ಪಂಜಾಬ್ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಬಿಜೆಪಿ ಸೇರ್ಪಡೆ!
ನವದೆಹಲಿ ಮೇ 19: ಕೆಲವು ದಿನಗಳ ಹಿಂದೆ ಕಾಂಗ್ರೆಸ್ ತೊರೆದಿದ್ದ ಸುನೀಲ್ ಜಖರ್ ಬಿಜೆಪಿ ಸೇರಿದರು. ಸುನೀಲ್ ಪಂಜಾಬ್ ಕಾಂಗ್ರೆಸ್ನ ರಾಜ್ಯಾಧ್ಯಕ್ಷರಾಗಿದ್ದರು. ಮೇ 14ರಂದು ಸುನೀಲ್ ಜಾಖರ್ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.
ಗುರುವಾರ ನವದೆಹಲಿಯ ಬಿಜೆಪಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಸಮ್ಮುಖದಲ್ಲಿ ಸುನೀಲ್ ಜಾಖರ್ ಬಿಜೆಪಿ ಸೇರಿದರು. ಕೇಸರಿ ಶಾಲು ಹೊದಿಸಿ ಸುನೀಲ್ರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ಆರೋಪದ ಮೇಲೆ ಕಾಂಗ್ರೆಸ್ ಸುನೀಲ್ ಜಾಖರ್ ವಿರುದ್ಧ ಕ್ರಮ ಕೈಗೊಂಡಿತ್ತು. ಕಾಂಗ್ರೆಸ್ ಶಿಸ್ತು ಸಮಿತಿಯು ಜಾಖರ್ ಮತ್ತು ಕೆ. ವಿ. ಥಾಮಸ್ರನ್ನು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ ಎಂದು ಪಕ್ಷದ ಎಲ್ಲಾ ಹುದ್ದೆಗಳಿಂದ ತೆಗೆದುಹಾಕಿತ್ತು.
ಬಳಿಕ ಸುನೀಲ್ ಜಾಖರ್ ಕಾಂಗ್ರೆಸ್ ನಾಯಕತ್ವದ ವಿರುದ್ಧ ಅಸಮಾಧಾನಗೊಂಡಿದ್ದರು. ಪಕ್ಷದ ಮೂಲಗಳ ಪ್ರಕಾರ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಶಿಸ್ತು ಸಮಿತಿಯ ಶಿಫಾರಸಿನ ಹೊರತಾಗಿಯೂ ಅವರನ್ನು ಪಕ್ಷದಿಂದ ಅಮಾನತುಗೊಳಿಲು ಬಯಸಿರಲಿಲ್ಲ. ಆದರೆ ಮೇ 14ರಂದು ಸ್ವತಃ ಸುನೀಲ್ ಜಾಖರ್ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.

50 ವರ್ಷಗಳ ಸಂಬಂಧ ಅಧಿಕೃತವಾಗಿ ಅಂತ್ಯ
ಜೆ. ಪಿ. ನಡ್ಡಾ ನೇತೃತ್ವದಲ್ಲಿ ಬಿಜೆಪಿ ಸೇರಿದ ನಂತರ ಮಾತನಾಡಿದ ಸುನೀಲ್ ಜಾಖರ್, "ಕಳೆದ 50 ವರ್ಷಗಳಿಂದ ನನ್ನ ಕುಟುಂಬದ ಮೂರು ತಲೆಮಾರು ಕಾಂಗ್ರೆಸ್ ಪಕ್ಷದ ಸೇವೆ ಮಾಡಿದ್ದೆವು. ಇಂದು ನಾನು ಈ ಐದು ದಶಕದ ಸಂಬಂಧವನ್ನು ಅಧಿಕೃತವಾಗಿ ಕಳೆದುಕೊಳ್ಳುತ್ತಿದ್ದೇನೆ. ನನಗೆ ವೈಯಕ್ತಿಕ ಲಾಭಕ್ಕಿಂತ ಪಂಜಾಬ್ನಲ್ಲಿ ರಾಷ್ಟ್ರೀಯತೆ, ಒಗ್ಗಟ್ಟು ಹಾಗೂ ಸಹೋದರತೆ ಮುಖ್ಯ" ಎಂದರು.
|
ಪಕ್ಷ ಬಲಪಡಿಸಲು ಜಾಖರ್ ಪಾತ್ರ
ಸುನೀಲ್ ಜಾಖರ್ ಪಕ್ಷ ಸೇರ್ಪಡೆಯ ನಂತರ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ, "ನಾನು ಸುನೀಲ್ ಅವರನ್ನು ಭಾರತೀಯ ಜನತಾ ಪಕ್ಷಕ್ಕೆ ಆತ್ಮೀಯವಾಗಿ ಸ್ವಾಗತಿಸುತ್ತೇನೆ. ಅವರೊಬ್ಬ ಅನುಭವಿ ರಾಜಕಾರಣಿ. ತಮ್ಮ ರಾಜಕೀಯ ವೃತ್ತಿ ಜೀವನದಲ್ಲಿ ಗಾಢ್ ಫಾದರ್ ಇಲ್ಲದೆ ಉತ್ತಮ ಹೆಸರು ಸಂಪಾದಿಸಿಕೊಂಡಿದ್ದಾರೆ. ಪಂಜಾಬ್ನಲ್ಲಿ ಬಿಜೆಪಿ ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸುವರೆಂಬ ನಂಬಿಕೆ ನನಗಿದೆ" ಎಂದು ಹೇಳಿದರು.

ಗಡಿರಾಜ್ಯದಲ್ಲಿ ರಾಷ್ಟ್ರೀಯವಾದಿ ನಾಯಕನ ಅಗತ್ಯವಿತ್ತು
"ಪಂಜಾಬ್ ದೇಶದ ಗಡಿ ರಾಜ್ಯವಾಗಿದ್ದು, ಅಲ್ಲಿ ಸುನೀಲ್ ಜಾಖರ್ ಅಂತಹ ಒಬ್ಬ ರಾಷ್ಟ್ರೀಯವಾದಿ ನಾಯಕನ ಅಗತ್ಯವಿತ್ತು. ಪಂಜಾಬ್ನಲ್ಲಿ ಗಡಿಭದ್ರತೆಗೆ ಹಾನಿಕಾರಕವಾದ ಸಮಸ್ಯೆಗಳಿವೆ. ಅಂತಹ ಸಮಸ್ಯೆಗಳನ್ನು ಸೋಲಿಸಲು ರಾಷ್ಟ್ರೀಯತೆಯಲ್ಲಿ ಬಲವಾದ ನಂಬಿಕೆಯುಳ್ಳ ಒಬ್ಬ ಪ್ರಬಲ ನಾಯಕನನ್ನು ನಾವು ಪಕ್ಷಕ್ಕೆ ಸ್ವಾಗತಿಸಿದ್ದೇವೆ" ಎಂದು ಜೆ. ಪಿ. ನಡ್ಡಾ ತಿಳಿಸಿದರು.












Click it and Unblock the Notifications