ರಾಜ್ಯಸಭೆಗೆ ನಾಮ ನಿರ್ದೇಶನ ಮತ್ತು ಹೈದರಾಬಾದ್ ಬಿಜಿಪಿ ಕಾರ್ಯಕಾರಿಣಿ
ಸರಕಾರ ಯಾವುದೇ ಕ್ರಮ ತೆಗೆದುಕೊಂಡರೂ ಅದರ ಸುತ್ತ ಹಲವು ಆಯಾಮಗಳ ಚರ್ಚೆ ನಡೆಯುವುದು ಸ್ವಾಭಾವಿಕ. ಕೆಲವರು ಸರಕಾರದ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡರೆ, ಮತ್ತೆ ಕೆಲವರು ಅದರ ಹಿಂದೆ ಬೇರೇನಾದರೂ ಲೆಕ್ಕಾಚಾರವಿದೆಯೇ? ಎಂದು ನೋಡುವುದು ಸಹಜ.
ಹಲವು ಕ್ಷೇತ್ರಗಳಲ್ಲಿ ಕೊಡುಗೆ ನೀಡಿದ ವ್ಯಕ್ತಿಗಳನ್ನು ರಾಜ್ಯಸಭೆಗೆ ನಾಮ ನಿರ್ದೇಶನ ಮಾಡುವುದು ಒಂದು ಪ್ರಕ್ರಿಯೆ. ಅದರಂತೆಯೇ, ನಾಲ್ಕು ಗಣ್ಯರನ್ನು ಕೇಂದ್ರ ಸರಕಾರ ರಾಜ್ಯಸಭೆಯ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿದೆ.
ಕರ್ನಾಟಕದಿಂದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ, ಕೇರಳದಿಂದ ಅಥ್ಲೀಟ್ ಪಿ. ಟಿ. ಉಷಾ, ತಮಿಳುನಾಡಿನಿಂದ ಇಳಯರಾಜ ಮತ್ತು ತೆಲಂಗಾಣದಿಂದ ವಿಜಯೇಂದ್ರ ಪ್ರಸಾದ್ ಅವರನ್ನು ರಾಜ್ಯಸಭೆಗೆ ಆಯ್ಕೆ ಮಾಡಲಾಗಿದೆ.
ಆ ಮೂಲಕ ಧಾರ್ಮಿಕ/ ಸಾಮಾಜಿಕ, ಕ್ರೀಡಾ, ಸಂಗೀತ ಮತ್ತು ಸಿನಿಮಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಕೇಂದ್ರ ಸರಕಾರ ಮನ್ನಣೆಯನ್ನು ನೀಡಿದೆ ಎನ್ನುವುದು ಒಂದು ಕಡೆ. ಇನ್ನೊಂದು ಕಡೆ, ಈ ನಾಲ್ವರೂ ದಕ್ಷಿಣ ಭಾರತದವರು ಎನ್ನುವುದು ಇನ್ನೊಂದು ಕಡೆ.

ಕೇಂದ್ರ ಸರಕಾರ ದಕ್ಷಿಣ ಭಾರತದ ಗಣ್ಯರನ್ನು ಆಯ್ಕೆ ಮಾಡಿರುವುದು
ತೀರಾ ಅಪರೂಪ ಎನ್ನುವಂತೆ ರಾಜ್ಯಸಭೆ ನಾಮ ನಿರ್ದೇಶನ ಆಯ್ಕೆಗೆ ಕೇಂದ್ರ ಸರಕಾರ ದಕ್ಷಿಣ ಭಾರತದ ಗಣ್ಯರನ್ನು ಆಯ್ಕೆ ಮಾಡಿರುವುದರಿಂದ ಇದರ ಸುತ್ತ ಕೆಲವೊಂದು ಚರ್ಚೆಗಳು ಆರಂಭವಾಗಿವೆ. ಆಯ್ಕೆಯಾದ ನಾಲ್ವರನ್ನೂ ಪ್ರಧಾನಿ ಮೋದಿ ಪ್ರತ್ಯೇಕವಾಗಿ ಅಭಿನಂದಿಸಿದ್ದಾರೆ. ಹೈದರಾಬಾದ್ನಲ್ಲಿ ನಡೆದ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಮುಗಿದ ಕೆಲವೇ ದಿನಗಳಲ್ಲಿ ಕೇಂದ್ರ ಸರಕಾರದ ಈ ಆಯ್ಕೆ ಗಮನ ಸೆಳೆದಿದೆ.

