ಎಚ್ಚರ ತಪ್ಪಿದರೆ ನಿಮ್ಮ ಪಿಎಫ್ ಖಾತೆಯಲ್ಲಿನ ಹಣ ಮಂಗಮಾಯ
ನವದೆಹಲಿ, ನವೆಂಬರ್ 23: ಭಾರತದಾದ್ಯಂತ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿ (ಇಪಿಎಫ್ಒ) ಖಾತೆಯನ್ನು ಹೊಂದಿರುವ ಲಕ್ಷಾಂತರ ಉದ್ಯೋಗಿಗಳು ಇದ್ದಾರೆ. ಅಂಥ ಪ್ರತಿಯೊಬ್ಬ ಉದ್ಯೋಗಿಯು ತಮ್ಮ ಸಂಬಳದ ಒಂದು ಭಾಗವನ್ನು ತಮ್ಮ ಖಾತೆಗೆ ಹಾಕಿಕೊಳ್ಳುತ್ತಾರೆ.
ಅದೇ ಇಪಿಎಫ್ಒ ಖಾತೆಗೆ ಠೇವಣಿ ಇಡಲಾದ ಎಲ್ಲಾ ಹಣವು ಆ ವ್ಯಕ್ತಿ ನಿವೃತ್ತರಾದಾಗ ಖಾತೆದಾರರಿಗೆ ಸೇರುತ್ತದೆ. ಇದರ ಜೊತೆಗೆ ಹೆಚ್ಚುವರಿಯಾಗಿ, ಅನಾರೋಗ್ಯ, ಮಗುವಿನ ಶಿಕ್ಷಣ ಅಥವಾ ಮದುವೆಯಂತಹ ಹಣಕಾಸಿನ ತುರ್ತುಸ್ಥಿತಿಗಾಗಿ ನಿಮಗೆ ಅಗತ್ಯವಿದ್ದರೆ ಈ ಹಣವನ್ನು ನೀವು ಬಳಸಿಕೊಳ್ಳಬಹುದಾಗಿದೆ.
ಈ ದಿನಾಂಕಕ್ಕೂ ಮುನ್ನ ಪಿಎಫ್ ಖಾತೆಗೆ ನಾಮಿನಿ ಸೇರಿಸಿ..
ಅಂತಹ ಸಂದರ್ಭದಲ್ಲಿ, ಪ್ರತಿಯೊಬ್ಬ ವ್ಯಕ್ತಿಯ ಇಪಿಎಫ್ಒ ಖಾತೆಯಲ್ಲಿರುವ ಹಣವನ್ನು ಅವರ ಜೀವಿತಾವಧಿಯ ಬಂಡವಾಳ ಸಂಗ್ರಹಣೆ ಎಂದು ಪರಿಗಣಿಸಲಾಗುತ್ತದೆ. ಹೀಗೆ ಇರುವಾಗ ಈ ಖಾತೆಯನ್ನು ಬಳಸುವ ಪ್ರತಿಯೊಬ್ಬ ಉದ್ಯೋಗಿಗಳು ಕೆಲವು ವಿಷಯಗಳನ್ನು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ. ಅದರ ಕುರಿತು ಈ ವರದಿಯಲ್ಲಿ ತಿಳಿದುಕೊಳ್ಳೋಣ.
ಸೈಬರ್ ಕ್ರೈಮ್ ಕುರಿತು ಎಚ್ಚರಿಕೆ ಇರಲಿ
ಭಾರತವು ಹೆಚ್ಚು ಡಿಜಿಟಲೈಸ್ ಆಗುತ್ತಿದೆ. ಅದರ ಜೊತೆಗೆ ಸೈಬರ್ ಕ್ರೈಮ್ ಘಟನೆಗಳು ತ್ವರಿತ ಗತಿಯಲ್ಲೇ ಹೆಚ್ಚುತ್ತಿವೆ. ಈ ರೀತಿಯ ಸೈಬರ್ ಅಪರಾಧಿಗಳು ಜನರನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಸಾಮಾನ್ಯ ಜನರ ವೈಯಕ್ತಿಕ ಮಾಹಿತಿಯನ್ನು ತೆಗೆದುಕೊಂಡು ಅವರ ಖಾತೆಗಳಿಗೆ ಕನ್ನಾ ಹಾಕುತ್ತಿದ್ದಾರೆ. ಇಂತಹ ಸೈಬರ್ ಕ್ರೈಂ ಚೋರರ ಬುಟ್ಟಿಗೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ ಖಾತೆದಾರರು ಬೀಳಬಾರದು. ಈ ನಿಟ್ಟಿನಲ್ಲಿ ತನ್ನ ಲಕ್ಷಾಂತರ ಖಾತೆದಾರರಿಗೆ ಇಪಿಎಫ್ಓ ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿದೆ.
