ದೇವರೇ ಸರ್ವೋಚ್ಚ ನ್ಯಾಯಾಲಯವನ್ನು ರಕ್ಷಿಸಬೇಕು : ಫಾಲಿ ನಾರಿಮನ್
ನವದೆಹಲಿ, ಜುಲೈ 06 : ಸರ್ವೋಚ್ಚ ನ್ಯಾಯಾಲಯದ ವಿರುದ್ಧವೇ ತಿರುಗಿಬಿದ್ದಿದ್ದ ನಾಲ್ವರು ನ್ಯಾಯಮೂರ್ತಿಗಳನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಸಂಪರ್ಕಿಸಬೇಕಿತ್ತು. ಇದೀಗ ಆ ದೇವರೇ ಸುಪ್ರೀಂ ಕೋರ್ಟನ್ನು ಕಾಪಾಡಬೇಕು ಎಂದು 90 ವರ್ಷದ ಹಿರಿಯ ನ್ಯಾಯವಾದಿ ಫಾಲಿ ನಾರಿಮನ್ ಅವರು ಅಲವತ್ತುಕೊಂಡಿದ್ದಾರೆ.
ನ್ಯಾಯಮೂರ್ತಿ ಚಲಮೇಶ್ವರ ಸೇರಿದಂತೆ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಬಹಿರಂಗ ಪತ್ರಿಕಾಗೋಷ್ಠಿ ನಡೆಸಿದಾಗ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಚಲಮೇಶ್ವರ ಅವರೊಂದಿಗೆ ಮಾತುಕತೆ ನಡೆಸಿ ಸಾಮರಸ್ಯ ತರಬೇಕಿತ್ತು ಎಂದು ಸಿಎನ್ಎನ್-ನ್ಯೂಸ್18ಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.
'ದೇವರೇ, ಸರ್ವೋಚ್ಚ ನ್ಯಾಯಾಲಯವನ್ನು ರಕ್ಷಿಸು' (God Save the Hon'ble Supreme Court) ಎಂಬ ಶೀರ್ಷಿಕೆಯ ಅವರ ಪುಸ್ತಕ ಮಾರುಕಟ್ಟೆಗೆ ಬರಲು ಸಜ್ಜಾಗಿದೆ. ಅದರಲ್ಲಿ, ಭಿನ್ನಮತದ ಹೊಗೆ ಎಬ್ಬಿಸಿದ್ದ ನಾಲ್ವರು ನ್ಯಾಯಮೂರ್ತಿಗಳು ಮತ್ತು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನಡುವಿನ ವಿವಾದವನ್ನು ಸಂಪೂರ್ಣವಾಗಿ ಅನಾವರಣ ಮಾಡಿರುವುದಾಗಿ ಹೇಳಿದ್ದಾರೆ.
ಪುಸ್ತಕದ ಶೀರ್ಷಿಕೆಯ ಬಗ್ಗೆ ಪ್ರಸ್ತಾಪಿಸಿದಾಗ, ಹೌದು ಶೀರ್ಷಿಕೆ ಇತ್ತೀಚೆಗೆ ನಡೆದ ಅಹಿತಕರ ವಿದ್ಯಮಾನದಿಂದಲೇ ಪ್ರೇರಿತವಾಗಿದ್ದು, ಅದೇ ಪುಸ್ತಕದ ತಿರುಳು ಎಂದಿರುವ ಅವರು, ಈ ವಿವಾದ ನ್ಯಾಯಾಂಗದ ಬಗ್ಗೆ ಜನರಲ್ಲಿ ಸರ್ವೋಚ್ಚ ನ್ಯಾಯಾಲಯದಿಂದ ಏನನ್ನು ನಿರೀಕ್ಷಿಸಲು ಸಾಧ್ಯ ಎಂಬ ಸಂಶಯ ಏಳುವಂತೆ ಮಾಡಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ನಾಲ್ವರು ನ್ಯಾಯಮೂರ್ತಿಗಳು ಒಂದು ವಿಷಯ ಹೇಳುತ್ತಿದ್ದರೆ, ಮುಖ್ಯ ನ್ಯಾಯಮೂರ್ತಿ ಮತ್ತೊಂದು ಹೇಳುತ್ತಿದ್ದಾರೆ. ಜೊತೆಗೆ, ಇತರ ನ್ಯಾಯಮೂರ್ತಿಗಳು ಏನನ್ನೂ ಹೇಳುತ್ತಿಲ್ಲ. ಹೀಗಾಗಿ ನ್ಯಾಯಾಂಗದ ಮೇಲೆಯೇ ಜನರಿಗೆ ಅನುಮಾನ ಮೂಡುವಂತೆ ಮಾಡಿದೆ ಎಂದು ಅವರು ಅಭಿಪ್ರಾಯ ಹೇಳಿದ್ದಾರೆ.
ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ನ್ಯಾಯಮೂರ್ತಿ ಚಲಮೇಶ್ವರ ಅವರು ನೀಡಿದ್ದ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ರದ್ದು ಪಡಿಸಿದ್ದು ವಿವಾದಕ್ಕೆ ಮೊದಲ ಕಿಡಿ ಹಚ್ಚಿತ್ತು. ನಂತರ ಚಲಮೇಶ್ವರ ಅವರು ಜನವರಿ 12ರಂದು ಇಡೀ ದೇಶವೇ ನಿಬ್ಬೆರಗಾಗುವಂತೆ ಪತ್ರಿಕಾಗೋಷ್ಠಿ ಕರೆದು ಎಲ್ಲವನ್ನೂ ಹೇಳಿಕೊಂಡಿದ್ದರು.