ಮೈಸೂರಿನಲ್ಲಿ ನಡೆದ ಯೋಗ ದಿನಾಚರಣೆ ಕಾರ್ಯಕ್ರಮ
ಮುಂದಿನ ವರ್ಷ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಅಸೆಂಬ್ಲಿ ಚುನಾವಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಮೈಸೂರಿನಲ್ಲಿ ನಡೆದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಇದಾದ ನಂತರ ತೆಲಂಗಾಣದ ಹೈದರಾಬಾದ್ನಲ್ಲಿ ನಡೆದ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿಯ ಎಲ್ಲಾ ದೊಡ್ಡ ನಾಯಕರು ಭಾಗವಹಿಸಿದ್ದರು. ಚುನಾವಣಾ ದೃಷ್ಟಿಯಿಂದಲೇ ಈ ಕಾರ್ಯಕ್ರಮಗಳನ್ನು ಕರ್ನಾಟಕ ಮತ್ತು ತೆಲಂಗಾಣದಲ್ಲಿ ಆಯೋಜಿಸಲಾಗಿತ್ತು ಎಂದು ವ್ಯಾಖ್ಯಾನಿಸಲಾಗಿತ್ತು.

ಹಿಂದಿ ಹೇರಿಕೆಯ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿದೆ
ಈಗ, ದಕ್ಷಿಣ ಭಾರತದ ನಾಲ್ವರಿಗೆ ರಾಜ್ಯಸಭೆಗೆ ಆಯ್ಕೆ ಮಾಡಿರುವ ಹಿನ್ನಲೆಯೂ ಪಕ್ಷವನ್ನು ಬಲಪಡಿಸುವ ಉದ್ದೇಶ ಎಂದೂ ವಿಶ್ಲೇಷಿಸಲಾಗುತ್ತಿದೆ. ಸ್ಥಳೀಯ ಭಾಷೆಗಳನ್ನು ಹತ್ತಿಕ್ಕುವ ಕೆಲಸ ಮತ್ತು ಹಿಂದಿ ಹೇರಿಕೆಯ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿದೆ ಎನ್ನುವ ಚರ್ಚೆ ಇನ್ನೂ ಹಸಿಬಿಸಿಯಾಗಿರುವ ಸಂದರ್ಭದಲ್ಲಿ ಕೇಂದ್ರದ ನಾಮ ನಿರ್ದೇಶನ ಸ್ವಾಭಾವಿಕವಾಗಿ ಆ ಆಯಾಮದಲ್ಲಿ ಆಲೋಚಿಸುವಂತೆ ಮಾಡಿದೆ.

ಹಿಂದೂ ಮತಬ್ಯಾಂಕುಗಳೇ ನಮಗೆ ಮುಖ್ಯ
ಕರ್ನಾಟಕ ಹೊರತಾಗಿ ಬಿಜೆಪಿಗೆ ಎಲ್ಲೂ ಅಷ್ಟೊಂದು ಪ್ರಾಭಲ್ಯವಿಲ್ಲ. ತೆಲಂಗಾಣದಲ್ಲಿ ಪಕ್ಷದ ಬೇರು ವೃದ್ದಿಯಾಗುತ್ತಿರುವುದನ್ನು ಅರಿತಿರುವ ಕೇಂದ್ರ ಸರಕಾರ ಈ ಎರಡು ರಾಜ್ಯಗಳ ಮೇಲೆ ವಿಶೇಷ ಆಸಕ್ತಿಯನ್ನು ವಹಿಸಿದೆ. ವೀರೇಂದ್ರ ಹೆಗ್ಗಡೆ ಧಾರ್ಮಿಕ ಮುಖಂಡರು, ವಿಜಯೇಂದ್ರ ಪ್ರಸಾದ್ ಕಥೆ ನೀಡಿದ ಸಿನಿಮಾವೆಲ್ಲವೂ ಬಹುತೇಕ ಹಿಂದೂ ಅರಸರು/ ಸಾಮ್ರಾಜ್ಯದ್ದು, ಇನ್ನು ಇಳಯರಾಜ ಸಂಗೀತ ನೀಡಿದ ಭಕ್ತಿಗೀತೆಗಳು ಸಾಕಷ್ಟು ಜನಪ್ರಿಯತೆಯನ್ನು ಪಡೆದಿದೆ. ಈ ಹಿನ್ನಲೆಯಲ್ಲಿ ಹಿಂದೂ ಮತಬ್ಯಾಂಕುಗಳೇ ನಮಗೆ ಮುಖ್ಯ ಎನ್ನುವುದನ್ನು ಸಾರಲು ಈ ರಾಜ್ಯಸಭೆ ನಾಮ ನಿರ್ದೇಶನ ನಡೆದಿದೆ ಎನ್ನುವ ಮಾತೂ ಚಾಲ್ತಿಯಲ್ಲಿದೆ.












Click it and Unblock the Notifications