ವಾಜಪೇಯಿ ಅಂತ್ಯಕ್ರಿಯೆ ಹೊಸ 'ಟ್ರೆಂಡ್ ಸೆಟರ್' ಗೆ ನಾಂದಿ ಹಾಡಲಿ
ಜನಸಂಖ್ಯಾ ಸ್ಪೋಟವಾಗದಿರಲಿ ಎನ್ನುವ ಕಾರಣಕ್ಕಾಗಿ ಕುಟುಂಬ ಕಲ್ಯಾಣ ಇಲಾಖೆ 'ಆರತಿಗೊಬ್ಬಳು ಕೀರ್ತಿಗೊಬ್ಬ' ಎನ್ನುವ ಘೋಷಣೆಯ ಮೂಲಕ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿತ್ತು. ಆದರೆ ಹೆಣ್ಣುಮಗುವೇ ಬೇಕು, ಗಂಡು ಮಗುವೇ ಸಾಕು ಎಂದು ಗಂಡ-ಹೆಂಡತಿ ನಿರ್ಧರಿಸುವ ವೈಜ್ಞಾನಿಕ ಪ್ರಕ್ರಿಯೆಯನ್ನು ಕಂಡುಹಿಡಿಯಲು ಇದುವರೆಗೆ ಯಾರಿಂದಲೂ ಸಾಧ್ಯವಾಗಿಲ್ಲ.
ಗಂಡು ಮಗು ಹುಟ್ಟಿದರೆ ಮುಂದೊಂದು ದಿನ ನಮಗೆ ದಾರಿದೀಪವಾದಾನೂ ಎನ್ನುವ ಅನಾದಿ ಕಾಲದಿಂದಲೂ ಬಂದ ನಂಬಿಕೆ, ಇತ್ತೀಚಿನ ದಿನಗಳಲ್ಲಿ ಹೆಣ್ಣು ಬಲವೂ ಹೌದು, ಬುದ್ದಿಯೂ ಹೌದು ಎನ್ನುವ ಹಂತಕ್ಕೆ ಬಂದು ನಿಂತಿದೆ. ಮನೆಯಲ್ಲಿ ಬರೀ ಹೆಣ್ಣುಮಕ್ಕಳೇ ಇದ್ದರೆ, ತಂದೆ ತೀರಿಕೊಂಡಾಗ ಅವರ ಉತ್ತರಕ್ರಿಯಯನ್ನು ಯಾರು ಮಾಡಬೇಕು?
ಇಂತಹ ಸಂದರ್ಭದಲ್ಲಿ ಅಳಿಯ, ಅಥವಾ ಸಹೋದರ, ಸಹೋದರನ ಮಗ ಅಂತ್ಯ ಸಂಸ್ಕಾರ ಮಾಡುವ ಪದ್ದತಿ ನಮ್ಮಲ್ಲಿದೆ. ಸಾಮಾನ್ಯವಾಗಿ ಹೆಣ್ಣು ಮಕ್ಕಳು ತಂದೆಯನ್ನು ಹಚ್ಚಿಕೊಳ್ಳುವುದು ಜಾಸ್ತಿ. ಹೀಗಿರುವಾಗ, ತಂದೆಯ ಅಂತ್ಯಸಂಸ್ಕಾರವನ್ನು ಮಗಳೇ ಯಾಕೆ ಮಾಡಬಾರದು? ಮಹಿಳೆಯರನ್ನು ಯಾಕೆ ಎಲ್ಲಾ ವಿಚಾರದಲ್ಲೂ ಅಸ್ಪ್ರಶ್ಯತೆಯಿಂದ ನೋಡಲಾಗುತ್ತದೆ?

ಬಹುತೇಕ ಹಿಂದೂ ಕುಟುಂಬಗಳಲ್ಲಿ ಹೆಣ್ಣುಮಕ್ಕಳು ಸ್ಮಶಾನಕ್ಕೆ ಹೋಗುವ ಪದ್ದತಿಯೂ ಇಲ್ಲ, ಜೊತೆಗೆ ಕೆಲವೊಂದು ಕಟ್ಟಾ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬಗಳಲ್ಲಿ ಸತ್ತ ಹತ್ತನೇ ದಿನಕ್ಕೆ ಮಾಡುವ ಧರ್ಮೋದಕಕ್ಕೂ ಹೋಗುವಂತಿಲ್ಲ. ಹಿಂದೆ ಯಾರೋ ಹುಟ್ಟುಹಾಕಿದ ಇಂತಹ ಸಂಪ್ರದಾಯಗಳಿಗೆ ಈಗಿನ ಪೀಳಿಗೆಯವರು ಯಾಕೆ ತಿಲಾಂಜಲಿ ಇಡಬಾರದು?
ಇಂತಹ ಗೊಡ್ಡು ಸಂಪ್ರದಾಯಗಳಿಗೆ ಬ್ರೇಕ್ ಹಾಕುವ ದೃಢ ಹೆಜ್ಜೆಯನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಅಂತಿಮ ಸಂಸ್ಕಾರದ ವೇಳೆ, ಅವರ ಕುಟುಂಬ ತೆಗೆದುಕೊಂಡಿತು. ಬ್ರಹ್ಮಚಾರಿಯಾಗಿರುವ ವಾಜಪೇಯಿ, ನಮಿತಾ ಭಟ್ಟಾಚಾರ್ಯ ಅವರನ್ನು ದತ್ತುಪುತ್ರಿಯನ್ನಾಗಿ ಸ್ವೀಕರಿಸಿದ್ದರು. ಅಟಲ್ ಅಂತ್ಯಸಂಸ್ಕಾರದ ವೇಳೆ ಅಳಿಯ ರಂಜನ್ ಭಟ್ಟಾಚಾರ್ಯ ಕೂಡಾ ಜೊತೆಗಿದ್ದರು.

