ಗುಜರಾತ್ ಚುನಾವಣೆ; ಬಿಜೆಪಿ ವಿರುದ್ದ ಆರ್ಚ್ ಬಿಷಪ್ ಅಸಹಿಷ್ಣುತೆ!
ಅಹಮದಾಬಾದ್, ನ 24: ಪ್ರತೀ ಸಾರ್ವತ್ರಿಕ ಚುನಾವಣೆಯ ಮುನ್ನ ದೆಹಲಿಯ ಜಾಮಾ ಮಸೀದಿಯ ಇಮಾಂ, ದೇಶದ ಮುಸ್ಲಿಂ ಬಾಂಧವರಿಗೆ ಯಾವ ಪಕ್ಷಕ್ಕೆ ಮತ ನೀಡಬೇಕೆಂದು ಫರ್ಮಾನು ಹೊರಡಿಸುವ ಪದ್ದತಿಯಿದೆ. ಇಮಾಂ ಹೊರಡಿಸುವ ಆದೇಶವನ್ನು ಮುಸ್ಲಿಮರು ಪಾಲಿಸುತ್ತಾರೋ, ಇಲ್ಲವೋ.. ಅದು ಆನಂತರದ ಪ್ರಶ್ನೆ.
ಈಗ, ಗುಜರಾತ್ ವಿಧಾನಸಭೆ ಚುನಾವಣೆಗೆ ಮುನ್ನ ಅಹಮದಾಬಾದಿನ ಆರ್ಚ್ ಬಿಷಪ್, ರಾಷ್ಟ್ರೀಯತಾವಾದಿಗಳ ವಿರುದ್ದವಾಗಿ ಮತ ಚಲಾಯಿಸಿ ಎಂದು ದೇಶದ ಸಮಸ್ತ ಕ್ರಿಶ್ಚಿಯನ್ ಸಮುದಾಯದವರಿಗೆ ಕರೆನೀಡುವ ಮೂಲಕ, ವಿವಾದದ ಕಿಡಿ ಹೊತ್ತಿಸಿದ್ದಾರೆ.
ಬಿಜೆಪಿಯ ಹೆಸರನ್ನು ಉಲ್ಲೇಖಿಸದೇ ಪತ್ರ ಬರೆದಿರುವ ಆರ್ಚ್ ಬಿಷಪ್, ರಾಷ್ಟ್ರೀಯತಾವಾದಿಗಳಿಗೆ ಚುನಾವಣೆಯಲ್ಲಿ ಸೋಲಾಗಲಿ ಎಂದು ಎಲ್ಲರೂ ಪ್ರಾರ್ಥನೆ ಮಾಡಬೇಕೆಂದು ತಮ್ಮ ಸಮುದಾಯದವರಿಗೆ ಕರೆ ನೀಡಿದ್ದಾರೆಂದು ಇಂಡಿಯಾ ಟುಡೇ ವರದಿ ಮಾಡಿದೆ.
ನವೆಂಬರ್ 21ರಂದು ದೇಶದ ಎಲ್ಲಾ ಪ್ರಮುಖ ಚರ್ಚುಗಳಿಗೆ ಪತ್ರ ಬರೆದಿರುವ ಅಹಮದಾಬಾದ್ ನಗರದ ಆರ್ಚ್ ಬಿಷಪ್ ಥಾಮಸ್ ಮ್ಯಾಕ್ವೆನ್, ಭಾರತದ ಎಲ್ಲಾ ಕ್ರಿಶ್ಚಿಯನ್ನರಿಗೆ ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಪೆಟ್ಟು ಬೀಳುತ್ತಿದೆ ಎನ್ನುವ ಅರಿವಿದೆ, ಇದರ ವಿರುದ್ದ ನಾವು ಧ್ವನಿ ಎತ್ತಬೇಕಾಗಿದೆ ಎಂದು ಹೇಳಿದ್ದಾರೆ.
ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ, ಸಂವಿಧಾನಾತ್ಮಕ ಹಕ್ಕುಗಳಿಗೆ ಬೆಲೆಯಿಲ್ಲದಂತಾಗಿದೆ, ಚರ್ಚುಗಳ ಮೇಲೆ ದಾಳಿ ನಡೆಯದ ದಿನವೇ ಇಲ್ಲ. ದೇಶದಲ್ಲಿ ನಮ್ಮದು ಅತ್ಯಂತ ನಿಷ್ಠಾವಂತ ಸಮುದಾಯವಾಗಿದ್ದರೂ, ನಮ್ಮ ಸಮುದಾಯದವರು ಪ್ರತೀ ದಿನ ತೊಂದರೆ ಎದುರಿಸಬೇಕಾಗಿದೆ ಎಂದು ಆರ್ಚ್ ಬಿಷಪ್ ತಾವು ಬರೆದಿರುವ ಪತ್ರದಲ್ಲಿ ನೋವು ತೋಡಿಕೊಂಡಿದ್ದಾರೆ.
ದೇಶದಲ್ಲಿ ಈಗಾಗಲೇ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಂಡಿರುವ ರಾಷ್ಟ್ರೀಯತಾವಾದಿಗಳಿಗೆ ತಮ್ಮ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಗುಜರಾತ್ ಚುನಾವಣೆ ಅತ್ಯಂತ ನಿರ್ಣಾಯಕ. ಹಾಗಾಗಿ, ಕ್ರಿಶ್ಚಿಯನ್ ಸಮುದಾಯದವರು ಇಂತಹ ಶಕ್ತಿಗಳ ವಿರುದ್ದ ಮತಚಲಾಯಿಸಬೇಕೆಂದು, ಪರೋಕ್ಷವಾಗಿ ಬಿಜೆಪಿಗೆ ಮತನೀಡಬೇಡಿ ಎಂದು ಕರೆನೀಡಿದ್ದಾರೆ.
ಪ್ರತೀದಿನ ಚರ್ಚ್ ಮೇಲೆ ಮತ್ತು ಕ್ರಿಶ್ಚಿಯನ್ನರ ಮೇಲೆ ದಾಳಿಯಾಗುತ್ತಿದೆ ಎಂದು ಆರ್ಚ್ ಬಿಷಪ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ, ಆದರೆ ಅದಕ್ಕೆ ಪೂರಕವಾದ ಯಾವುದೇ ಸ್ಪಷ್ಟನೆಯನ್ನು ಪತ್ರದಲ್ಲಿ ಅವರು ನೀಡಲಿಲ್ಲ.
ಕೊನೇಮಾತು: ಒಂದು ವೇಳೆ, ಪ್ರತೀದಿನ ದಾಳಿ ನಡೆದಿದ್ದೇ ಆದಲ್ಲಿ ನಮ್ಮ ಅತೀ ಬುದ್ದಿಜೀವಿಗಳು ಸುಮ್ಮನೆ ಇರುತ್ತಾರೆ ಅನ್ಕೊಂಡ್ರಾ? ರಾಷ್ಟ್ರೀಯತಾವಾದಿಗಳ ವಿರುದ್ದ ಹೋರಾಡಿ ಅನ್ನುವ ನಿಮಗೆ, ಮಿಷನರಿಗಳು ಹಿಂದೂಗಳ ಮತಾಂತರ ನಡೆಸುತ್ತಿರುವುದು ನಿಮ್ಮ ಕಣ್ಣಿಗೆ ಬಿದ್ದಿಲ್ಲವೇ?