ ಸಾರ್ವಜನಿಕ ಸಭೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ, ಇದರಲ್ಲಿ ಚಿಕ್ಕ ಮಗು ಗಾಯಗೊಂಡಿದೆ," ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಎರಡು ಹಂತಗಳಲ್ಲಿ ಮತದಾನ:
ಗುಜರಾತ್ನಲ್ಲಿ ಒಟ್ಟು ಎರಡು ಹಂತಗಳಲ್ಲಿ 182 ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ. ಮೊದಲ ಹಂತದಲ್ಲಿ 89 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಸಲಾಗುತ್ತದೆ. ಈ ಸಂಬಂಧ ನವೆಂಬರ್ 5ರಂದು ಅಧಿಸೂಚನೆ ಹೊರಡಿಸಲಾಗಿದೆ. ನವೆಂಬರ್ 14 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು, ನವೆಂಬರ್ 15 ನಾಮಪತ್ರ ಪರಿಶೀಲನೆ, ನವೆಂಬರ್ 17 ನಾಮಪತ್ರ ವಾಪಸ್ ಪಡೆಯಲು ಕೊನೆ ದಿನಾಂಕವಾಗಿದೆ. ಡಿಸೆಂಬರ್ 1ರಂದು ಮೊದಲ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ.
ಗುಜರಾತ್ನ 93 ವಿಧಾನಸಭಾ ಕ್ಷೇತ್ರಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಸಲಾಗುತ್ತದೆ. ಈ ಸಂಬಂಧ ನವೆಂಬರ್ 10ರಂದು ಅಧಿಸೂಚನೆ ಹೊರಡಿಸಲಾಗಿದೆ. ನವೆಂಬರ್ 17ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು, ನವೆಂಬರ್ 18ರಂದು ನಾಮಪತ್ರ ಪರಿಶೀಲನೆ, ನವೆಂಬರ್ 21ರಂದು ನಾಮಪತ್ರ ವಾಪಸ್ ಪಡೆಯಲು ಕೊನೆ ದಿನಾಂಕವಾಗಿದೆ. ಡಿಸೆಂಬರ್ 5ರಂದು ಎರಡನೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಸಲಾಗುತ್ತದೆ. ಅಂತಿಮವಾಗಿ ಡಿಸೆಂಬರ್ 8ರಂದು 182 ವಿಇಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶ ಹೊರಬೀಳಲಿದೆ.