ಕಾಲಡಿಯಲ್ಲೇ ಕಸ; ಆದರೂ ಕಾಶ್ಮೀರದ ಚಿಂತೆ: ಇಮ್ರಾನ್ ಖಾನ್ ಇಬ್ಬಂದಿತನ
ಆಗಸ್ಟ್ 18, 2018ರಲ್ಲಿ ಇಮ್ರಾನ್ ಖಾನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗ, ಪಾಕ್ ಜನತೆಗೆ ಅವರ ಮೇಲಿದ್ದ ಭರವಸೆ ಅಷ್ಟಿಷ್ಟಲ್ಲ. ಹಣದುಬ್ಬರ, ಪಾತಾಳಕ್ಕೆ ಇಳಿದಿದ್ದ ಆರ್ಥಿಕತೆ, ಭ್ರಷ್ಟಾಚಾರ, ಇವೆಲ್ಲವನ್ನೂ ಮಟ್ಟಹಾಕುತ್ತೇನೆಂದು ಚುನಾವಣಾಪೂರ್ವ ಆಶ್ವಾಸನೆ ನೀಡಿದ್ದರಿಂದ, ಇಮ್ರಾನ್ ನೇತೃತ್ವದ ತೆಹ್ರಿಕ್-ಇ-ಇನ್ಸಾಫ್ ಪಕ್ಷಕ್ಕೆ ಮ್ಯಾನ್ ಡೇಟ್ ಲಭಿಸಿತ್ತು.
ಪಾಕಿಸ್ತಾನದ ಚಿತ್ರಣವನ್ನೇ ಬದಲಿಸುತ್ತೇನೆಂದು ನೂರು ದಿನಗಳ ಪ್ಲ್ಯಾನ್ ಅನ್ನು ಇಮ್ರಾನ್ ಖಾನ್ ಹಾಕಿಕೊಂಡಿದ್ದರು. ಆದರೆ, ನೂರು ದಿನದ ಯೋಜನೆಯನ್ನು ಈಡೇರಿಸುವುದು ಹಾಗಿರಲಿ, ಅದನ್ನು ಕೈಗೆತ್ತಿಕೊಳ್ಳಲೂ ಇಮ್ರಾನ್ ಗೆ ಸಾಧ್ಯವಾಗಲಿಲ್ಲ. ಅದಕ್ಕೆ, ಕರಾಚಿ ನಗರದಲ್ಲಿ ನಡೆದ ಭಾರೀ ಪ್ರತಿಭಟನೆಯೇ ಸಾಕ್ಷಿ.
ಭಾರತ ಬಾಲಕೋಟ್ ಏರ್ ಸ್ಟ್ರೈಕ್ ನಡೆಸಿದ್ದು ಸತ್ಯ: ಒಪ್ಪಿಕೊಂಡ ಇಮ್ರಾನ್ ಖಾನ್
ಐಎಂಎಫ್ ಮುಂದೆ ಭಿಕ್ಷುಕರ ಹಾಗೇ ಮಂಡಿವೂರುವುದಿಲ್ಲ ಎಂದು ಚುನಾವಣಾ ರ್ಯಾಲಿಯಲ್ಲಿ ಚಪ್ಪಾಳೆಗಿಟ್ಟಿಸಿದ್ದ ಇಮ್ರಾನ್, ಅದೇ ಐಎಂಎಫ್ ಮತ್ತು ಕೊಲ್ಲಿರಾಷ್ಟ್ರಗಳ ಮುಂದೆ, ಮಂಡಿಯಲ್ಲ, ಶಿರವೂರ ಬೇಕಾಯಿತು. ಪಾಕಿಸ್ತಾನವನ್ನು ಸರಿದಾರಿಗೆ ತರುವುದು ಸುಲಭದ ಮಾತಲ್ಲ ಎನ್ನುವುದನ್ನು ಅರಿತು, ಬಹುಸಂಖ್ಯಾತರ ಭಾವನೆಯ ಜೊತೆಗೆ ಇಮ್ರಾನ್ ಖಾನ್ ಹೋಗಬೇಕಾದ ಅನಿವಾರ್ಯತೆಯಲ್ಲಿದ್ದಾರಾ? ಅದಕ್ಕಾಗಿಯೇ ಕಾಶ್ಮೀರ ವಿಚಾರವನ್ನು ಮುನ್ನಲೆಗೆ ತರುತ್ತಿದ್ದಾರಾ ಎನ್ನುವುದಿಲ್ಲಿ ಪ್ರಶ್ನೆ.
