Get Updates
Get notified of breaking news, exclusive insights, and must-see stories!

ಮಾಯಾ ಮೈತ್ರಿಯನ್ನು ರಾಹುಲ್ ಅವರೇ ತಿರಸ್ಕರಿಸಿದರೆ? 7 ಕಾರಣ ಇಲ್ಲಿವೆ

ಬೆಂಗಳೂರು, ಅಕ್ಟೋಬರ್ 08 : ಮೇ 23ರಂದು ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮಯದಲ್ಲಿ, ಶ್ರೀಮತಿ ಸೋನಿಯಾ ಗಾಂಧಿ ಅವರು ಕುಮಾರ್ ಮಾಯಾವತಿ ಅವರನ್ನು ಆತ್ಮೀಯವಾಗಿ ಆಲಂಗಿಸಿಕೊಂಡು, ನಗುನಗುತ್ತಲೇ ಪ್ರೀತಿಯಿಂದ ತಲೆಗೆ ಡಿಕ್ಕಿ ಹೊಡೆದ ಚಿತ್ರ ಹಲವಾರು ಅರ್ಥಗಳನ್ನು ಹುಟ್ಟುಹಾಕಿತ್ತು. ಎಲ್ಲೆಲ್ಲೂ ಅದರ ಬಗ್ಗೆಯೇ ಚರ್ಚೆ ನಡೆದಿತ್ತು.

ಆದರೆ, ಇಂದು ಏನಾಗಿದೆ? ಮಾಯಾವತಿ ಅವರು ಪ್ರೀತಿಯಿಂದ ಡಿಕ್ಕಿ ಹೊಡೆದಿದ್ದ ಸೋನಿಯಾ ಗಾಂಧಿ ಅವರ ಪಕ್ಷಕ್ಕೆ ಸರಿಯಾಗಿಯೇ ಡಿಚ್ಚಿ ಕೊಟ್ಟಿದ್ದಾರೆ. ಮುಂಬರುವ ಮಧ್ಯಪ್ರದೇಶ, ರಾಜಸ್ತಾನ ಮತ್ತು ಛತ್ತೀಸ್ ಗಢ ರಾಜ್ಯಗಳಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ, ನಾವು ಏಕಾಂಗಿಯಾಗಿಯೇ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಮೈತ್ರಿಗೆ ಕಾದು ಕುಳಿತಿದ್ದ ಕಾಂಗ್ರೆಸ್ಸಿಗೆ ಇದು ಮಾಯಾವತಿ ನೀಡಿರುವ ಭಾರೀ ಹೊಡೆತ ಎಂದೇ ಬಿಂಬಿಸಲಾಗುತ್ತಿದೆ.

ಇದಕ್ಕೆ ಕಾರಣವೂ ಇದೆ. ಏಕೆಂದರೆ, ಇತ್ತೀಚಿನ ಹಲವಾರು ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲು ಕಂಡಿದೆ. ಎಲ್ಲೆಲ್ಲಿ ಮೈತ್ರಿ ಮಾಡಿಕೊಂಡಿತ್ತೋ ಆಯಾ ಉಪ ಚುನಾವಣೆಗಳಲ್ಲಿ ಜಯ ಸಾಧಿಸಿದೆ. ಅಲ್ಲದೆ, ಮೋದಿಯವರ ವಿರುದ್ಧ ಹೋರಾಡಬೇಕಾದರೆ ಎಲ್ಲ ವಿರೋಧ ಪಕ್ಷಗಳು ಒಗ್ಗೂಡಲೇಬೇಕು ಎಂಬ ಅಘೋಷಿತ ನಿರ್ಣಯವನ್ನು ಕೂಡ ತೆಗೆದುಕೊಳ್ಳಲಾಗಿದೆ. ಇಂಥ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷವನ್ನೇ ಒಂದು ಪ್ರಾದೇಶಿಕ ಪಕ್ಷ ಧಿಕ್ಕರಿಸುವುದೆಂದರೇನು?

