Explainer: ಡಿಜಿಪಿ ರಾಮಚಂದ್ರರಾವ್ ಪ್ರಕರಣ: ಐಪಿಎಸ್ ಅಧಿಕಾರಿಗಳನ್ನು ವಜಾ ಮಾಡುವ ಅಧಿಕಾರ ಯಾರಿಗಿದೆ?
ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಕೆ.ರಾಮಚಂದ್ರರಾವ್ ರಾವ್ ಅವರು ಕಚೇರಿಯಲ್ಲಿ ಮಹಿಳೆಯರ ಜೊತೆಗೆ ಅಸಭ್ಯವಾಗಿ ವರ್ತಿಸಿದ ವಿಡಿಯೋ ವೈರಲ್ ಆಗಿ ಕರ್ನಾಟಕದಲ್ಲಿ ಸಂಚಲನ ಸೃಷ್ಟಿಸಿದೆ. ಪೊಲೀಸ್ ಇಲಾಖೆಯ ಮಾನ ಹರಾಜು ಹಾಕಿದೆ. ಇದರಿಂದ ಮುಜುಗರ ಎದುರಿಸಿರುವ ಗೃಹ ಇಲಾಖೆಯು ರಾಮಚಂದ್ರ ರಾವ್ ಅವರನ್ನು ಈಗಾಗಲೇ ಅಮಾನತು ಮಾಡಿ, ತನಿಖೆ ಆರಂಭಿಸಿದೆ. ತನಿಖೆಯಲ್ಲಿ ಅವರ ತಪ್ಪುಗಳು ಸಾಬೀತಾದರೆ ಇವರನ್ನು ವಜಾ ಮಾಡಲಾಗುವುದು ಎನ್ನುವ ಧಾಟಿಯಲ್ಲಿ ಗೃಹ ಸಚಿವ ಡಾ ಜಿ.ಪರಮೇಶ್ವರ ಮಾತನಾಡಿದ್ದಾರೆ. ಐಪಿಎಸ್ ಅಧಿಕಾರಿಯ್ನು ಸೇವೆಯಿಂದ ಯಾರು ವಜಾ ಮಾಡುತ್ತಾರೆ? ಕೇಂದ್ರ ನಾಗರಿಕ ಸೇವೆಯಲ್ಲಿ ಇರುವವರನ್ನು ವಜಾ ಮಾಡುವ ಅಧಿಕಾರ ಯಾರಿಗಿದೆ? ಈ ರಾಮಚಂದ್ರ ರಾವ್ ಅವರು ವಜಾ ಆಗುವುದಾದರೆ ಅದರಲ್ಲಿ ರಾಜ್ಯ ಸರ್ಕಾರದ ಪಾತ್ರವೇನು? -ಜನರಲ್ಲಿ ಚರ್ಚೆಯಾಗುತ್ತಿರುವ ಈ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರವಿದೆ.
ಭಾರತದ ಸಂವಿಧಾನದ 311ನೇ ವಿಧಿಯ ಪ್ರಕಾರ, ದೇಶದ ನಾಗರಿಕ ಸೇವೆಯಲ್ಲಿರುವ ವ್ಯಕ್ತಿ/ಅಧಿಕಾರಿಯನ್ನು ನೇಮಕಾತಿ ಪ್ರಾಧಿಕಾರಕ್ಕಿಂತ ಕೆಳಮಟ್ಟದ ಪ್ರಾಧಿಕಾರವು ವಜಾಗೊಳಿಸಲು ಅಥವಾ ಸೇವೆಯಿಂದ ತೆಗೆದು ಹಾಕಲು ಬರುವುದಿಲ್ಲ. ಭಾರತೀಯ ನಾಗರಿಕ ಸೇವೆಯ (ಐಎಎಸ್) ಅಧಿಕಾರಿಯನ್ನು ರಾಷ್ಟ್ರಪತಿಗಳು ನೇಮಕ ಮಾಡಿರುತ್ತಾರೆ. ಆದ್ದರಿಂದ ಭಾರತದ ರಾಷ್ಟ್ರಪತಿಗಳಿಗೆ ಮಾತ್ರವೇ ಒಬ್ಬ ಐಪಿಎಸ್ ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸುವ ಅಧಿಕಾರ ಇರುತ್ತದೆ.

ರಾಜ್ಯ ಸರ್ಕಾರಕ್ಕೆ ವಜಾಗೊಳಿಸುವ ಅಧಿಕಾರ ಇದೆಯೇ?