ಭಾರತಕ್ಕೆ ಮಾತ್ರವಲ್ಲ, ವಿಶ್ವಕ್ಕೇ ಬೆದರಿಕೆ ಒಡ್ಡಿದ ಇಮ್ರಾನ್ ಖಾನ್ !
ಒಂದು ದೇಶದ ಪ್ರಧಾನಿಯೆಂದರೆ ಅದಕ್ಕಿರುವ ಘನತೆ, ಗೌರವ, ಜವಾಬ್ದಾರಿ ಏನು ಎನ್ನುವುದು ಒಂದು ಬಾರಿ ವಿಶ್ವಕಪ್ ಕ್ರಿಕೆಟ್ ಗೆದ್ದ ಪಾಕಿಸ್ತಾನ ತಂಡದ ನಾಯಕರಾಗಿದ್ದ, ಈಗಿನ ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಗೆ ಅರಿವಿದೆಯೇ ಎನ್ನುವ ಸಂಶಯ ಪಡುವ ಹಾಗೇ, ಇಮ್ರಾನ್ ಖಾನ್ ದಿನಕ್ಕೊಂದು ಹೇಳಿಕೆಯನ್ನು ನೀಡುತ್ತಿದ್ದಾರೆ.
ವಿಶ್ವದ ಕಣ್ಣಿಗೆ ಸಂಭಾವಿತನಾಗಿ ಕಾಣಲಾದರೂ ಇಮ್ರಾನ್ ಸುಮ್ಮನಿರಬೇಕಾಗಿತ್ತು
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದು ಹಾಕಿದರೆಷ್ಟು, ಬಿಟ್ಟರೆಷ್ಟು, ಇದರಿಂದ ಪಾಕಿಸ್ತಾನಕ್ಕೆ ಆಗಬೇಕಾಗಿದ್ದಾದರೂ ಏನು ಎನ್ನುವುದನ್ನು ಕೊನೇಪಕ್ಷ ಆತ್ಮಸಾಕ್ಷಿಯಾಗಿ ಒಪ್ಪಿಕೊಳ್ಳಲಾಗದಿದ್ದರೂ, ವಿಶ್ವದ ಕಣ್ಣಿಗೆ ಸಂಭಾವಿತನಾಗಿ ಕಾಣಲಾದರೂ ಇಮ್ರಾನ್ ಖಾನ್ ಸುಮ್ಮನಿರಬೇಕಾಗಿತ್ತು. ಆದರೆ, ಅವರು ಹಾಗೇ ಮಾಡದೇ, ಅದೇ ವಿಚಾರದ ಸುತ್ತ ಗಿರಿಗಿಟ್ಲೆ ಆಡುತ್ತಿದ್ದಾರೆ.
ಪಾಕಿಸ್ತಾನದ ಮೂಲ ಸಮಸ್ಯೆಗಳನ್ನು ಡೈವರ್ಟ್ ಮಾಡಲು ಇಮ್ರಾನ್ ಹೊರಟಿದ್ದಾರಾ
ಪಾಕಿಸ್ತಾನದಲ್ಲಿ ದೈನಂದಿನ ಪದಾರ್ಥಗಳು, ತರಕಾರಿಗಳ ಬೆಲೆ ಗಗನಕ್ಕೇರಿದೆ, ಅದನ್ನು ತಹಸ್ಥಿತಿಗೆ ತಂದು ತಮ್ಮವರ ಹಿತ ಕಾಪಾಡುವುದನ್ನು ಬಿಟ್ಟು, ಪದೇಪದೇ ಕಾಶ್ಮೀರ ವಿಚಾರವನ್ನೇ ಕನವರಿಸಿ, ಪಾಕಿಸ್ತಾನದ ಮೂಲ ಸಮಸ್ಯೆಗಳನ್ನು ಡೈವರ್ಟ್ ಮಾಡಲು ಇಮ್ರಾನ್ ಹೊರಟಿದ್ದಾರಾ? ಅಥವಾ ವಿಶ್ವದ ಮುಸ್ಲಿಂ ರಾಷ್ಟ್ರಗಳಲ್ಲಿ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಕಾಶ್ಮೀರ ವಿಚಾರವನ್ನು ಇಮ್ರಾನ್ ಬಳಸಿಕೊಳ್ಳುತ್ತಿದ್ದಾರಾ?