ಆದರೆ, ವಸ್ತುಸ್ಥಿತಿಯನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ವಸ್ತುಸ್ಥಿತಿಯೇ ಬೇರೆಯದಾಗಿದೆ. ಅಸಲಿಗೆ, ಮಾಯಾವತಿ ಅವರು ಕಾಂಗ್ರೆಸ್ ಪಕ್ಷವನ್ನು ಮತ್ತು ರಾಹುಲ್ ಗಾಂಧಿ ಅವರ ಮೈತ್ರಿಯನ್ನು ಧಿಕ್ಕರಿಸಿದ್ದಲ್ಲ. ರಾಹುಲ್ ಗಾಂಧಿ ಅವರೇ ಉದ್ದೇಶಪೂರ್ವಕವಾಗಿ ಮಾಯಾವತಿ ಜೊತೆಗಿನ ಮೈತ್ರಿಗೆ ಕೈಯೊಡ್ಡಿಲ್ಲ ಮತ್ತು ಉದ್ದೇಶಪೂರ್ವಕವಾಗಿಯೇ ಅವರನ್ನು ದೂರವಿಟ್ಟಿದ್ದಾರೆ. ಕಾಂಗ್ರೆಸ್ ಸ್ಪಂದಿಸದಿದ್ದರಿಂದಲೇ ಮುನಿಸಿಕೊಂಡ ಮಾಯಾ ಬೇರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಮಾತಾಡಿದ್ದಾರೆ.

ಸೆರಗಿನ ಕೆಂಡದಂತಹ ಮಾಯಾವತಿ

ಸೆರಗಿನ ಕೆಂಡದಂತಹ ಮಾಯಾವತಿ

ಮಾಯಾವತಿ ಅವರಂಥ ಸೆರಗಿನ ಕೆಂಡದಂಥ ನಾಯಕಿಯೊಂದಿಗೆ ವಿಧಾನಸಭೆ ಚುನಾವಣೆಗಳಲ್ಲಿ ಮೈತ್ರಿ ಮಾಡಿಕೊಳ್ಳದಿರುವುದು ಕಾಂಗ್ರೆಸ್ಸಿಗೆ ಸೌಖ್ಯ ಎಂದು ಕಾಂಗ್ರೆಸ್ ಥಿಂಕ್ ಟ್ಯಾಂಕ್ ರಾಹುಲ್ ಗಾಂಧಿ ಅವರಿಗೆ ಉಪದೇಶ ಮಾಡಿದ್ದರಿಂದಲೇ ಅವರು ಮೈತ್ರಿಗೆ ಹಿಂದೇಟು ಹಾಕಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸುತ್ತವೆ. ಮೈತ್ರಿಗೆ ಸಂಬಂಧಿಸಿದಂತೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳನ್ನು ಒಂದೇ ತಕ್ಕಡಿಯಲ್ಲಿ ಹಾಕಿ ತೂಗಲಾಗುವುದಿಲ್ಲ. ಆದ್ದರಿಂದಲೇ ರಾಹುಲ್ ಅವರು ಜಾಣತನದಿಂದ ಹಿಂದೆ ಸರಿದಿದ್ದಾರೆ. ಇದಕ್ಕೆ ಮತ್ತಷ್ಟು ಕಾರಣಗಳನ್ನು ಹುಡುಕುವುದಾದರೆ...