ಒಟಿಪಿ ಅನ್ನು ಕೇಳುವುದಿಲ್ಲ ಇಪಿಎಫ್ಒ
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ತಮ್ಮ ಖಾತೆದಾರರಿಂದ ಆಧಾರ್ ಕಾರ್ಡ್ಗಳು, ಪ್ಯಾನ್ ಕಾರ್ಡ್ಗಳು, UAN ಸಂಖ್ಯೆಗಳು ಮತ್ತು ಬ್ಯಾಂಕ್ ಖಾತೆ ಸಂಖ್ಯೆಗಳು ಸೇರಿದಂತೆ ವೈಯಕ್ತಿಕ ಮಾಹಿತಿಯನ್ನು ಕೇಳುತ್ತದೆ. ಆದರೆ ಯಾವುದೇ ಕಾರಣಕ್ಕೂ ಒಟಿಪಿ ಅನ್ನು ಕೇಳುವುದಿಲ್ಲ ಎಂದು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ. ಈ ಸಮಸ್ಯೆಯ ಬಗ್ಗೆ ಟ್ವೀಟ್ ಮಾಡುವ ಮೂಲಕ ತನ್ನ ಲಕ್ಷಾಂತರ ಖಾತೆದಾರರನ್ನು ಎಚ್ಚರಿಸಿದೆ.
ಪಿಎಫ್ ಚಂದಾದಾರರು ವೈಯಕ್ತಿಕ ಮಾಹಿತಿ ನೀಡಬೇಡಿ
ಇಪಿಎಫ್ಒ ಚಂದಾದಾರರನ್ನು ಟಾರ್ಗೆಟ್ ಮಾಡಿರುವ ಸೈಬರ್ ಕ್ರೈಂ ಚೋರರು ವೈಯಕ್ತಿಕ ಮಾಹಿತಿಗಾಗಿ ಕರೆ ಮಾಡುತ್ತಾರೆ. ಒಟಿಪಿ ನೀಡುವಂತೆ ಕೇಳುತ್ತಾರೆ. ಅಂತಹ ಸಂದರ್ಭಗಳಲ್ಲಿ ಅಪರಿಚಿತ ಕಾಲರ್ ಅಥವಾ ಸಂದೇಶಗಳಿಗೆ ಯಾವುದೇ ರೀತಿ ಪ್ರತಿಕ್ರಿಯೆ ನೀಡಬೇಡಿ. ನಿಮ್ಮ ಪಿಎಫ್ ಖಾತೆಗೆ ಸಂಬಂಧಿಸಿದ ಹಾಗೂ ಗುರುತಿನ ಚೀಟಿಗೆ ಸಂಬಂಧಿಸಿದಂತೆ ಯಾವುದೇ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿರಿ ಎಂದು ಎಚ್ಚರಿಕೆ ನೀಡಲಾಗಿದೆ.
ಉದ್ಯೋಗ ಬದಲಾಯಿಸುವಾಗ ವಂಚನೆ ಪ್ರಕರಣ ಬೆಳಕಿಗೆ
ಸಾಮಾನ್ಯವಾಗಿ ಉದ್ಯೋಗಗಳನ್ನು ಬದಲಾಯಿಸುವಾಗ ಜನರು ಈ ರೀತಿ ವಂಚನೆಗೆ ಒಳಗಾಗಿರುವ ಪ್ರಕರಣಗಳು ಬೆಳಕಿಗೆ ಬಂದಿದೆ. ಉದ್ಯೋಗ ಬದಲಾವಣೆ ಸಂದರ್ಭದಲ್ಲಿ ವ್ಯಕ್ತಿಗಳ ಇಪಿಎಫ್ಒ ಮಾಹಿತಿಯನ್ನು ನವೀಕರಿಸುವ ನೆಪದಲ್ಲಿ ವ್ಯಕ್ತಿಗಳಿಂದ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಖಾತೆ ಮತ್ತು ಇತರ ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಾರೆ. ನಂತರ ಈ ವಿವರಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಖಾತೆದಾರರ ಖಾತೆಯನ್ನು ಖಾಲಿ ಮಾಡುತ್ತಾರೆ. ಹೀಗಾಗಿ ಯಾವುದೇ ಸಂದರ್ಭದಲ್ಲೂ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಹಠಾತ್ ಆಗಿ ಯಾರಿಗೂ ಬಹಿರಂಗಪಡಿಸಬೇಡಿ. ಇದರ ಜೊತೆಗೆ ನೀವು ವಂಚನೆಗೆ ಒಳಗಾದಾಗ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಎಂದು ಸೂಚನೆ ನೀಡಲಾಗಿದೆ.