ಗಾಂಧಿ, ನೆಹರೂ ಎನ್ಆರ್ ಐ ಎಂದ ರಾಹುಲ್ ವಿಡಿಯೋ ವೈರಲ್
ನವದೆಹಲಿ, ಸೆಪ್ಟೆಂಬರ್ 22: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ವ್ಯಾಖ್ಯಾನವೊಂದನ್ನು ಮಾಡಿದ್ದಾರೆ. ಆ ಪ್ರಕಾರ, ಕಾಂಗ್ರೆಸ್ ಪಕ್ಷ ಹುಟ್ಟಿಕೊಂಡಿದ್ದೇ ಎನ್ ಆರ್ ಐ ಚಳವಳಿಯಿಂದ.
"ಅಸಲಿ ಕಾಂಗ್ರೆಸ್ ಚಳವಳಿಯು ಎನ್ಆರ್ ಐ ಚಳವಳಿ. ಮಹಾತ್ಮ ಗಾಂಧಿ ಎನ್ಆರ್ ಐ. ನೆಹರೂ ಇಂಗ್ಲೆಂಡ್ ನಿಂದ ವಾಪಸ್ ಬಂದರು. ಅಂಬೇಡ್ಕರ್, ಆಜಾದ್, ಪಟೇಲ್ ಈ ಎಲ್ಲರೂ ಅನಿವಾಸಿ ಭಾರತೀಯರಾಗಿದ್ದರು" ಎಂದು ರಾಹುಲ್ ಗಾಂಧಿ ಗುರುವಾರ ಹೇಳಿದ ವಿಡಿಯೋ ಶುಕ್ರವಾರದಂದು ಗಿರಗಿರ ತಿರುಗಿ ವೈರಲ್ ಆಗಿದೆ.
ನವೆಂಬರ್ ನಲ್ಲಿ ರಾಹುಲ್ ಗಾಂಧಿಗೆ ಪಟ್ಟಾಭಿಷೇಕ
ಇಂಥದ್ದೊಂದು ಭಾಷಣ ರಾಹುಲ್ ಗಾಂಧಿ ಅವರು ಮಾಡಿದ್ದು ಅಮೆರಿಕದ ನ್ಯೂಯಾರ್ಕ್ ನಲ್ಲಿ. ಕಾಂಗ್ರೆಸ್ ನ ಅನಿವಾಸಿ ಭಾರತೀಯ ಬೆಂಬಲಿಗರು ಸುಮಾರು ಎರಡು ಸಾವಿರ ಮಂದಿಯಷ್ಟು ಸೇರಿದ್ದ ಸಭೆಯಲ್ಲಿ ರಾಹುಲ್ ಭಾಷಣ ಮಾಡಿದ್ದಾರೆ. ಅಂದ ಹಾಗೆ ಎರಡು ವಾರಗಳ ಅಮೆರಿಕ ಪ್ರವಾಸ ಕೈಗೊಂಡಿರುವ ರಾಹುಲ್ ಅವರ ಅಂತಿಮ ಹಂತದ ಪ್ರವಾಸ ಸಮಯ ಇದಾಗಿದೆ.
ನಿನ್ನೆಯ ಭಾಷಣದಲ್ಲಿ ರಾಹುಲ್ ಗಾಂಧಿ ಹೇಳಿದ ವಿಚಾರ ಧಾರೆಯನ್ನು ಬಿಡಿಬಿಡಿಯಾಗಿ ನಿಮ್ಮೆದುರು ಇಡಲಾಗಿದೆ, ಓದಿಕೊಳ್ಳಿ.
ಹೊರ ದೇಶದ ಆಲೋಚನೆ ಭಾರತದ ಬದಲಾವಣೆಗೆ
ಅವರೆಲ್ಲರೂ ಭಾರತದ ಹೊರಗೆ ತೆರಳಿ, ದೇಶಗಳನ್ನು ನೋಡಿಬಂದವರು. ಭಾರತಕ್ಕೆ ಹಿಂತಿರುಗಿದ ಮೇಲೆ ಅಲ್ಲಿನ ಆಲೋಚನೆಯನ್ನು ಬಳಸಿಕೊಂಡು ದೇಶದ ಬದಲಾವಣೆಗೆ ಪ್ರಯತ್ನಿಸಿದರು.
ವರ್ಗೀಸ್ ಕುರಿಯನ್ ಎನ್ಆರ್ ಐ
ಅಂಥ ಸಾವಿರಾರು ಎನ್ಆರ್ ಐಗಳಿದ್ದಾರೆ. ಅಂಥವರು ಭಾರತಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಬೇಕಾಗಿದೆ. ಶ್ವೇತ ಕ್ರಾಂತಿಯ ಹರಿಕಾರ ವರ್ಗೀಸ್ ಕುರಿಯನ್ ಅಂಥ ಎನ್ಆರ್ ಐಗಳ ಉದಾಹರಣೆಗಳಲ್ಲಿ ಒಬ್ಬರು. ಭಾರತದ ಯಶಸ್ಸುಗಳಲ್ಲಿ ಒಂದಾದ, ದೇಶದ ಬಹುಪಾಲು ಮಂದಿ ಕುಡಿಯುವ ಹಾಲಿನ ಯಶಸ್ಸಿನ ಗಾಥೆ ಹಿಂದೆ ಇರುವ ಕುರಿಯನ್ ಅಮೆರಿಕದಿಂದ ಬಂದು, ಭಾರತದಲ್ಲಿ ಬದಲಾವಣೆ ತಂದರು. ಇಂಥ ಸಾವಿರಾರು ಉದಾಹರಣೆಗಳಿದ್ದು, ಅವುಗಳನ್ನು ನಾವು ಗುರುತಿಸಿಲ್ಲ.
