ದೇವಾಲಯದೊಳಗೆ ವ್ಹೀಲ್ ಛೇರ್ ಬಿಡಲ್ಲ ಎಂದಿದ್ದಕ್ಕೆ ದೂರು ದಾಖಲು
ದೇವಾಲಯಗಳಿಗೆ ಪ್ರವೇಶ ನಿರಾಕರಣೆಗೆ ಏನೇನೋ ಕಾರಣಗಳು ಕೊಡುವುದನ್ನು ಕೇಳಿದ್ದೇವೆ. ಆದರೆ ಗೋವಾದ ದೇಗುಲವೊಂದರಲ್ಲಿ ಅಂಗವೈಕಲ್ಯ ಇರುವ ಹೆಣ್ಣುಮಗಳು ವ್ಹೀಲ್ ಛೇರ್ ನಲ್ಲಿ ಪ್ರವೇಶ ಮಾಡುವುದಕ್ಕೆ ಅವಕಾಶ ನಿರಾಕರಿಸಲಾಗಿದೆ. ಆ ನಂತರ ಎನ್ ಜಿಒವೊಂದು ಪೊಲೀಸರಲ್ಲಿ ದೂರನ್ನು ದಾಖಲಿಸಿದೆ.
ಆದರೆ, ದೇವಾಲಯ ಆಡಳಿತ ಮಂಡಳಿಯವರು, ದೇವಾಲಯದೊಳಗೆ ವ್ಹೀಲ್ ಛೇರ್ ತೆಗೆದುಕೊಂಡು ಹೋಗುವ ವ್ಯವಸ್ಥೆ ಇಲ್ಲ. ಅದೇ ಕಾರಣ ಹೊರತು, ಈ ಘಟನೆಯನ್ನು ದೇವಾಲಯಕ್ಕೆ ಪ್ರವೇಶ ನಿರಾಕರಿಸಿದ್ದಾರೆ ಎನ್ನುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.

ಮುಂಬೈ ಮೂಲದ ಹದಿನೇಳು ವರ್ಷದ ಹುಡುಗಿ ಸನಿಕಾ ಕೇಸ್ಕರ್ ಕಳೆದ ತಿಂಗಳು ಗೋವಾ ಪ್ರವಾಸದಲ್ಲಿರುವಾಗ ಅಲ್ಲಿ ಮಂಗ್ವೇಶಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆ ದೇವಾಲಯ ದಕ್ಷಿಣ ಗೋವಾದ ಪೋಂಡಾ ತಾಲೂಕಿನಿಂದ ಇಪ್ಪತ್ತು ಕಿಲೋಮೀಟರ್ ದೂರದಲ್ಲಿದೆ. ಅಲ್ಲಿ ಆಕೆಗೆ ಪ್ರವೇಶ ನಿರಾಕರಿಸಲಾಯಿತು ಎಂದು ಆರೋಪಿಸಲಾಗಿದೆ.
ವ್ಹೀಲ್ ಛೇರ್ ಅನ್ನು ದೇವಾಲಯದೊಳಕ್ಕೆ ತೆಗೆದುಕೊಂಡು ಹೋಗಲು ದೇವಾಲಯದ ಟ್ರಸ್ಟಿ ಒಪ್ಪಲಿಲ್ಲ. "ದೇವಸ್ಥಾನದೊಳಗೆ ವಾಹನಗಳಿಗೆ ಪ್ರವೇಶವಿಲ್ಲ" ಎಂದು ತಿಳಿಸಿದರು ಎಂಬುದನ್ನು ಸನಿಕಾ ಕೇಸ್ಕರ್ ರ ತಾಯಿ ಹೇಳಿದ್ದಾರೆ. ಈ ಧೋರಣೆ ವಿರುದ್ಧ ಅವರು ಆನ್ ಲೈನ್ ಅರ್ಜಿ ಸಹ ಸಲ್ಲಿಸಿದ್ದಾರೆ.
ದೇವಾಲಯದಲ್ಲಿ ತೋರಿದ ವರ್ತನೆ ವಿರುದ್ಧ ಇದೀಗ ಗೋವಾದ ಎನ್ ಜಿಒ ದೂರು ದಾಖಲಿಸಿದೆ. ಇದೊಂದು ಕ್ರಿಮಿನಲ್ ಅಪರಾಧ ಎಂದು ಕೂಡ ಹೇಳಿದೆ. "ಪೂಜೆಗೆ ಅವಕಾಶ ನಿರಾಕರಿಸಿರುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ" ಎಂಬುದನ್ನು ಸಹ ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಲಾಗಿದೆ.
ದಕ್ಷಿಣ ಗೋವಾದ ಎಸ್ ಪಿ ಅರವಿಂದ್ ಗವಾಸ್ ಈ ಬಗ್ಗೆ ಮಾತನಾಡಿದ್ದು, ನನ್ನವರೆಗೆ ಈ ದೂರು ಬಂದಿಲ್ಲ. ಬಂದ ನಂತರವಷ್ಟೇ ವಿಚಾರಣೆ ನಡೆಸುತ್ತೇವೆ. ಅದುವರೆಗೆ ಈ ಬಗ್ಗೆ ಏನೂ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications