ಕರ್ನಾಟಕದಂತೆ ತಮಿಳುನಾಡಿನಲ್ಲೂ ಮಹಿಳೆಯರಿಗೆ ತಿಂಗಳಿಗೆ 2,000 ರೂಪಾಯಿ, ರೈತರ ಪಂಪ್ ಸೆಟ್ಗೆ ಉಚಿತ ವಿದ್ಯುತ್: ಡಿಕೆಶಿ ಘೋಷಣೆ
DK Shivakumar: ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಪಂಚ ಗ್ಯಾರಂಟಿಗಳನ್ನು ಜಾರಿ ಮಾಡಿದ್ದು, ಇವುಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದೆ. ಇದರಡಿಯಲ್ಲಿ ಪ್ರತಿ ಮನೆ ಯಜಮಾನಿ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2,000 ರೂಪಾಯಿ ಜಮಾ ಮಾಡಲಾಗುತ್ತದೆ. ಇದೀಗ ಇದೇ ಮಾದರಿಯನ್ನು ಪಕ್ಕದ ರಾಜ್ಯ ತಮಿಳುನಾಡಿನಲ್ಲೂ ಜಾರಿ ಮಾಡುವುದಾಗಿ ಡಿ.ಕೆ. ಶಿವಕುಮಾರ್ ಅವರು ಭರವಸೆ ನೀಡಿದ್ದಾರೆ.
ತಮಿಳುನಾಡಿನ ಉತ್ತಂಗರೈ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಪ್ಪುಸ್ವಾಮಿ ಅವರ ಪರವಾಗಿ ಕರ್ನಾಟಕ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಚುನಾವಣೆ ಪ್ರಚಾರ ಭಾಷಣ ಮಾಡಿದರು. ಈ ವೇಳೆ ಮಾತನಾಡಿದ ಅವರು, "ತಮಿಳುನಾಡಿನಲ್ಲಿ ಮಹಿಳೆಯರಿಗೆ ಪ್ರಸ್ತುತ 1,000 ರೂಪಾಯಿ ಹಣ ನೀಡುತ್ತಿದ್ದು, ಈ ಚುನಾವಣೆ ಬಳಿಕ ಕರ್ನಾಟಕ ಮಾದರಿಯಂತೆ 2,000 ರೂಪಾಯಿ ನೀಡಲಾಗುವುದು," ಎಂದು ಹೇಳಿದರು.

'ರೈತರ ಪಂಪ್ ಸೆಟ್ಗಳಿಗೆ ಉಚಿತ ವಿದ್ಯುತ್'
"1.31 ಕೋಟಿ ಕುಟುಂಬದ ಮಹಿಳೆಯರಿಗೆ ಇದರಿಂದ ಪ್ರಯೋಜನ ಆಗಲಿದೆ. ವಿದ್ಯುತ್ ಮೀಟರ್ ಇಲ್ಲದೆ ರೈತರ ಪಂಪ್ ಸೆಟ್ಗಳಿಗೆ ಉಚಿತ ವಿದ್ಯುತ್ ನೀಡಲಾಗುವುದು. ಕುಟುಂಬದ ಅಗತ್ಯ ವಸ್ತುಗಳ ಖರೀದಿಗೆ 8,000 ರೂಪಾಯಿ ನೀಡುವ ಭರವಸೆ ನೀಡಲಾಗಿದೆ. ವೃದ್ಧಾಪ್ಯ ವೇತನ ಸೇರಿದಂತೆ ಪಿಂಚಣಿ ಹಣಗಳ ಹೆಚ್ಚಳ ಮಾಡಲಾಗುವುದು," ಎಂದು ಹೇಳಿದರು.
'ತಮಿಳುನಾಡಿನ ಸ್ವಾಭಿಮಾನಕ್ಕೆ ಧಕ್ಕೆ'
"ಸ್ಟಾಲಿನ್ ಅವರು ಮತ್ತೆ ತಮಿಳುನಾಡಿನ ಮುಖ್ಯಮಂತ್ರಿ ಆಗಲಿದ್ದಾರೆ. ಅಣ್ಣಾ ಡಿಎಂಕೆಗೆ ಯಾವುದೇ ಅವಕಾಶವಿಲ್ಲ. ತನ್ನ ಅಸ್ತಿತ್ವ ಕಳೆದುಕೊಂಡಿರುವ ಅದು ಬಿಜೆಪಿ ಸೇರಿ ಛಿದ್ರವಾಗಿ ಹೋಗಿದೆ. ಇವರುಗಳು ದಕ್ಷಿಣ ಭಾರತವನ್ನ ಭಾಗ ಮಾಡಬೇಕು ಎಂದು ಹೊರಟಿದ್ದಾರೆ. ಅಣ್ಣಾ ಡಿಎಂಕೆಯವರು ಬಿಜೆಪಿ ಜೊತೆ ಸೇರಿ ತಮಿಳುನಾಡಿನ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ," ಎಂದು ಹೇಳಿದರು.
