ಯಮುನಾ ನದಿಯಲ್ಲಿ ವಿಷ ಬೆರೆಸಿರುವುದಕ್ಕೆ ದಾಖಲೆ ಕೊಡಿ; ಕೇಜ್ರಿವಾಲ್ಗೆ ಚುನಾವಣಾ ಆಯೋಗ ಸೂಚನೆ
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಎಎಪಿ ನಡುವೆ ಮಾತಿನ ಸಮರ ಜೋರಾಗಿದೆ. ಯಮುನಾ ನದಿಯನ್ನು ಆಮ್ ಆದ್ಮಿ ಪಕ್ಷ ಸರ್ಕಾರ ಕಲುಷಿತಗೊಳಿಸಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಟೀಕಿಸಿದ್ದರೆ, ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಯಮುನಾ ನೀರಿನಲ್ಲಿ ಹರಿಯಾಣ ವಿಷ ಬೆರೆಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದು, ಬುಧವಾರ ರಾತ್ರಿ 8 ಗಂಟೆಯ ಒಳಗಾಗಿ ಇದಕ್ಕೆ ಸಾಕ್ಷಿ ಒದಗಿಸಬೇಕು ಎಂದು ಚುನಾವಣಾ ಆಯೋಗ ಸೂಚನೆ ಕೊಟ್ಟಿದೆ.
ದೆಹಲಿಯಲ್ಲಿ ಕುಡಿಯುವ ನೀರು ಸರಬರಾಜನ್ನು ಅಡ್ಡಿಪಡಿಸಲು ಹರಿಯಾಣ ಯಮುನಾ ನದಿಯಲ್ಲಿ ವಿಷ ಬೆರೆಸಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ ತಮ್ಮ ಆರೋಪಕ್ಕೆ ಪೂರಕವಾಗಿರುವ ಸಾಕ್ಷಿಗಳನ್ನು ಒದಗಿಸಬೇಕು ಎಂದು ಪತ್ರ ಬರೆದಿದೆ. ಬುಧವಾರ ರಾತ್ರಿ 8 ಗಂಟೆಯೊಳಗೆ ತಮ್ಮ ಉತ್ತರವನ್ನು ತಿಳಿಸಬೇಕು ಎಂದು ಸೂಚನೆ ಕೊಟ್ಟಿದೆ.

ವಿವಿಧ ಕಾನೂನುಗಳು ಮತ್ತು ತೀರ್ಪುಗಳನ್ನು ಉಲ್ಲೇಖಿಸಿರುವ ಚುನಾವಣಾ ಆಯೋಗ, ದೇಶದ ಏಕತೆ ಮತ್ತು ಸಾರ್ವಜನಿಕ ಸಾಮರಸ್ಯವನ್ನು ಹಾಳು ಮಾಡುವ ಹೇಳಿಕೆಗಳನ್ನು ನೀಡಿದರೆ ಮೂರು ವರ್ಷ ಜೈಲು ಶಿಕ್ಷೆಗೆ ಗುರಿಯಾಗಬಹುದು ಎಂದು ಕೇಜ್ರಿವಾಲ್ಗೆ ಎಚ್ಚರಿಕೆ ನೀಡಿದೆ.
ಇಂತಹ ಆರೋಪ ಮಾಡುವುದರಿಂದ ಪ್ರಾದೇಶಿಕ ಸಮೂಹ ಮತ್ತು ಪಕ್ಕದ ರಾಜ್ಯಗಳ ಜನರ ನಡುವೆ ದ್ವೇಷ ಸೃಷ್ಟಿಸುವ ಗಂಭೀರ ಅಪಾಯವಿದೆ ಎಂದು ಹೇಳಿದೆ. ಹರಿಯಾಣದಿಂದ ದೆಹಲಿಗೆ ಸರಬರಾಜು ಮಾಡಲಾದ ನೀರಿನಲ್ಲಿ ಅಮೋನಿಯಾ ಮಟ್ಟ ಹೆಚ್ಚಾಗಿದೆ ಎನ್ನುವ ಆರೋಪಗಳ ಬಗ್ಗೆ ಜನವರಿ 28ರ ಒಳಗಾಗಿ ವಾಸ್ತವಿಕ ವರದಿ ನೀಡಬೇಕು ಎಂದು ಚುನಾವಣಾ ಸಮಿತಿ ಹರಿಯಾಣಗೆ ನಿರ್ದೇಶನ ನೀಡಿತ್ತು.
ಅರವಿಂದ್ ಕೇಜ್ರಿವಾಲ್ ಹೇಳಿದ್ದೇನು?
ಜನವರಿ 27ರಂದು ಸೋಮವಾರ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದ ಅರವಿಂದ್ ಕೇಜ್ರಿವಾಲ್, ಜನರಿಗೆ ನೀರು ಬಿಡದೇ ಇರುವುದಕ್ಕಿಂತ ದೊಡ್ಡ ಪಾಪ ಮತ್ತೊಂದಿಲ್ಲ. ಬಿಜೆಪಿ ತನ್ನ ದ್ವೇಷದ ರಾಜಕೀಯಕ್ಕಾಗಿ ದೆಹಲಿಯ ಜನತೆ ಬಾಯಾರಿಕೆಯಿಂದ ಇರುವಂತೆ ಮಾಡುತ್ತಿದೆ. ಹರಿಯಾಣದಿಂದ ಬಿಡುತ್ತಿರುವ ನೀರಿನಲ್ಲಿ ವಿಷ ಬೆರೆಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.
ಕಲುಷಿತ ನೀರು ತುಂಬಾ ವಿಷಕಾರಿಯಾಗಿದ್ದು ದೆಹಲಿಯಲ್ಲಿರುವ ನೀರು ಸಂಸ್ಕರಣಾ ಘಟಕಗಳಲ್ಲಿ ಇದನ್ನು ಶುದ್ಧೀಕರಿಸಲು ಸಾಧ್ಯವಿಲ್ಲ. ದೆಹಲಿ ಜನರ ಸಾಮೂಹಿಕ ಹತ್ಯೆ ಮಾಡಲು ಬಿಜೆಪಿ ಬಯಸುತ್ತಿದೆ, ಆದರೆ ನಾವು ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದರು.
ಅರವಿಂದ್ ಕೇಜ್ರಿವಾಲ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಹರಿಯಾಣ ಮುಖ್ಯಮಂತ್ರಿ ನಯಾಬ್ ಸೈನಿ ಅವರ ಬಿಜೆಪಿ ಸರ್ಕಾರ, ಕೇಜ್ರಿವಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಯೋಚಿಸಿದೆ. ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಪತ್ರ ಬರೆದು, ಹರಿಯಾಣ ಸರ್ಕಾರದ ವಿರುದ್ಧ ಕೇಜ್ರಿವಾಲ್ ಅವರ ಆರೋಪಗಳು ಸುಳ್ಳಾಗಿದ್ದರೆ, ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಅವರ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಮನವಿ ಮಾಡಿತ್ತು.












Click it and Unblock the Notifications