ಮುಂಬೈ, ಥಾಣೆ ನಡುವೆ ಫಿಲ್ಮ್ ಸಿಟಿ ಯೋಜನೆ: ಏಕನಾಥ್ ಶಿಂಧೆ
ಮುಂಬೈ, ನ.07: ಕಲಾವಿದರಿಗೆ ವಿಶಾಲವಾದ ವೇದಿಕೆಯನ್ನು ಒದಗಿಸಲು ಮುಂಬೈ ಮತ್ತು ಥಾಣೆ ನಗರಗಳ ನಡುವೆ ಫಿಲ್ಮ್ ಸಿಟಿಯನ್ನು ನಿರ್ಮಿಸಲು ಮಹಾರಾಷ್ಟ್ರ ಸರ್ಕಾರವು ಕೆಲಸ ಮಾಡಲಿದೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.
ಖ್ಯಾತ ಮರಾಠಿ ರಂಗಕರ್ಮಿ ಪ್ರಶಾಂತ್ ದಾಮ್ಲೆ ಅವರ 'ಏಕ ಲಗ್ನಾಚಿ ಗೋಷ್ಟ್' ನಾಟಕದ 12,500 ನೇ ಪ್ರದರ್ಶನ ಕಂಡ ಕಾರಣ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಏಕನಾಥ್ ಶಿಂಧೆ, ರಾಜ್ಯ ಸರ್ಕಾರ ಮರಾಠಿ ರಂಗಭೂಮಿ ಮತ್ತು ಸಿನಿಮಾವನ್ನು ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.
ಥಾಣೆಯಲ್ಲೂ ಸಾಕಷ್ಟು ಶೂಟಿಂಗ್ ನಡೆಯುತ್ತಿದೆ ಎಂದ ಅವರು, ಮುಂಬೈ ಮತ್ತು ಥಾಣೆ ನಡುವೆ 23 ಕಿ.ಮೀ ದೂರದಲ್ಲಿ ಫಿಲ್ಮ್ ಸಿಟಿ ನಿರ್ಮಿಸಲು ಯೋಜನೆ ರೂಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ನಾಟಕ ಆಡಿಟೋರಿಯಂಗಳ ಸ್ಥಿತಿಯನ್ನು ಪರಿಶೀಲಿಸಿ ಮತ್ತು ಅವುಗಳನ್ನು ಸುಧಾರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ನೋಡಲ್ ಅಧಿಕಾರಿಯನ್ನು ನೇಮಿಸಲಾಗುವುದು ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೇಳಿದ್ದಾರೆ.
ಈ ವೇಳೆ ಖ್ಯಾತ ಮರಾಠಿ ರಂಗಕರ್ಮಿ ಪ್ರಶಾಂತ್ ದಾಮ್ಲೆ ಅವರಿಗೆ ಪದ್ಮ ಪ್ರಶಸ್ತಿ ನೀಡಲು ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಏಕನಾಥ್ ಶಿಂಧೆ ತಿಳಿಸಿದ್ದಾರೆ.

"ಖ್ಯಾತ ನಟ ಪ್ರಶಾಂತ್ ದಾಮ್ಲೆ ಅವರ ರಂಗಭೂಮಿಯ 12 ಸಾವಿರದ 500 ನೇ ಪ್ರಯೋಗ ಇಂದು ಮುಂಬೈನ ಷಣ್ಮುಕಾನಂದ ಆಡಿಟೋರಿಯಂನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಹಾಜರಾಗಿ ಪ್ರಶಾಂತ್ ದಾಮ್ಲೆ ಅವರಿಗೆ ವಿಶೇಷ ಪ್ರಮಾಣ ಪತ್ರ ನೀಡಿ ಗೌರವಿಸಿದೇವು. ತಮ್ಮ ಅಮೋಘ ಅಭಿನಯದಿಂದ ಹಲವಾರು ವರ್ಷಗಳಿಂದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿರುವ ಪ್ರಶಾಂತ್ ದಾಮ್ಲೆ ಅವರು ರಂಗಭೂಮಿಗೆ ನಿರಂತರ ಸೇವೆ ಸಲ್ಲಿಸಿರುವುದು ಶ್ಲಾಘನೀಯ" ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ.












Click it and Unblock the Notifications