ಇ-ವೀಸಾ ಇದ್ದವರಿಗೆ ಮಾತ್ರ ಅಫ್ಘಾನಿಸ್ತಾನದಿಂದ ಭಾರತಕ್ಕೆ ಬರಲು ಅವಕಾಶ
ನವದೆಹಲಿ, ಆಗಸ್ಟ್ 25: ಇ-ವೀಸಾ ಇದ್ದವರಿಗೆ ಮಾತ್ರ ಅಫ್ಘಾನಿಸ್ತಾನದಿಂದ ಭಾರತಕ್ಕೆ ಬರಲು ಅವಕಾಶ ನೀಡಲಾಗಿದೆ.
ಭಾರತಕ್ಕೆ ಬರಲು ಇಚ್ಛಿಸುವ ಅಫ್ಘಾನಿಸ್ತಾನದ ಪ್ರಜೆಗಳು ಇ-ವೀಸಾ ಅಪ್ಲಿಕೇಷನ್ ಪೋರ್ಟಲ್ ಮೂಲಕ ತಮ್ಮ ಅಪ್ಲಿಕೇಷನ್ ಭರ್ತಿ ಮಾಡಿ, ಇ-ವೀಸಾ ಪಡೆದುಕೊಳ್ಳಬೇಕು. ಇ-ವೀಸಾಗೆ ಅರ್ಜಿ ಸಲ್ಲಿಸಲು ಇಚ್ಛಿಸುವವರು www.indianvisaonline.gov.in ವೆಬ್ಸೈಟ್ನಲ್ಲಿ ಇ-ವೀಸಾ ಪಡೆಯಬಹುದು.
ಹಾಗೆಯೇ ಈ ಮೊದಲು ಪಡೆದಿರುವ ಯಾವುದೇ ವೀಸಾಗೆ ಮಾನ್ಯತೆ ಇರುವುದಿಲ್ಲ ಎಂದು ತಿಳಿಸಲಾಗಿದೆ. ತಾಲಿಬಾನ್ ಅಫ್ಘಾನಿಸ್ತಾನವನ್ನು ಬಹುತೇಕ ವಶಪಡಿಸಿಕೊಂಡಿದ್ದು, ಅಲ್ಲಿನ ಜನತೆ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬದುಕುವಂತಾಗಿದೆ.

ಭಾರತ ಅಮೆರಿಕ ಸೇರಿದಂತೆ ಹಲವು ದೇಶಗಳಿಗೆ ಜನರು ವಲಸೆ ಹೋಗುತ್ತಿದ್ದಾರೆ. ಹೀಗಾಗಿ ಭಾರತಕ್ಕೆ ಬರುವವರಿಗೆ ಇ-ವೀಸಾ ಕಡ್ಡಾಯಗೊಳಿಸಲಾಗಿದೆ.
ಅಫ್ಘಾನಿಸ್ತಾನದ ಗಡಿಯಲ್ಲಿ ಅಟ್ಟಹಾಸ ಮೆರೆಯುತ್ತಿದ್ದ ತಾಲಿಬಾನ್ ಉಗ್ರರು ಆ. 15ರಂದು ಅಫ್ಘಾನ್ ರಾಜಧಾನಿ ಕಾಬೂಲ್ ಅನ್ನು ವಶಕ್ಕೆ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದ ಅಧ್ಯಕ್ಷ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದರು.
ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿರುವ 20 ಸಾವಿರ ಹಿಂದೂ, ಸಿಖ್ ಸಮುದಾಯದ ಜನರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಲು ಕೆನಡಾ ಮುಂದಾಗಿದೆ. ಅಫ್ಘಾನಿಸ್ತಾನದಲ್ಲಿ ಒಂದೊಂದೇ ಪ್ರದೇಶವನ್ನು ತಾಲಿಬಾನ್ ಆಕ್ರಮಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿರುವ ಭಾರತೀಯ ಭಯಭೀತರಾಗಿದ್ದಾರೆ.
ವಲಸೆ ನೀತಿ, ನಿರಾಶ್ರಿತ, ಪೌರತ್ವ ಸಚಿವ ಮಾರ್ಕೊ ಇ ಎಲ್ ಮೆಂಡಿಸಿನೊ, ರಾಷ್ಟ್ರೀಯ ರಕ್ಷಣಾ ಸಚಿವ ಹರ್ಜಿತ್ ಎಸ್ ಸಜ್ಜನ್ ಮತ್ತು ವಿದೇಶಾಂಗ ಸಚಿವ ಮಾರ್ಕ್ ಗರ್ನೌ ಜಂಟಿಯಾಗಿ ಯುದ್ಧಗ್ರಸ್ತ ಆಫ್ಘಾನಿಸ್ತಾನದ 20,000 ಹಿಂದೂ, ಸಿಖ್ ಗಳಿಗೆ ಶಾಶ್ವತ ಪುನರ್ವಸತಿ ಕಲ್ಪಿಸುವ ಕೆನಡಾ ಸರ್ಕಾರದ ಈ ನಿರ್ಧಾರವನ್ನು ಕೈಗೊಂಡಿದ್ದು ಘೋಷಿಸಿದ್ದಾರೆ.