ಮೂರೂ ರಾಜ್ಯಗಳಲ್ಲಿ ಬಿಎಸ್ಪಿ ಅಪ್ರಸ್ತುತ

ಮೂರೂ ರಾಜ್ಯಗಳಲ್ಲಿ ಬಿಎಸ್ಪಿ ಅಪ್ರಸ್ತುತ

ಮಧ್ಯಪ್ರದೇಶ, ರಾಜಸ್ತಾನ ಮತ್ತು ಛತ್ತೀಸ್ ಗಢದಲ್ಲಿ ಬಹುಜನ ಸಮಾಜವಾದಿ ಪಕ್ಷ ಅಸ್ತಿತ್ವದಲ್ಲಿಯೇ ಇಲ್ಲ. ಈ ಮೂರು ರಾಜ್ಯಗಳಲ್ಲಿಯೂ ಹೋರಾಟವಿರುವುದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆಯೇ. ಉಳಿದ ಪಕ್ಷಗಳು ಅಪ್ರಸ್ತುತ. 2013ರಲ್ಲಿ ನಡೆಸಲಾಗಿದ್ದ ಚುನಾವಣೆಯಲ್ಲಿ ಬಿಎಸ್ಪಿ ಮಧ್ಯಪ್ರದೇಶದಲ್ಲಿ 6.4ರಷ್ಟು, ಛತ್ತೀಸ್ ಗಢದಲ್ಲಿ 4.4 ಮತ್ತು ರಾಜಸ್ತಾನದಲ್ಲಿ 3.4ರಷ್ಟು ಮಾತ್ರ ಮತಗಳನ್ನು ಪಡೆದಿತ್ತು. ರಾಜಸ್ತಾನದಲ್ಲಿ ಐದು ವರ್ಷಕ್ಕೊಂದರಂತೆ ಬಿಜೆಪಿ ಮತ್ತು ಕಾಂಗ್ರೆಸ್ ಸರಕಾರಗಳು ಬದಲಾಗುತ್ತವೆ. ಛತ್ತೀಸ್ ಗಢದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ ಇದ್ದೇ ಇರುತ್ತದೆ. ಇನ್ನು ಮಧ್ಯಪ್ರದೇಶದಲ್ಲಿಯೂ ಮಾಯಾವತಿ ಆಟಕ್ಕುಂಟು ಲೆಕ್ಕಕ್ಕಿಲ್ಲ. ಬಿಎಸ್ಪಿ ಕಳೆದ ಬಾರಿ ಗೆದ್ದಿದ್ದು ಒಂದೇ ಸೀಟು.

ರಾಹುಲ್ ಗಾಂಧಿಗೆ ಹಿತೈಷಿಗಳಿಂದ ಕಿವಿಮಾತು

ರಾಹುಲ್ ಗಾಂಧಿಗೆ ಹಿತೈಷಿಗಳಿಂದ ಕಿವಿಮಾತು

ಇಂಥ ಪಕ್ಷದೊಂದಿಗೆ ಮತ್ತು ಫೈರ್ ಬ್ರಾಂಡ್ ನಾಯಕಿ ಮಾಯಾವತಿ ಅವರೊಂದಿಗೆ ಮೈತ್ರಿ ಮಾಡಿಕೊಂಡಾದರೂ ಏನು ಪ್ರಯೋಜನ ಎಂಬುದು ರಾಹುಲ್ ಗಾಂಧಿ ಅವರಿಗೆ ಅವರ ಸುತ್ತಲಿನ ಬುದ್ಧಿವಂತರು ಹೇಳಿರುವ ಕಿವಿಮಾತು. ಮೈತ್ರಿ ಮಾಡಿಕೊಂಡರೆ ಸೀಟು ಹಂಚಿಕೆ ಮಾತು ಏಳುತ್ತದೆ. ಅವರು ಹೆಚ್ಚಿನ ಸೀಟುಗಳ ಬೇಡಿಕೆ ಇಟ್ಟೇ ಇಡುತ್ತಾರೆ. ಆದರೆ, ಈ ಮೂರು ರಾಜ್ಯಗಳಲ್ಲಿ ಒಂದೇ ಒಂದು ಸೀಟು ಗೆಲ್ಲಲು ಸಾಮರ್ಥ್ಯವಿಲ್ಲದ ಮಾಯಾವತಿ ಅವರೊಂದಿಗೆ ಇನ್ನೂ ಹೆಚ್ಚಿನ ಸೀಟು ನೀಡಿ ಕಾಂಗ್ರೆಸ್ ಗಿಟ್ಟಿಸುವುದಾದರೂ ಏನು? ಗಳಿಸುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು ಎಂಬುದು ರಾಹುಲ್ ಗಾಂಧಿ ಅವರಿಗೆ ಮನವರಿಕೆ ಆಗಿದೆ.