'ಕಾಂಗ್ರೆಸ್ ಎಲ್ಲಾ ವರ್ಗದ ಬಗ್ಗೆ ಚಿಂತನೆ ಮಾಡಿದೆ'
"ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿಗಳಾಗಿದ್ದ ಕಾಮರಾಜ್ ಅವರು ಅಂದಿನ ಕಾಲದಲ್ಲಿಯೇ ಎಲ್ಲರಿಗೂ ಉಚಿತ ಶಿಕ್ಷಣ ನೀಡಬೇಕು ಎಂದು ಆಲೋಚಿಸಿದ್ದರು. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ, ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗೆಲ್ಲಾ ಎಲ್ಲಾ ವರ್ಗದ ಬಗ್ಗೆ ಚಿಂತನೆ ಮಾಡಿದೆ. ಕಾರ್ಮಿಕರು, ರೈತರು, ವರ್ತಕರು, ವಿದ್ಯಾರ್ಥಿಗಳು ಮಕ್ಕಳಿಂದ ವಯಸ್ಸಾದವರವರೆಗೆ ಕಾರ್ಯಕ್ರಮ ಕೊಟ್ಟಿದ್ದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ," ಎಂದರು.
'ಕರ್ನಾಟಕದಲ್ಲಿ ಪಂಚ ಗ್ಯಾರಂಟಿಗಳನ್ನು ನೀಡಿದ್ದೇವೆ'
"ಆಹಾರ ಭದ್ರತಾ ಕಾಯ್ದೆ, ನರೇಗಾ ಸೇರಿದಂತೆ ಅನೇಕ ಜನಪರ ಯೋಜನೆ ನೀಡಿದ್ದು ಕಾಂಗ್ರೆಸ್ ಪಕ್ಷ. ಕರ್ನಾಟಕದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ನೀಡಿದ್ದೇವೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಸಾರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣ, ಗೃಹಲಕ್ಷ್ಮಿ ಯೋಜನೆಯಡಿ ತಿಂಗಳಿಗೆ 2,000 ಸಾವಿರ ನೀಡುತ್ತಿದ್ದೇವೆ. ಅಲ್ಲದೆ, 10 ಕೆಜಿ ಅಕ್ಕಿ ನೀಡಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ," ಎಂದು ಹೇಳಿದರು.
"ಕಾಂಗ್ರೆಸ್ ಅಭ್ಯರ್ಥಿ ಕುಪ್ಪುಸ್ವಾಮಿ ಅವರು ಪಕ್ಷದ ಯೂನಿಯನ್ ನಾಯಕರು. ಇದೇ ಭಾಗದಲ್ಲಿ ಸಾಕಷ್ಟು ಪ್ರಭಾವ ಹೊಂದಿರುವವರು. ಹಸ್ತ ಇಲ್ಲ ಅಂದರೆ ನಾವು ನೀವು ಯಾರೂ ಬದುಕೋಕೆ ಆಗಲ್ಲ. ಎಲ್ಲರೂ ಹಸ್ತ ಬಳಸಿಯೇ ಮತ ಹಾಕಬೇಕು. ಇದೇ ಹಸ್ತ ದೇಶಕ್ಕೆ ಸಂವಿಧಾನ, ರಾಷ್ಟ್ರಗೀತೆ, ರಾಷ್ಟ್ರಧ್ವಜ ನೀಡಿದೆ. ಸ್ವಾತಂತ್ರ್ಯಕ್ಕೆ ಹೋರಾಡಿದ್ದು ಇದೇ ಕಾಂಗ್ರೆಸ್ ಪಕ್ಷ," ಎಂದರು.
"ತಮಿಳು ಸಂಸ್ಕೃತಿ, ತಮಿಳು ಭಾಷೆ, ಅಸ್ತಿತ್ವ, ಗೌರವ ಉಳಿಯಬೇಕು ಎಂದರೆ ಎಲ್ಲರೂ ಡಿಎಂಕೆ, ಕಾಂಗ್ರೆಸ್, ಕಮ್ಯುನಿಸ್ಟ್ ಹಾಗೂ ಇತರರನ್ನು ಒಳಗೊಂಡ ಮೈತ್ರಿಕೂಟಕ್ಕೆ ಮತ ನೀಡಬೇಕು. ಸ್ಟಾಲಿನ್ ಅವರ ಮುಂದಾಳತ್ವದಲ್ಲಿ 20 ಪಕ್ಷಗಳ ಮೈತ್ರಿ ಒಂದುಗೂಡಿ ಕೆಲಸ ಮಾಡುತ್ತಿವೆ. ನಾವು ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಕೆಲಸ ಮಾಡಲಾಗುತ್ತಿದೆ," ಎಂದು ಹೇಳಿದರು.












Click it and Unblock the Notifications