ಮಗಳು ನಮಿತಾ ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡುವ ಮೂಲಕ, ಹೆಣ್ಣುಮಕ್ಕಳು ಈ ಕೆಲಸದಿಂದ ದೂರವಿರಬೇಕು ಎನ್ನುವ ತಲೆತಲಾಂತರದಿಂದ ಬಂದ ಕಟ್ಟುಪಾಡನ್ನು ಬ್ರೇಕ್ ಮಾಡಿದಂತಾಗಿದೆ. ಹೇಳಿ ಕೇಳಿ.. ವಾಜಪೇಯಿಯವರದ್ದು ಉತ್ತರಪ್ರದೇಶದ ಬ್ರಾಹ್ಮಣ ಕುಟುಂಬ. ಆದರೆ, ಅಟಲ್ ಅವರ ಅಂತ್ಯಸಂಸ್ಕಾರದ ವಿಧಿವಿಧಾನ ಸಾಂಪ್ರದಾಯಿಕವಾಗಿ ಮತ್ತು ಸಾಂಗವಾಗಿ ನಡೆದಿದೆ.
ವಿದೇಶದಿಂದ ಬಂದ ಗಣ್ಯರು, ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಸಾವಿರಾರು ಗಣ್ಯರು ವಾಜಪೇಯಿಯವರ ಅಂತ್ಯ ಸಂಸ್ಕಾರದ ವೇಳೆ ಹಾಜರಿದ್ದರು. ನೂರಾರು ವಾಹಿನಿಗಳು ಇದನ್ನು ಲೈವ್ ತೋರಿಸುತ್ತಿದ್ದವು, ಕೋಟ್ಯಾಂತರ ಜನ, ಮಗಳು ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡುವುದನ್ನು ನೇರ ಪ್ರಸಾರದಲ್ಲಿ ನೋಡುತ್ತಿದ್ದರು.

ಆ ಮೂಲಕ, ಅಂದು ಮನುಷ್ಯನೇ, 'ಹೆಣ್ಣು ಚಿತೆಗೆ ಅಗ್ನಿಸ್ಪರ್ಶ ಮಾಡಬಾರದು' ಎಂದು ಹುಟ್ಟುಹಾಕಿದ್ದ ಸಂಪ್ರದಾಯಕ್ಕೆ ವಾಜಪೇಯಿಯವರ ಮಗಳು ಮಂಗಳ ಹಾಡಿದ್ದಾರೆ. ಗಂಡು ಮತ್ತು ಹೆಣ್ಣಿನಲ್ಲಿ ಯಾವುದೇ ತಾರತಮ್ಯ ಬೇಡ, ತಂದೆತಾಯಿಗೆ ಮಗನೂ ಒಂದೇ, ಮಗಳೂ ಒಂದೇ ಎನ್ನುವ ಸಂದೇಶವನ್ನು ಅಂತ್ಯಸಂಸ್ಕಾರದ ವಿದಿವಿಧಾನಗಳು ಜಗತ್ತಿಗೆ ಸಾರಿದಂತಿತ್ತು.
ಕೆಲವು ಕಡೆ ಗಂಡು ಮಕ್ಕಳು ಇದ್ರೂ ತಂದೆ-ತಾಯಿನಾ ಮನೆಯಿಂದ ಹೊರಹಾಕಿರೋ ಘಟನೆಯ ಸಂದರ್ಭಗಳಲ್ಲಿ, ಹೆಣ್ಣು ಮಕ್ಕಳೇ ಅಂತ್ಯಸಂಸ್ಕಾರ ಮಾಡಿದ ಉದಾಹರಣೆಗಳಿವೆ. ಆದರೆ ನಂತರ ನಡೆಯುವ ಉತ್ತರ ಕ್ರಿಯೆಗಳನ್ನು ನೆರವೇರಿಸಲು, ಅಸ್ತಿ ವಿಸರ್ಜನೆ ಮಾಡಲು ಹೆಣ್ಣು ಮಕ್ಕಳಿಗೆ ಅವಕಾಶ ಸಿಗುತ್ತಾ? ವಾಜಪೇಯಿಯವರ ವಿಚಾರದಲ್ಲಿ ಇದನ್ನೆಲ್ಲಾ ಯಾರು ಮಾಡುತ್ತಾರೆ ಎಂದು ನೋಡಬೇಕಿದೆ. ಒಟ್ಟಿನಲ್ಲಿ, ಅಟಲ್ ಮಗಳು ಅಂತ್ಯಕ್ರಿಯೆ ನಡೆಸಿದ್ದು ಶ್ಲಾಘನೀಯವೇ.
ಕೇಂದ್ರ ಸರಕಾರ ಕೂಡಾ ಮಹಿಳಾ ಸಬಲೀಕರಣಕ್ಕೆ ವಿಶೇಷ ಒತ್ತು ನೀಡುತ್ತಿರುವ ಈ ಸಂದರ್ಭದಲ್ಲಿ ಅಟಲ್ ಅಂತ್ಯ ಸಂಸ್ಕಾರದ ವೇಳೆ ಹಾಜರಿದ್ದ ಮೋದಿಯೇ ಖುದ್ದು ವಾಜಪೇಯಿ ಮಗಳ ಕೈಯಿಂದ ಅಂತಿಮ ವಿಧಿವಿಧಾನ ನಡೆಸಲು ಸೂಚಿಸಿದ್ದರೇ?












Click it and Unblock the Notifications