ಗಂಗಾ ನದಿ ಶುದ್ಧೀಕರಣ: ಗತವೈಭವ ಮರಳುವುದೆ?
ನವದೆಹಲಿ, ಜೂ 7: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಗಂಗಾ ನದಿ ಶುದ್ಧೀಕರಣ ಯೋಜನೆ ವೇಗ ಪಡೆದುಕೊಳ್ಳುತ್ತಿದೆ. ಈ ಯೋಜನೆಗೆ ನಾಲ್ಕು ಸಚಿವಾಲಯಗಳು ಒಟ್ಟಾಗಿ ಕೈಜೋಡಿಸಿ ಕಾರ್ಯ ನಿರ್ವಹಿಸಲಿವೆ ಎಂದು ಕೇಂದ್ರ ಜಲ ಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾನದಿ ಪುನಶ್ಚೇತನ ಖಾತೆ ಸಚಿವೆ ಉಮಾಭಾರತಿ ಹೇಳಿದ್ದಾರೆ.
ಶುಕ್ರವಾರ (ಜೂ 6) ನಾಲ್ಕು ಸಚಿವಾಲಯದ ಸಚಿವರು ಮತ್ತು ಅಧಿಕಾರಿಗಳ ಜೊತೆ ನಡೆಸಿದ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಉಮಾ, ಸಚಿವಾಲಯದ ಎಲ್ಲರ ಅಭಿಪ್ರಾಯವನ್ನು ಕ್ರೋಢೀಕರಿಸಿ ಮುನ್ನಡೆಯುತ್ತೇವೆ. ಗಂಗಾ ನದಿಯ ಗತವೈಭವವನ್ನು ಮರುಕಳಿಸುವುದು ನಮ್ಮ ಮೊದಲ ಆದ್ಯತೆ ಎಂದು ಹೇಳಿದ್ದಾರೆ. (ಫೈರ್ ಬ್ರ್ಯಾಂಡ್ ಹೆಗಲಿಗೆ ಗಂಗಾ ಶುದ್ಧೀಕರಣದ ಹೊಣೆ)
ಭೂಸಾರಿಗೆ, ಪ್ರವಾಸೋದ್ಯಮ, ಹಡಗು ಮತ್ತು ಜನಸಂಪನ್ಮೂಲ ಸಚಿವಾಲಯ ಜೊತೆಯಾಗಿ ಈ ಯೋಜನೆಯನ್ನು ಕೈಗೆತ್ತಿಕೊಂಡು ಗಂಗಾ ನದಿ ದಂಡೆ ಪ್ರದೇಶಗಳನ್ನು ಧಾರ್ಮಿಕ ಮತ್ತು ಆಧ್ಯಾತ್ಮಿಕ ಕೇಂದ್ರವನ್ನಾಗಿ ಮಾಡುವ ಪ್ರಾಮಾಣಿಕ ಉದ್ದೇಶವನ್ನು ಹೊಂದಿದ್ದೇವೆ.
ಈ ಯೋಜನೆ ಪೂರ್ಣಗೊಳ್ಳಲು ದೇವರು ಮತ್ತು ಗಂಗಾ ಮಾತೆ ನಮಗೆ ಶಕ್ತಿ ನೀಡಲಿದ್ದಾಳೆ ಎನ್ನುವ ಅಚಲ ನಂಬಿಕೆಯಿಂದ ಮುನ್ನಡೆಯುತ್ತೇವೆ. ಗಂಗಾ ನದಿಯಂತೆ ದೇಶದ ಇತರ ಎಲ್ಲಾ ನದಿಗಳು ನಮಗೆ ಮುಖ್ಯ ಎಂದು ಉಮಾಭಾರತಿ ಹೇಳಿದ್ದಾರೆ.

ಗಂಗೆಗೆ ಮೊದಲ ಆದ್ಯತೆ
ಗಂಗಾ ನದಿಯನ್ನು ಶುದ್ದೀಕರಿಸುವ ಯೋಜನೆ ನಾವು ಆದ್ಯತೆಯಲ್ಲಿ ಕೈಗೆತ್ತಿಕೊಂಡಿರುವುದು ಕ್ಲಿಷ್ಟಕರವಾದ ಯೋಜನೆಯೊಂದನ್ನು ಯಶಸ್ವಿಗೊಳಿಸಿ ಮಾದರಿಯಾಗಲಿ ಎನ್ನುವುದಕ್ಕಾಗಿ. ದೇಶದ ಇತರ ರಾಜ್ಯಗಳಲ್ಲೂ ನದಿ ಶುದ್ಧೀಕರಣದ ಅವಶ್ಯಕತೆ ಬಿದ್ದಲ್ಲಿ ಈ ಯೋಜನೆ ಮಾದರಿಯಾಗಲಿ - ಉಮಾಭಾರತಿ.

