Breaking: ಭಾರತದ ಉಕ್ಕಿನ ಮನುಷ್ಯ ಜಮ್ಶೆಡ್ ಇರಾನಿ ನಿಧನ
ನವದೆಹಲಿ, ನವೆಂಬರ್ 1: ಭಾರತದ ಉಕ್ಕಿನ ಮನುಷ್ಯ ಎಂದು ಕರೆಯಲ್ಪಡುತ್ತಿದ್ದ ಟಾಟಾ ಸ್ಟೀಲ್ ಮಾಜಿ ಎಂಡಿ ಜಮ್ಶೆಡ್ ಜೆ ಇರಾನಿ ಸೋಮವಾರ ತಡರಾತ್ರಿ ಜೆಮ್ಶೆಡ್ಪುರದ ಟಾಟಾ ಮುಖ್ಯ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ 86 ವರ್ಷ ವಯಸ್ಸಾಗಿತ್ತು. ಅವರಿಗೆ ಪತ್ನಿ ಡೈಸಿ ಮತ್ತು ಮೂವರು ಮಕ್ಕಳು ಇದ್ದಾರೆ. ಭಾರತದ ಉಕ್ಕಿನ ಮನುಷ್ಯ ಎಂದು ಪ್ರೀತಿಯಿಂದ ಕರೆಯಲಾಗುವ ಪದ್ಮಭೂಷಣ ಡಾ. ಜಮ್ಶೆಡ್ ಜೆ. ಇರಾನಿ ಅವರ ನಿಧನದಿಂದ ನಾವು ತೀವ್ರ ದುಃಖಿತರಾಗಿದ್ದೇವೆ. ಟಾಟಾ ಸ್ಟೀಲ್ ಕುಟುಂಬವು ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ತನ್ನ ಆಳವಾದ ಸಂತಾಪವನ್ನು ಸೂಚಿಸುತ್ತದೆ ಎಂದು ಟಾಟಾ ಸ್ಟೀಲ್ ಟ್ವೀಟ್ ಮಾಡಿದೆ.
'ತಲೆಗೆ ಆಳವಾದ ಗಾಯ, ಆಂತರಿಕ ರಕ್ತಸ್ರಾವ' ಸೈರಸ್ ಮಿಸ್ತ್ರಿ ಸಾವಿಗೆ ಕಾರಣ ತಿಳಿಸಿದ ವೈದ್ಯರು
ಇರಾನಿ ಅವರು ಜೂನ್ 2011ರಲ್ಲಿ ಟಾಟಾ ಸ್ಟೀಲ್ ಮಂಡಳಿಯಿಂದ ನಿವೃತ್ತರಾಗಿದ್ದರು. ಇರಾನಿ ಅವರು ನಾಲ್ಕು ದಶಕಗಳಿಂದ ಭಾರತೀಯ ಉದ್ಯಮ, ಉಕ್ಕಿನ ವ್ಯಾಪಾರ ಮತ್ತು ಟಾಟಾಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರು 1963 ರಲ್ಲಿ ಬ್ರಿಟಿಷ್ ಐರನ್ ಮತ್ತು ಸ್ಟೀಲ್ ರಿಸರ್ಚ್ ಅಸೋಸಿಯೇಷನ್, ಶೆಫೀಲ್ಡ್ನಲ್ಲಿ ಹಿರಿಯ ವೈಜ್ಞಾನಿಕ ಅಧಿಕಾರಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು.
1968ರಲ್ಲಿ ಭಾರತಕ್ಕೆ ಹಿಂದಿರುಗಿದರು. ನಂತರ 1979ರಲ್ಲಿ ಅವರು ಟಾಟಾ ಸ್ಟೀಲ್ ನಿರ್ದೇಶಕರ (ಆರ್ & ಡಿ) ಸಹಾಯಕರಾಗಿ ಕೆಲಸಕ್ಕೆ ಸೇರಿದರು. ಅವರು 1985 ರಲ್ಲಿ ಜನರಲ್ ಮ್ಯಾನೇಜರ್ ಮತ್ತು ಅಧ್ಯಕ್ಷರಾಗಿ ನೇಮಕಗೊಂಡರು. ಅವರು 1992ರಲ್ಲಿ ವ್ಯವಸ್ಥಾಪಕ ನಿರ್ದೇಶಕರಾದರು. ಅವರು ಜುಲೈ 2001 ರವರೆಗೆ ಈ ಸ್ಥಾನವನ್ನು ಹೊಂದಿದ್ದರು.
ನಾಗಪುರ ವಿಶ್ವವಿದ್ಯಾನಿಲಯದಿಂದ ಭೂವಿಜ್ಞಾನದಲ್ಲಿ ಎಂಎಸ್ಸಿ ಪದವಿ ಪಡೆದಿದ್ದ ಇರಾನಿ ಯುಕೆಯ ಶೆಫೀಲ್ಡ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪ್ರಮಾಣಪತ್ರವನ್ನು ಹೊಂದಿದ್ದಾರೆ. ಇರಾನಿ ಅವರಿಗೆ ಪದ್ಮಭೂಷಣ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಸಹ ನೀಡಲಾಗಿದೆ. ಟಾಟಾ ಸ್ಟೀಲ್ನ ಮಾಜಿ ಎಂಡಿ ಡಾ ಜೆಜೆ ಇರಾನಿ ಅವರ ನಿಧನದ ದುಃಖದ ಸುದ್ದಿಯನ್ನು ಕೇಳಿದ್ದೇನೆ. ಅವರೊಂದಿಗೆ ನನಗೆ ಆತ್ಮೀಯ ಸಂಬಂಧವಿತ್ತು. ಅವರು ಒಬ್ಬ ಸಮರ್ಥ ಆಡಳಿತಗಾರ ಮತ್ತು ಮಹಾನ್ ನಾಯಕರಾಗಿ ಸದಾ ಸ್ಮರಿಸಲ್ಪಡುತ್ತಾರೆ. ದೇವರು ಅಗಲಿದ ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ. ಕುಟುಂಬ ಸದಸ್ಯರಿಗೆ ಧೈರ್ಯ, ಶಾಂತಿ ನೀಡಲಿ ಎಂದು ಜಾರ್ಖಂಡ್ನ ಆರೋಗ್ಯ ಸಚಿವ ಬನ್ನಾ ಗುಪ್ತಾ ಟ್ವೀಟ್ ಮೂಲಕ ಇರಾನಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.