ಮಂಗಳವಾರ ಕಾಬೂಲ್ನಿಂದ ಬಂದ 78 ಜನರಲ್ಲಿ 16 ಮಂದಿಗೆ ಕೊವಿಡ್ 19 ಸೋಂಕು ಇರುವುದು ದೃಢಪಟ್ಟಿದೆ. ಅದರಲ್ಲೀಗ ಅಫ್ಘಾನಿಸ್ತಾನದ ಗುರುದ್ವಾರಗಳಿಂದ ಗುರು ಗ್ರಂಥ ಸಾಹೀಬ್ ಪವಿತ್ರ ಗ್ರಂಥ ತಂದ ಮೂವರಲ್ಲೂ ಸಹ ಕೊರೊನಾ ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿಯವರಿಗೂ ಸೋಂಕಿನ ಆತಂಕ ಶುರುವಾಗಿದೆ.
ಈಗಾಗಲೇ 228 ಭಾರತೀಯ ಪ್ರಜೆಗಳು ಸೇರಿದಂತೆ ಒಟ್ಟು 626 ಜನರನ್ನು ಅಫ್ಘಾನಿಸ್ತಾನದಿಂದ ಭಾರತಕ್ಕೆ ಶಿಫ್ಟ್ ಮಾಡಲಾಗಿದೆ ಎಂದು ಕೇಂದ್ರ ಸಚಿವ ಹರ್ದೀಪ್ ಪುರಿ ಮಾಹಿತಿ ನೀಡಿದ್ದಾರೆ. ಆ 626ರಲ್ಲಿ 77 ಜನರು ಅಫ್ಘಾನ್ ಸಿಖ್ ಸಮುದಾಯದವರಿದ್ದಾರೆ.
ಅಫ್ಘಾನಿಸ್ತಾನ ನೆಲವನ್ನು ಬಳಸಿಕೊಳ್ಳಲು ಬೇರೆ ರಾಷ್ಟ್ರಗಳಿಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಹೇಳಿರುವ ತಾಲಿಬಾನ್, ಭಾರತ ಬಯಸುವುದಾದರೆ ಮೂಲಭೂತ ಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸಲಿ ಎಂದು ಅದರ ವಕ್ತಾರ ಸುಹೈಲ್ ಶಹೀನ್ ಹೇಳಿದ್ದಾರೆ.
ಯಾರ ವಿರುದ್ಧವೂ ಅಫ್ಘಾನಿಸ್ತಾನ ನೆಲವನ್ನು ಬಳಸಿಕೊಳ್ಳಲು ಯಾವುದೇ ದೇಶಕ್ಕೆ ನಾವು ಬಿಡುವುದಿಲ್ಲ. ಇದು ಸ್ಪಷ್ಟ, ಅಫ್ಘಾನಿಸ್ತಾನದಲ್ಲಿ ಭಾರತ ಹಲವು ಯೋಜನೆಗಳನ್ನು, ನಿರ್ಮಾಣಗಳನ್ನು ಮತ್ತು ಮೂಲಭೂತ ಸೌಕರ್ಯ ಯೋಜನೆಗಳನ್ನು ಮಾಡಿದೆ.
ಭಾರತ ಬಯಸುವುದಾದರೆ ಅಪೂರ್ಣಗೊಂಡಿರುವ ಯೋಜನೆಗಳನ್ನು ಪೂರ್ಣಗೊಳಿಸಲಿ, ಏಕೆಂದರೆ ಯೋಜನೆಗಳು ಜನರ ಪರವಾಗಿದೆ ಎಂದು ವಕ್ತಾರ ಶಹೀನ್ ಪಾಕಿಸ್ತಾನದ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಉರ್ದುವಿನಲ್ಲಿ ಹೇಳಿದ್ದಾರೆ.
ಕಳೆದ ಸೋಮವಾರ ಅಫ್ಘಾನಿಸ್ತಾನವನ್ನು ತಾಲಿಬಾನೀಯರು ವಶಪಡಿಸಿಕೊಂಡ ನಂತರ ಭಾರತ ಬಗ್ಗೆ ನೀಡುತ್ತಿರುವ ಮೊದಲ ಪ್ರತಿಕ್ರಿಯೆ ಇದಾಗಿದೆ.












Click it and Unblock the Notifications