ನಿತಿನ್ ಗಡ್ಕರಿ
ಮಾಜಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಂತರ ಮಾತನಾಡುತ್ತಿದ್ದ ಉಮಾ, ಕೇಂದ್ರ ಸರಕಾರ ಮತ್ತು ಪ್ರಧಾನಿ ಈ ಯೋಜನೆಗೆ ಅತಿ ಪ್ರಮುಖ ಆದ್ಯತೆ ನೀಡಿರುವುದು ಗಂಗಾ ಶುದ್ಧೀಕರಣ ಯೋಜನೆಗೆ ಇನ್ನಷ್ಟು ಶಕ್ತಿ ನೀಡಿದಂತಾಗಿದೆ ಎಂದಿದ್ದಾರೆ.

ಹೂಳೆತ್ತುವ ಕೆಲಸ
ಮೊದಲ ಹಂತದಲ್ಲಿ ವಾರಣಾಸಿಯಿಂದ ಹೂಗ್ಲಿಯವರೆಗೆ ಗಂಗಾ ನದಿಯನ್ನು 45 ಮೀಟರ್ ಆಳದವರೆಗೆ ಹೂಳೆತ್ತುವ ಕೆಲಸ ಕೈಗೊಳ್ಳಲಿದ್ದೇವೆ. ಇದರಿಂದ ಪರಿಸರದ ಮೇಲಾಗಬಹುದಾದ ಪರಿಣಾಮದ ಕುರಿತು ಪರಿಸರ ಸಚಿವಾಲಯ ವರದಿ ನೀಡಲಿದೆ. ನಾಲ್ಕು ಸಚಿವಾಲಯಗಳ ಕಾರ್ಯದರ್ಶಿಗಳು ಒಂದು ತಿಂಗಳೊಳಗೆ ಸವಿವರವಾದ ವರದಿಯನ್ನು ಸಲ್ಲಿಸಲಿದ್ದಾರೆ - ನಿತಿನ್ ಗಡ್ಕರಿ.

ಇದು ಸಾಮಾನ್ಯ ಯೋಜನೆಯಲ್ಲ
ಗಂಗಾ ಶುದ್ಧೀಕರಣ ಸಾಮಾನ್ಯ ಯೋಜನೆಯಲ್ಲ ಎನ್ನುವ ಸತ್ಯ ನಮಗೆ ತಿಳಿದಿದೆ. ಚುನಾವಣೆಯ ಸಂದರ್ಭದಲ್ಲಿ ಜನತೆಗೆ ನಾವು ಮಾತು ಕೊಟ್ಟಿದ್ದೇವೆ. ಯೋಜನೆ ಕಾರ್ಯಗತದ ಬಗ್ಗೆ ಪೂರ್ವಾಪರ ಆಲೋಚಿಸಿಯೇ ನಾವು ಚುನಾವಣೆಯಲ್ಲಿ ಜನರಿಗೆ ಭರವಸೆ ನೀಡಿದ್ದು - ಉಮಾಭಾರತಿ

ಜನಸಂಪನ್ಮೂಲ ಇಲಾಖೆ
ಜನಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಈ ಯೋಜನೆಯ ಮುಖ್ಯಸ್ಥರಾಗಲಿದ್ದಾರೆ. ಸವಿವರವಾದ ವರದಿ ಒಂದು ತಿಂಗಳಿನಲ್ಲಿ ತಯಾರಾಗಲಿದೆ. ನಂತರ ನಾಲ್ಕೂ ಸಚಿವಾಲಯದ ಅನುಮತಿ ಪಡೆದು, ಕ್ಯಾಬಿನೆಟ್ ಅನುಮೋದನೆಗೆ ಕಳುಹಿಸಲಾಗುವುದು. ಈ ಯೋಜನೆ ಪೂರ್ಣವಾಗಲು ಸಹಕಾರಿಯಾಗುವಂತೆ ಇನ್ನಷ್ಟು ಉದ್ಯೋಗ ಅವಕಾಶ ಸೃಷ್ಟಿಯಾಗಬಹುದು - ಉಮಾಭಾರತಿ












Click it and Unblock the Notifications