ಭಾರತದ ರಾಷ್ಟ್ರಪತಿಗಳೇ ಐಪಿಎಸ್ ಅಧಿಕಾರಿಗೆ ನೇಮಕಾತಿ ಪ್ರಾಧಿಕಾರವಾಗಿರುತ್ತಾರೆ. ಆದ್ದರಿಂದ ಭಾರತದ ರಾಷ್ಟ್ರಪತಿಗಳು ಮಾತ್ರ ವಜಾಗೊಳಿಸುವ ಅಧಿಕಾರ ಹೊಂದಿರುತ್ತಾರೆ. ಅದಕ್ಕಾಗಿ ಅವರು ನಿರ್ದಿಷ್ಟ ಕಾರ್ಯ ವಿಧಾನ, ಕಾನೂನು ನಿಯಮಗಳನ್ನು ಪಾಲಿಸುತ್ತಾರೆ. ರಾಷ್ಟ್ರಪತಿಗಳ ಹೊರತು ರಾಜ್ಯ ಸರ್ಕಾರಗಳಿಗೆ ಐಪಿಎಸ್ ಅಧಿಕಾರಿಯನ್ನು ವಜಾಗೊಳಿಸುವುದು, ಸೇವೆಯಿಂದ ತೆಗೆದು ಹಾಕುವ ಅಧಿಕಾರ ಇರುವುದಿಲ್ಲ. ಆದರೆ ಸೇವೆಯಿಂದ ಅಮಾನತು ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ. ಈ ನಿಯಮದಡಿಯೇ ಕರ್ನಾಟಕ ಸರ್ಕಾರ ರಾಸಲೀಲೆ ವಿಡಿಯೋ ಪ್ರಕರಣದಲ್ಲಿ ಡಿಜಿಪಿ ರಾಮಚಂದ್ರ ರಾವ್ ಅವರನ್ನು ಅಮಾನತು ಮಾಡಿ ಆದೇಶಿಸಿದೆ.
ಐಪಿಎಸ್ ಅಧಿಕಾರಿ ವಜಾ ಪ್ರಕ್ರಿಯೆ ಹೇಗಿರುತ್ತದೆ?
ರಾಷ್ಟ್ರಪತಿಗಳು ಐಪಿಎಸ್ ಅಧಿಕಾರಿಗಳನ್ನು ವಜಾಗೊಳಿಸುವ ಮುನ್ನ ಕೆಲವು ವಿಧಾನಗಳನ್ನು ಅನುಸರಿಸುತ್ತಾರೆ. ಐಪಿಎಸ್ ಅಧಿಕಾರಿ ನಿಯೋಜನೆ ಆಗಿದ್ದ ಇಲಾಖೆಯಿಂದ ಮಾಹಿತಿ ಪಡೆಯುತ್ತಾರೆ. ಭಾರತ ಸರ್ಕಾರ ಮತ್ತು ಕೇಂದ್ರ ನಾಗರಿಕ ಸೇವಾ ಆಯೋಗ (ಯುಪಿಎಸ್ಸಿ) ಸಮಾಲೋಚನೆ ನಡೆಸುವುದು ವಜಾ ಪ್ರಕ್ರಿಯೆಯ ಭಾಗವಾಗಿರುತ್ತದೆ. ಇಲಾಖೆ ತನಿಖೆ ಅಗತ್ಯವಾಗಿರುತ್ತದೆ. ತಪ್ಪಿತಸ್ಥರ ಐಪಿಎಸ್ ಅಧಿಕಾರಿಯನ್ನು ವಜಾಗೊಳಿಸುವಂತೆ ರಾಜ್ಯ ಸರ್ಕಾರ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಬೇಕಾಗುತ್ತದೆ. ಅದಕ್ಕೆ ಪೂರಕವಾದ ತನಿಖೆ, ಸಾಕ್ಷ್ಯಗಳ ವರದಿ ಸಲ್ಲಿಸಬೇಕಾಗುತ್ತದೆ.
ದೇಶದ ಉನ್ನತ ಸೇವೆಯಲ್ಲಿರುವ ಐಪಿಎಸ್ ಅಧಿಕಾರಿಯನ್ನು ಸೇವೆಯಿಂದ ತೆಗೆದು ಹಾಕುವುದು ಸಣ್ಣ ವಿಷಯವಲ್ಲ. ಅವರನ್ನು ವಜಾಗೊಳಿಸುವ ಮೊದಲು ಅಗತ್ಯ ವಿಚಾರಣೆಗಳು ಮತ್ತು ಕಾನೂನು ನಿಯಮಗಳ ಪಾಲನೆಗಳು ಕಡ್ಡಾಯವಾಗಿರುತ್ತದೆ. ಅದೆಲ್ಲವನ್ನು ರಾಷ್ಟ್ರಪತಿಗಳು ಪಾಲಿಸುತ್ತಾರೆ. ಆರೋಪ ಹೊತ್ತ ಐಪಿಎಸ್ ಅಧಿಕಾರಿಗೆ ಆರೋಪಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಲಾಗುತ್ತದೆ. ಅಧಿಕಾರಿಯ ಪ್ರತಿಕ್ರಿಯೆಗೆ, ತಮ್ಮ ನಡೆ ಬಗ್ಗೆ ಸಮರ್ಥನೆಗೆ ಅವಕಾಶ ನೀಡಲಾಗುತ್ತದೆ. ಆ ಅಧಿಕಾರಿ ವಿರುದ್ಧ ಅತ್ಯಂತ ಗಂಭೀರ ಆರೋಪಗಳಿದ್ದರೆ ತನಿಖಾ ಸಮಿತಿಯಿಂದ ಮತ್ತೆ ತನಿಖೆ ನಡೆಸುವ ಸಾಧ್ಯತೆಗಳು ಇರುತ್ತದೆ.