ಶಿವಭಕ್ತ ರಾಮಭಕ್ತನಾಗಿ ರಾಹುಲ್ ಟೆಂಪಲ್ ರನ್

ಶಿವಭಕ್ತ ರಾಮಭಕ್ತನಾಗಿ ರಾಹುಲ್ ಟೆಂಪಲ್ ರನ್

ಎಲ್ಲಕ್ಕಿಂತ ಪ್ರಮುಖವಾಗಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಗೆ ಕೇಂದ್ರ ತಿದ್ದುಪಡಿ ತಂದ ನಂತರ ಈ ಮೂರು ರಾಜ್ಯಗಳಲ್ಲಿ ಮೇಲು ಜಾತಿಯ ಸಮುದಾಯದವರು ಕೇಂದ್ರದ ವಿರುದ್ಧ ಮುನಿಸಿಕೊಂಡಿದ್ದಾರೆ, ಸವರ್ಣ ಆಂದೋಲನವನ್ನು ಆರಂಭಿಸಿದ್ದಾರೆ. ಈ ಮೂರು ರಾಜ್ಯಗಳಲ್ಲಿ ಮೇಲು ಜಾತಿಯವರೇ ಶೇ.15ರಿಂದ 20ರಷ್ಟು ಇದ್ದಾರೆ. ಇನ್ನು ದಲಿತ ನಾಯಕಿಯಾಗಿರುವ ಮಾಯಾವತಿ ಅವರೊಂದಿಗೆ ಸ್ನೇಹ ಸಂಪಾದಿಸಿದರೆ ಈ ಮೇಲು ಜಾತಿಯ ಮತಗಳೂ ಕೈಬಿಟ್ಟು ಹೋಗಲಿವೆ ಎಂಬ ದೂರಾಲೋಚನೆ ಇಟ್ಟುಕೊಂಡೇ ಮಾಯಾವತಿಗೆ ಸಣ್ಣಗೆ ಹೊಡೆತ ಕೊಟ್ಟಿದೆ ಕಾಂಗ್ರೆಸ್. ಈಗ ರಾಹುಲ್ ಗಾಂಧಿ ಅವರು 'ಶಿವಭಕ್ತ'ನಾಗಿ, 'ರಾಮಭಕ್ತ'ನಾಗಿ ಮಂದಿರಗಳಿಗೆ ಎಡತಾಕುತ್ತಿರುವ ಮೂಲ ಕಾರಣ ಗೊತ್ತಾಗಿರಬೇಕಲ್ಲ? ಮೇಲು ಜಾತಿಯ ಮತಗಳ ಓಲೈಕೆ.

ಮಾಯಾವತಿ ಈಗ ಗೆಲ್ಲುವ ಕುದುರೆಯಲ್ಲ

ಮಾಯಾವತಿ ಈಗ ಗೆಲ್ಲುವ ಕುದುರೆಯಲ್ಲ

ಆನೆ ಚಿಹ್ನೆ ಇಟ್ಟುಕೊಂಡಿರುವ ಬಹುಜನ ಸಮಾಜವಾದಿ ಪಕ್ಷಕ್ಕೆ ಈಗ ಆನೆಬಲವಿಲ್ಲ, ಅವರು ಗೆಲ್ಲುವ ಕುದುರೆಯೂ ಅಲ್ಲ. ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಧೂಳಿಪಟವಾಗಿದ್ದ ಮಾಯಾವತಿ ಗೆದ್ದಿದ್ದು ಬರೀ 19 ಸೀಟುಗಳು ಮಾತ್ರ. ಇನ್ನು ಮಧ್ಯಪ್ರದೇಶ, ರಾಜಸ್ತಾನ ಮತ್ತು ಛತ್ತೀಸ್ ಗಢದಲ್ಲಿಯೂ ಅವರನ್ನು ಅವರ ಪಕ್ಷವನ್ನು ಮತದಾರರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಕರ್ನಾಟಕದಲ್ಲಿಯೂ ಇದನ್ನು ನಾವು ನೋಡಿದ್ದೇವೆ. ಇಲ್ಲಿ ಸ್ಪರ್ಧಿಸಿದ 20 ಸೀಟುಗಳಲ್ಲಿ ಗೆದ್ದಿದ್ದು ಕೇವಲ ಒಂದೇ ಒಂದು. ಒಂದು ಮಾತಂತೂ ಸತ್ಯ. ಮತದಾರರು ಮಾಯಾವತಿ ಅವರ ವೈಖರಿಯಿಂದ ಬೇಸತ್ತಿದ್ದಾರೆ. ಇಂಥವರೊಂದಿಗೆ ರಾಹುಲ್ ಗಾಂಧಿ ಯಾಕಾದರೂ ಮೈತ್ರಿ ಮಾಡಿಕೊಂಡಾರು?

