ಮಲ್ಯಗೆ ಕೋಟ್ಯಂತರ ರು. ಸಾಲ ಕೊಡಿಸಿದ್ದು ಮನಮೋಹನ್ ಸಿಂಗ್ ?
ವಿಜಯ್ ಮಲ್ಯ ಅವರು ಭಾರತೀಯ ಬ್ಯಾಂಕುಗಳಿಗೆ ಕೋಟ್ಯಂತರ ವಂಚಿಸಿರುವುದರ ಹಿಂದೆ ಕಾಂಗ್ರೆಸ್ ಸರ್ಕಾರದ ಕೈವಾಡವಿದೆ ಎಂಬುದು ಬಿಜೆಪಿಯ ಆರೋಪ
ನವದೆಹಲಿ, ಜನವರಿ 30: ವಿಜಯ್ ಮಲ್ಯಗೆ ಸಾವಿರಾರು ಕೋಟಿ ಸಾಲ ಸಿಕ್ಕಿದ್ದಾದರೂ ಹೇಗೆ? ಬ್ಯಾಂಕುಗಳು ಹೇಗೆ ಅವರನ್ನು ನಂಬಿದವು, ಅದ್ಯಾವ ಗ್ಯಾರಂಟಿ ಮೇಲೆ ಅವರಿಗೆ ಅಷ್ಟು ಸಾಲ ನೀಡಲಾಗಿತ್ತು ಎಂಬಿತ್ಯಾದಿ ಪ್ರಶ್ನೆಗಳಿಗೆ ಬಿಜೆಪಿ ಉತ್ತರಿಸಿದೆ.
ಸೋಮವಾರ, ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿಯ ವಕ್ತಾರ ಸಂಬಿತ್ ಪಾತ್ರ ಅವರು, ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರೇ ವಿಜಯ್ ಮಲ್ಯ ಅವರಿಗೆ ಕೋಟ್ಯಂತರ ರು. ಸಾಲ ಸಿಗುವಂತೆ ಮಾಡಿದ್ದರೆಂದು ಆರೋಪಿಸಿದ್ದಾರೆ.
ಪ್ರಧಾನಿಯಾಗಿದ್ದಾಗ ಮನಮೋಹನ್ ಸಿಂಗ್ ಅವರು, ಅಂದಿನ ಹಣಕಾಸು ಸಚಿವರಾಗಿದ್ದ ಪಿ. ಚಿದಂಬರಂ ಅವರಿಗೆ 2011 ಹಾಗೂ 2013ರಲ್ಲಿ ಎರಡು ಬಾರಿ ಪತ್ರ ಬರೆದು ಬ್ಯಾಂಕುಗಳಿಗೆ ಸಾಲ ನೀಡುವಂತೆ ಮಲ್ಯ ಸಲ್ಲಿಸಿರುವ ಅರ್ಜಿಗಳು ಬೇಗನೇ ವಿಲೇವಾರಿಯಾಗುವಂತೆ ನೋಡಿಕೊಳ್ಳುವಂತೆ ಶಿಫಾರಸು ಮಾಡಿದ್ದಾರೆ. ಆ ಪತ್ರಗಳು ಕೆಲ ಮಾಧ್ಯಗಳಲ್ಲಿ ಹರಿದಾಡುತ್ತಿವೆ ಎಂದು ಪಾತ್ರ ವಿವರಿಸಿದರು.
ಪ್ರಧಾನಿ ಸಿಂಗ್ ಅವರೇ ಈ ರೀತಿ ಪತ್ರ ಬರೆಯುವ ಮೂಲಕ ನಷ್ಟದಲ್ಲಿದ್ದರೂ ಕಿಂಗ್ ಫಿಶರ್ ಏರ್ ಲೈನ್ಸ್ ಸಂಸ್ಥೆಯ ಹೆಸರಿನಲ್ಲಿ ವಿಜಯ್ ಮಲ್ಯ ಅವರು, ಕೋಟ್ಯಂತರ ರು. ಸಾಲ ಪಡೆಯಲು ಸಾಧ್ಯವಾಯಿತು ಎಂದು ಆರೋಪಿಸಿದ್ದಾರೆ.