ಇದೆಲ್ಲ ಪ್ರಕ್ರಿಯೆಯು ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಅನುಮೋದನೆಗೆ ಕಳುಹಿಸಲಾಗುತ್ತದೆ. ಅಲ್ಲಿಂದ ಅನುಮೋದನೆ ದೊರೆತರೆ ಈ ಎಲ್ಲ ಪ್ರಕ್ರಿಯೆಗಳು, ಅಗತ್ಯ ಸಾಕ್ಷ್ಯಾಧಾರಗಳಿಂದ ರಾಷ್ಟ್ರಪತಿಗಳ ನೇಮಕಾತಿ ಪ್ರಾಧಿಕಾರಕ್ಕೆ ತೃಪ್ತಿ ಸಿಕ್ಕಿದೆ ಎಂದರ್ಥ. ನಂತರವೇ ಸಂವಿಧಾನದ 311 ನೇ ವಿಧಿಯ ಪ್ರಕಾರ ರಾಷ್ಟ್ರಪತಿಗಳು ಐಪಿಎಸ್ ಅಧಿಕಾರಿಯನ್ನು ವಜಾಗೊಳಿಸಿ ಆದೇಶಿಸುತ್ತಾರೆ.
ರಾಮಚಂದ್ರ ರಾವ್ ವಜಾ ನಿರ್ಧಾರದಲ್ಲಿ ಕರ್ನಾಟಕ ಸರ್ಕಾರದ ಪಾತ್ರವೇನು?
ಡಿಜಿಪಿ ರಾಮಚಂದ್ರ ರಾವ್ ಅವರ ಮೇಲಿನ ರಾಸಲೀಲೆ ವಿಡಿಯೋ ಆರೋಪಕ್ಕೆ ಸಂಬಂಧಿಸಿದಂತೆ ಸರ್ಕಾರ ಅಮಾನತು ಮಾಡಿ ತನಿಖೆಗೆ ಸೂಚನೆ ನೀಡಿದೆ. ಈ ಸಂಬಂಧ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ. ತನಿಖೆ ನಡೆದು ರಾವ್ ಅವರ ತಪ್ಪುಗಳ ಸಾಬೀತಾದರೆ ವಜಾಗೊಳಿಸಲು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಬಹುದು.
ರಾಜ್ಯ ಸರ್ಕಾರ ನಡೆಸುವ ತನಿಖೆಯಲ್ಲಿ ಸೂಕ್ತ ಸಾಕ್ಷ್ಯಾಧಾರಗಳು ಇರಬೇಕು. ಸಂತ್ರಸ್ತರ ಮೇಲಿನ ಅಧಿಕಾರ ಹೇರಿಕೆ, ನೈಜ ವಿಡಿಯೋ ಸಾಕ್ಷ್ಯ, ನಿಯಮ ಉಲ್ಲಂಘನೆ, ಅಧಿಕಾರ ದುರುಪಯೋಗ, ವಿಡಿಯೋಗೆ ಸಂಬಂಧಿಸಿದ ದೂರು ದಾಖಲಾತಿ ಹೀಗೆ ಆರೋಪಗಳ ಸಾಬೀತಿಗೆ ಪೂರಕವಾದ ಮತ್ತು ವಜಾಗೆ ಶಿಫಾರಸು ಮಾಡಬಹುದಾದ ಪೂರಕವಾದ ದಾಖಲೆಗಳು, ಸಾಕ್ಷ್ಯಗಳ ಸಮೇತ ರಾಜ್ಯ ಸರ್ಕಾರವು ವರದಿ ಸಲ್ಲಿಸಬೇಕು. ಶಿಫಾರಸಿಗೆ ರಾಷ್ಟ್ರಪತಿಗಳನ್ನು ಕೋರಬೇಕು. ಬಳಿಕ ರಾಷ್ಟ್ರಪತಿಗಳು ಮುಂದಿನ ಕಾನೂನು ಕ್ರಮಗಳನ್ವಯ ವಜಾ ಮಾಡಬೇಕೋ? ಬೇಡವೋ ಎಂಬುದನ್ನು ನಿರ್ಧರಿಸುತ್ತಾರೆ.
(ಗಮನಿಸಿ: ಈ ಲೇಖನವು ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ)
-
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು












Click it and Unblock the Notifications