ಭಾರತದ ಬೆನ್ನೆಲುಬು
ಅವರು ವಿದೇಶದಲ್ಲಿ ನೆಲೆಸಿದ್ದಾರೆ ಅಂದ ಮಾತ್ರಕ್ಕೆ ತಾಯ್ನಾಡಿಗೆ ಏನೂ ಕೊಡುಗೆ ನೀಡಿಲ್ಲ ಎಂದರ್ಥವಲ್ಲ. ಅವರು ಕೂಡ ಭಾರತದ ಬೆನ್ನೆಲುಬು.
ಭಾರತವೆಂದರೆ ಆಲೋಚನೆಗಳ ಗುಚ್ಛ
ಈ ದೇಶದಲ್ಲಿ ಎಲ್ಲ ಕಡೆ ನೋಡಿ, ಭಾರತೀಯ ವ್ಯಕ್ತಿ ಅಮೆರಿಕಕ್ಕಾಗಿ ದುಡಿಯುತ್ತಿದ್ದಾರೆ. ಭಾರತಕ್ಕಾಗಿಯೂ ದುಡಿಯುತ್ತಿದ್ದಾರೆ. ಶಾಂತಿಯುತವಾಗಿ ಬದುಕುತ್ತಾ ಈ ದೇಶ ಮತ್ತು ನಮ್ಮ ದೇಶವನ್ನು ಕಟ್ಟುತ್ತಿದ್ದಾರೆ. ನೀವೆಲ್ಲ ನಮ್ಮ ದೇಶದ ಬೆನ್ನೆಲುಬು. ಭಾರತ ಅಂದರೆ ಬರೀ ಭೂಪ್ರದೇಶವಲ್ಲ, ಆಲೋಚನೆಗಳ ಗುಚ್ಛ. ಭಾರತದ ಏಳ್ಗೆಗಾಗಿ ಯಾರಿಗೆಲ್ಲ ಆಲೋಚನೆ ಇದೆಯೋ ಅವರೆಲ್ಲ ಭಾರತೀಯರು.
ಜಾಗತಿಕ ಮಟ್ಟದಲ್ಲಿ ದೇಶದ ಮರ್ಯಾದೆಗೆ ಧಕ್ಕೆ
ದೇಶದಲ್ಲಿರುವ ವಿಭಜಕ ಶಕ್ತಿಗಳು ಜಾಗತಿಕ ಮಟ್ಟದಲ್ಲಿ ಭಾರತದ ಮರ್ಯಾದೆಯನ್ನು ಕಳೆಯುತ್ತಿವೆ. ಆ ಮೂಲಕ ದೇಶದ ಸಹಿಷ್ಣುತೆ ಹಾಗೂ ಕೋಮು ಸೌಹಾರ್ದತೆಗೆ ಬೆದರಿಕೆಯಾಗಿವೆ.
ಹೆಚ್ಚುತ್ತಿರುವ ಕೋಮು ಹಿಂಸೆ
ಈ ಹದಿನಾಲ್ಕು ದಿನದ ಪ್ರವಾಸದಲ್ಲಿ ವಿವಿಧ ವರ್ಗ, ಕ್ಷೇತ್ರದ ಜನರನ್ನು ಮಾತನಾಡಿಸಿದೆ. ಎಲ್ಲರಲ್ಲೂ ಒಂದೇ ಬಗೆಯ ಕಾಳಜಿ ವ್ಯಕ್ತವಾಯಿತು. ಹೆಚ್ಚುತ್ತಿರುವ ಕೋಮು ಹಿಂದೆ ಹಾಗೂ ಅಸಹಿಷ್ಣುತೆ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಭಾರತದಲ್ಲಿನ ಕೋಮು ಸೌಹಾರ್ದ, ಸಹಿಷ್ಣುತೆ ಬಗ್ಗೆಯೇ ಪ್ರಶ್ನೆ ಕೇಳಿದರು. ಭಾರತದಲ್ಲಿ ಈಗ ವಿಭಜಕ ರಾಜಕೀಯ ನಡೆಯುತ್ತಿದೆ.
ನಿರುದ್ಯೋಗದ ಗಂಭೀರ ಸಮಸ್ಯೆ
ಭಾರತದಲ್ಲಿ ಏನಾಗಿದೆ ಅಂದರೆ 30 ಸಾವಿರ ಜನ ಉದ್ಯೋಗಕ್ಕಾಗಿ ಎದುರು ನೋಡುತ್ತಿದ್ದರೆ, 450 ಮಂದಿಗೆ ಕೆಲಸ ಸಿಗುತ್ತಿದೆ. ಇದೇ ರೀತಿ ಮುಂದುವರಿದರೆ ಏನಾಗುತ್ತದೆ ಎಂಬುದನ್ನು ನೀವೇ ಊಹಿಸಿ. ಭಾರತದಲ್ಲಿ ಯುವಜನರಿಗೆ ಉದ್ಯೋಗ ನೀಡದ ಹೊರತು ಅವರಿಗೆ ದೂರದೃಷ್ಟಿ ನೀಡಲು ಸಾಧ್ಯವಿಲ್ಲ.