ಚೀನಾ ಹೊರತು ಪಡಿಸಿ, ವಿಶ್ವದ ಎಲ್ಲಾ ರಾಷ್ಟ್ರಗಳ ನಕಾರ
ಚೀನಾ ಹೊರತು ಪಡಿಸಿ, ವಿಶ್ವದ ಎಲ್ಲಾ ರಾಷ್ಟ್ರಗಳು ಕಾಶ್ಮೀರ, ಭಾರತದ ಆಂತರಿಕ ವಿಚಾರ ಎಂದು ಸ್ಪಷ್ಟವಾಗಿ ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ್ದರೂ, ಬುದ್ದಿ ಕಲಿಯದ ಪಾಕಿಸ್ತಾನ, ಸುಮ್ಮನಿರುವುದೇ, ಭಾರತದ ಜೊತೆಗೆ ವಿಶ್ವದ ಇತರ ರಾಷ್ಟ್ರಗಳಿಗೂ ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ಉಗ್ರರ ಶಿಬಿರಗಳು ಮತ್ತೆ ತಲೆ ಎತ್ತುತ್ತಿರುವ ವಿಚಾರ, ಪಾತಾಳಕ್ಕಿಳಿದ ಆರ್ಥಿಕ ಸ್ಥಿತಿ, ನಿರುದ್ಯೋಗ, ಸಂಪನ್ಮೂಲ ಕ್ರೌಢೀಕರಣದಲ್ಲಾಗುತ್ತಿರುವ ಸಮಸ್ಯೆಗಳ ಕಡೆಗೆ ಗಮನ ಹರಿಸುವುದೇ, ಪಾಕಿಸ್ತಾನದ ಪ್ರಧಾನಿ, ಭಾರತದ ವಿಚಾರಕ್ಕೆ ಮೂಗು ತೂರಿಸುತ್ತಿದ್ದಾರೆ. ದೇಶ ಎದುರಿಸುತ್ತಿರುವ ಆಂತರಿಕ ಸಮಸ್ಯೆಗಳ ಬಗ್ಗೆ ಒಂದು ತಿಂಗಳ ಹಿಂದೆ ಖುದ್ದು ಇಮ್ರಾನ್ ಖಾನ್ ಆತಂಕ ವ್ಯಕ್ತಪಡಿಸಿದ್ದರು.
ಇಮ್ರಾನ್ ಖಾನ್ 'ಆಜಾದಿ ಕಾಶ್ಮೀರ್' ಚಳುವಳಿಗೆ ನಮ್ಮ ಬೆಂಬಲ ಎನ್ನುವ ಹೇಳಿಕೆ
ಆದರೆ, ಇದ್ಯಾವುದಕ್ಕೂ ಪ್ರಿಯಾರಿಟಿ ನೀಡದೇ, ಇಮ್ರಾನ್ ಖಾನ್ 'ಆಜಾದಿ ಕಾಶ್ಮೀರ್' ಚಳುವಳಿಗೆ ನಮ್ಮ ಬೆಂಬಲ, ಆರ್ಟಿಕಲ್ 370 ಹಿಂಪಡೆದರೆ 'ಎಚ್ಚರಿಕೆ' ಎನ್ನುವ ಹೇಳಿಕೆಯನ್ನು ನೀಡುತ್ತಿದ್ದಾರೆ. ಮುಸ್ಲಿಮರು ದಂಗೆ ಎದ್ದಾರು ಎನ್ನುವ ಸಂದೇಶವನ್ನು ವಿಶ್ವಕ್ಕೆ ಕಳುಹಿಸಿದ್ದಾರೆ. ಇಮ್ರಾನ್ ಖಾನ್ ಮಾತು ಕೇಳಿಕೊಂಡು ಅಥವಾ ಕಾಶ್ಮೀರ ವಿಚಾರವನ್ನು ಇಟ್ಟುಕೊಂಡು, ವಿಶ್ವದ ಇತರ ರಾಷ್ಟ್ರಗಳಲ್ಲಿನ ಮುಸ್ಲಿಮರು ದಂಗೆ ಏಳುವ ಸಾಧ್ಯತೆಯಿದೆಯಾ?
