ಗೋವಾ: ಭಾಷಣದಲ್ಲಿ ಲಂಚದ ಪ್ರಸ್ತಾಪ; ಕೇಜ್ರಿವಾಲ್ ಮೇಲೆ ಎಫ್ಐಆರ್
“ಬಿಜೆಪಿ ಮತ್ತು ಕಾಂಗ್ರೆಸಿನಿಂದ ಹಣ ಪಡೆದುಕೊಳ್ಳಿ. ಆದರೆ ಮತ ಮಾತ್ರ ಎಎಪಿಗೆ ಹಾಕಿ,” ಎಂಬ ಕೇಜ್ರಿವಾಲ್ ವಿವಾದಾತ್ಮಕ ಭಾಷಣದ ಮೇಲೆ ಎಫ್ಐಆರ್ ದಾಖಲಿಸಲು ಚುನಾವಣಾ ಆಯೋಗ ಸೂಚನೆ ನೀಡಿದೆ.
ಪಣಜಿ, ಜನವರಿ 30: ಅರವಿಂದ ಕೇಜ್ರಿವಾಲ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಗೋವಾದ ಮುಖ್ಯ ಚುನಾವಣಾ ಆಯುಕ್ತರಿಗೆ ಚುನಾವಣಾ ಆಯೋಗ ರವಿವಾರ ನಿರ್ದೇಶನ ನೀಡಿದೆ. ಜನವರಿ 8ರಂದು ಕೇಜ್ರಿವಾಲ್ ತಮ್ಮ ಭಾಷಣದಲ್ಲಿ ಲಂಚದ ಪ್ರಸ್ತಾಪ ಮಾಡಿದ್ದರ ಕುರಿತು ದಾಖಲಾಗುತ್ತಿರುವ ಪ್ರಕರಣ ಇದು.
ಜನವರಿ 8ರಂದು ಎಎಪಿ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಅರವಿಂದ ಕೇಜ್ರಿವಾಲ್, "ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳಿಂದ ಹಣ ತೆಗೆದುಕೊಳ್ಳಿ. ಆದರೆ ಮತ ಮಾತ್ರ ಎಎಪಿಗೆ ಹಾಕಿ ಎಂದಿದ್ದರು." ಈ ಸಂಬಂಧ ಕೇಜ್ರಿವಾಲ್ ಗೆ ಆಯೋಗ ತೀಕ್ಷ್ಣ ಎಚ್ಚರಿಕೆಗಳನ್ನೂ ನೀಡಿತ್ತು. ಪ್ಯಾರಾ 16 ಎ ಅಡಿಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದರೆ ಎಎಪಿಯನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ತಡೆ ಹಿಡಿಯುವುದಾಗಿಯೂ ಆಯೋಗ ಹೇಳಿತ್ತು.[ಗೋವಾದಲ್ಲಿ ಬಿಜೆಪಿ ಬಂದ್ರೆ ಮುಖ್ಯಮಂತ್ರಿ ಯಾರು? ಪರಿಕ್ಕರ್ ನಡೆ ನಿಗೂಢ]
ಇದಕ್ಕೆ ಪ್ರತ್ಯುತ್ತರ ನೀಡಿದ್ದ ಎಎಪಿ ಕೇಜ್ರಿವಾಲ್ ಹೇಳಿಕೆಯನ್ನು ತಡೆಯುವ ಮೂಲಕ ಚುನಾವಣಾ ಆಯೋಗ ಚುನಾವಣೆಯಲ್ಲಿ ಲಂಚವನ್ನು ಪ್ರೋತ್ಸಾಹಿಸುತ್ತಿದೆ ಎಂದು ಆರೋಪಿಸಿದ್ದರು. ಮಾತ್ರವಲ್ಲ ಚುನಾವಣಾ ಆಯೋಗ ಪ್ರಧಾನ ಮಂತ್ರಿ ಕಾರ್ಯಾಲಯದಿಂದ ನಿರ್ದೇಶನಗಳನ್ನು ಪಡೆಯುತ್ತದೆ ಎಂದು ಸಂದರ್ಶನವೊಂದರಲ್ಲಿ ಸ್ವತಃ ಕೇಜ್ರಿವಾಲ್ ದೂರಿದ್ದರು.[ನಾವು ಸೈಕಲಿನ ಎರಡು ಗಾಲಿಗಳಿದ್ದಂತೆ-ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅಖಿಲೇಶ್]
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಚುನಾವಣಾ ಆಯೋಗ ಕೇಜ್ರಿವಾಲ್ ವಾದ ಹುರುಳಿಲ್ಲದ್ದು, ಆಧಾರ ರಹಿತ ಎಂದಿತ್ತು. ಇದೀಗ ಚುನಾವಣಾ ಆಯೋಗ ಕೇಜ್ರಿವಾಲ್ ವಿರುದ್ಧ ಎಫ್ಐಆರ್ ದಾಖಲಿಸಲು ಸೂಚನೆ ನೀಡಿದೆ. ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 123(1) ಮತ್ತು ಐಪಿಸಿ ಸೆಕ್ಷನ್ 171ಬಿ ಮತ್ತು171ಇ ಅಡಿಯಲ್ಲಿ ಪ್ರಕರಣ ದಾಖಲಿಸಿ ಮಂಗಳವಾರ ಮೊದಲು ವರದಿ ನೀಡುವಂತೆ ಗೋವಾ ಮುಖ್ಯ ಚುನಾವಣಾಧಿಕಾರಿಗೆ ಹೇಳಿದೆ.