ದಲಿತರೇ ಮಾಯಾವತಿಯನ್ನು ತಿರಸ್ಕರಿಸಿದ್ದಾರೆ

ದಲಿತರೇ ಮಾಯಾವತಿಯನ್ನು ತಿರಸ್ಕರಿಸಿದ್ದಾರೆ

ಮಧ್ಯಪ್ರದೇಶ, ರಾಜಸ್ತಾನ ಮತ್ತು ಛತ್ತೀಸ್ ಗಢದಲ್ಲಿರುವ ದಲಿತರೇ ಮಾಯಾವತಿಯನ್ನು ತಿರಸ್ಕರಿಸಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಗಳಲ್ಲಿಯೂ ಬಿಎಸ್ಪಿಯನ್ನು ಮತದಾರರು ಪುರಸ್ಕರಿಸುವ ಯಾವುದೇ ಸೂಚನೆಗಳು ಕಾಣಿಸುತ್ತಿಲ್ಲ. ದಲಿತರು ಭಾರತೀಯ ಜನತಾ ಪಕ್ಷಕ್ಕೆ ಅಥವಾ ಕಾಂಗ್ರೆಸ್ಸಿಗೆ ಮತ ಹಾಕಬೇಕು. ಆದರೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಗೆ ತಿದ್ದುಪಡಿಯನ್ನು ತಂದು ಬಿಜೆಪಿ ಈಗಾಗಲೆ ದಲಿತರ ಮತಬ್ಯಾಂಕಿಗೆ ಕೈಹಾಕಿದೆ. ಹೀಗಿರುವಾಗ ದಲಿತರ ನಾಯಕಿ ಮಾಯಾವತಿಯೊಂದಿಗೆ ಕೈಜೋಡಿಸಿದರೆ ಕೈಸುಟ್ಟುಕೊಳ್ಳುವುದೇ ಹೆಚ್ಚು ಕಾಂಗ್ರೆಸ್ಸಿದೆ.

ಲೋಕಸಭೆ ಚುನಾವಣೆಗೆ ಮುನ್ನದ ಸೆಮಿ ಫೈನಲ್

ಲೋಕಸಭೆ ಚುನಾವಣೆಗೆ ಮುನ್ನದ ಸೆಮಿ ಫೈನಲ್

ಲೋಕಸಭೆ ಚುನಾವಣೆಗೆ ಮುನ್ನದ ಸೆಮಿ ಫೈನಲ್ ನಂತಿರುವ ವಿಧಾನಸಭೆ ಚುನಾವಣೆಯ ನಂತರ ಮಹಾಘಟಬಂಧನ್ ದ ಮಾತುಕತೆ ಆರಂಭ ಆಗೇ ಆಗುತ್ತದೆ. ಪ್ರಧಾನಿ ಹುದ್ದೆಯ ಆಕಾಂಕ್ಷಿಗಳಲ್ಲೊಬ್ಬರಾಗಿರುವ ಮಾಯಾವತಿ ಅವರು ಹೇಗಿದ್ದರೂ ಕಾಂಗ್ರೆಸ್ ಜೊತೆ ಮತ್ತೆ ಮೈತ್ರಿಗೆ ಕೈಚಾಚೇ ಚಾಚುತ್ತಾರೆ ಎಂಬ ಲೆಕ್ಕಾಚಾರ ಕಾಂಗ್ರೆಸ್ಸಿನದ್ದು. ಇದೆಲ್ಲಕ್ಕಿಂತ ಹೆಚ್ಚಾಗಿ ಇತ್ತೀಚೆಗೆ ನಡೆಸಲಾಗಿರುವ ಕೆಲ ಚುನಾವಣಾ ಸಮೀಕ್ಷೆಗಳು, ಬಿಜೆಪಿಗೆ ಮೂರು ರಾಜ್ಯಗಳಲ್ಲಿ ಹಿನ್ನಡೆಯಾಗಲಿದ್ದು, ಕಾಂಗ್ರೆಸ್ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ಹೇಳಿರುವುದರಿಂದ ಮೈತ್ರಿ ಮಾಡಿಕೊಂಡರೆ ಹಿನ್ನಡೆಯೇ ಹೆಚ್ಚು ಎಂಬುದನ್ನು ಅರಿತುಕೊಂಡಿದೆ ಕಾಂಗ್ರೆಸ್. ಅವಶ್ಯಕತೆ ಬಿದ್ದರೆ ಮಾತ್ರ ಇತರ ಪಕ್ಷಗಳೊಂದಿಗೆ ಕೈಜೋಡಿಸುವ ನಿರ್ಧಾರಕ್ಕೆ ರಾಹುಲ್ ಗಾಂಧಿ ಬಂದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+