ಆರ್ಟಿಕಲ್ 370 ಖಂಡಿಸುವ ಭರದಲ್ಲಿ ಎಂತಹ ಅಪ್ರಬುದ್ದ ಹೇಳಿಕೆ
ಆರ್ಟಿಕಲ್ 370 ಖಂಡಿಸುವ ಭರದಲ್ಲಿ ಎಂತಹ ಅಪ್ರಬುದ್ದ ಹೇಳಿಕೆಯನ್ನು ಇಮ್ರಾನ್ ನೀಡಿದ್ದರು ಎಂದರೆ, " ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಮಾಡುವ ಭಾರತ ಸರಕಾರದ ನಿರ್ಧಾರದಿಂದ, ಪುಲ್ವಾಮಾ ಮಾದರಿಯ ಇನ್ನೊಂದು ದಾಳಿ ನಡೆಯುವ ಸಾಧ್ಯತೆಯಿದೆ" ಎಂದು ಪಾಕ್ ಪ್ರಧಾನಿಗಳು ಹೇಳಿ, ವಿಶ್ವಮಟ್ಟದಲ್ಲಿ ದೇಶದ ಮಾನವನ್ನು ಹರಾಜಿಗೆ ಹಾಕಿದ್ದರು.
ಭಾರತದ ಜೊತೆಗಿನ ಎಲ್ಲಾ ವಾಣಿಜ್ಯ ವಹಿವಾಟು ಸ್ಥಗಿತ
ಭಾರತದ ಜೊತೆಗಿನ ಎಲ್ಲಾ ವಾಣಿಜ್ಯ ವಹಿವಾಟು ಸ್ಥಗಿತ, ರಾಯಭಾರಿಯನ್ನು ವಾಪಸ್ ಕಳುಹಿಸಿದ್ದು, ಭಾರತದ ಸಿನಿಮಾಗಳಿಗೆ ಕಡಿವಾಣ ಹಾಕಿದ್ದು, ಅಭಿನಂದನ್ ಗೆ ವೀರಚಕ್ರ ಘೋಷಿಸಿದ ಭಾರತದ ಕ್ರಮಕ್ಕೆ ವಿರುದ್ದವಾಗಿ, ಅಭಿನಂದನ್ ಚಲಾಯಿಸುತ್ತಿದ್ದ ಮಿಗ್ ವಿಮಾನವನ್ನು ಉರುಳಿಸಿದ ಪಾಕಿಸ್ತಾನದ ಇಬ್ಬರು ಪೈಲಟುಗಳಿಗೆ ಇಮ್ರಾನ್ ಪುರಸ್ಕಾರ ನೀಡಿ, ತಮ್ಮ ಭಾರತ ವಿರುದ್ದದ ಆಕ್ರೋಶವನ್ನು ಇಮ್ರಾನ್ ಹೊರಹಾಕುತ್ತಿದ್ದಾರೆ.
ಭಾರತ ಯಾವ ಉಗ್ರರನ್ನೂ ಪೋಷಿಸುತ್ತಿಲ್ಲ
ಭಾರತದಲ್ಲಿ ಸಮಸ್ಯೆಗಳು ಇಲ್ಲ ಎಂದೇನಿಲ್ಲ, ಇಲ್ಲಿನ ಆರ್ಥಿಕ ಸ್ಥಿತಿಯೂ ಗಣನೀಯ ಸುಧಾರಣೆಯನ್ನೇನು ಕಂಡಿಲ್ಲ. ಆದರೆ, ಭಾರತ ಯಾವ ಉಗ್ರರನ್ನೂ ಪೋಷಿಸುತ್ತಿಲ್ಲ. ಆರ್ಥಿಕ ಸ್ಥಿತಿ ಸರಿದಾರಿಗೆ ತರಲು, ಉದ್ಯೋಗ ಸೃಷ್ಟಿಸುವ ಕೆಲಸಕ್ಕೆ ಸೂಕ್ತ ಹೆಜ್ಜೆಯನ್ನಂತೂ ಭಾರತ ಸರಕಾರ ಇಡುತ್ತಿದೆ. ಜೊತೆಗೆ, ಬೇರೆ ದೇಶದ ಆಂತರಿಕ ಸಮಸ್ಯೆಗಳಿಗೆ ಮೂಗು ತೂರಿಸುವ ಕೆಲಸವನ್ನು ಮಾಡುತ್ತಿಲ್ಲ. ಮೊದಲು ಇಮ್ರಾನ್ ಖಾನ್ ತಮ್ಮ ದೇಶದೆಲ್ಲಡೆ ತುಂಬಿರುವ ಕಸಗಳನ್ನು ಶುಚಿಗೊಳಿಸುವ ಕೆಲಸಕ್ಕೆ ಮುಂದಾಗಲಿ, ಆಮೇಲೆ, ಭಾರತದ ಆಂತರಿಕ ವಿಚಾರಕ್ಕೆ ಬರಲಿ.