"ಜನರನ್ನು ಲಸಿಕೆ ಪಡೆಯಲು ಉತ್ತೇಜಿಸಿ; ವದಂತಿ ವಿರುದ್ಧ ಅರಿವು ಮೂಡಿಸಿ"
ನವದೆಹಲಿ, ಏಪ್ರಿಲ್ 19: ಕೊರೊನಾ ಸೋಂಕಿನ ವಿರುದ್ಧ ಹೋರಾಡುವಲ್ಲಿ ಲಸಿಕೆ ಅತಿ ದೊಡ್ಡ ಅಸ್ತ್ರ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಹೆಚ್ಚೆಚ್ಚು ಜನರು ಲಸಿಕೆ ಪಡೆಯುವಂತೆ ಪ್ರೇರೇಪಿಸಿ ಎಂದು ವೈದ್ಯರಿಗೆ ತಿಳಿಸಿದ್ದಾರೆ.
ದೇಶದ ಹಲವು ಪ್ರಮುಖ ವೈದ್ಯರೊಂದಿಗೆ ಸೋಮವಾರ ಕೊರೊನಾ ಪರಿಸ್ಥಿತಿ ಕುರಿತು ನಡೆಸಿದ ವರ್ಚುಯಲ್ ಸಂವಾದದಲ್ಲಿ ಮಾತನಾಡಿದ ಅವರು, "ಎರಡನೇ ಹಾಗೂ ಮೂರನೇ ಶ್ರೇಣಿಯ ನಗರಗಳಲ್ಲಿ ಕೊರೊನಾ ವೇಗವಾಗಿ ಹರಡುತ್ತಿದೆ. ಹೀಗಾಗಿ ಅಲ್ಲಿನ ತಮ್ಮ ಸಹೋದ್ಯೋಗಿಗಳೊಂದಿಗೆ ಸಂವಾದ ನಡೆಸಿ ಆನ್ಲೈನ್ ಮೂಲಕ ಅವರಿಗೆ ಸಲಹೆ ನೀಡಬೇಕು ಹಾಗೂ ಕೊರೊನಾ ಕುರಿತು ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು" ಎಂದಿದ್ದಾರೆ.

ಕೊರೊನಾ ಲಸಿಕೆ ಹಾಗೂ ಚಿಕಿತ್ಸೆಗಳ ಕುರಿತ ವದಂತಿಗಳ ವಿರುದ್ಧ ಜನರಲ್ಲಿ ಅರಿವು ಮೂಡಿಸಬೇಕು. ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಯಾರೂ ಈ ಸೋಂಕಿಗೆ ತುತ್ತಾಗದಂತೆ ನೋಡಿಕೊಳ್ಳುವುದು ಬಹುಮುಖ್ಯವಾಗಿದೆ ಎಂದು ವೈದ್ಯರಿಗೆ ಹೇಳಿದ್ದಾರೆ. ಸೂಕ್ತ ಚಿಕಿತ್ಸೆಯೊಂದಿಗೆ ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ಕೌನ್ಸೆಲಿಂಗ್ ನೀಡುವುದೂ ಅವಶ್ಯಕ ಎಂದು ಸಲಹೆ ನೀಡಿದ್ದಾರೆ.
ಕೊರೊನಾ ಸೋಂಕಿಗೆ ಅಗತ್ಯ ಔಷಧಿ, ಲಸಿಕೆ ಹಾಗೂ ಆಮ್ಲಜನಕದ ಸಾಗಣೆ ಕುರಿತು ಕೇಂದ್ರ ಹಲವು ನಿರ್ಧಾರಗಳನ್ನು ತೆಗೆದುಕೊಂಡಿದೆ. ರಾಜ್ಯಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದೇ ಸಂದರ್ಭ ವೈದ್ಯರ ಕಾರ್ಯವನ್ನು ಶ್ಲಾಘಿಸಿದ ಮೋದಿ, "ನಮ್ಮ ದೇಶದ ವೈದ್ಯರ ಪರಿಶ್ರಮದಿಂದಲೇ ಭಾರತದಲ್ಲಿ ಈ ಮಟ್ಟಿಗೆ ಕೊರೊನಾ ನಿಯಂತ್ರಣ ಸಾಧ್ಯವಾಗಿದೆ. ಇದೀಗ ಎರಡನೇ ಅಲೆಯಲ್ಲಿಯೂ ವೈದ್ಯರು ತಮ್ಮೆಲ್ಲಾ ಪರಿಶ್ರಮ ಹಾಕಿ ಕೆಲಸ ಮಾಡುತ್ತಿದ್ದಾರೆ" ಎಂದರು.
ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ನೀತಿ ಆಯೋಗದ ಸದಸ್ಯ ವಿಕೆ ಪೌಲ್ ಕೂಡ ಉಪಸ್ಥಿತರಿದ್ದರು.












Click it and Unblock the Notifications