ಸಿಧು ಮೂಸೆವಾಲಾ ಹತ್ಯೆ ರೂವಾರಿ ಗೋಲ್ಡಿ ಬ್ರಾರ್ ಯುಎಸ್ನಲ್ಲಿ ಸೆರೆ, ಶೀಘ್ರದಲ್ಲೇ ಪಂಜಾಬ್ ಪೊಲೀಸ್ ಕಸ್ಟಡಿಗೆ: ಭಗವಂತ್ ಮಾನ್
ಅಹಮದಾಬಾದ್, ಡಿಸೆಂಬರ್ 02: ಪಂಜಾಬ್ ಗಾಯಕ ಸಿಧು ಮೂಸೆವಾಲಾ ಅವರ ಕ್ರೂರ ಹತ್ಯೆಯ ಹಿಂದಿನ ಮಾಸ್ಟರ್ಮೈಂಡ್, ಮೋಸ್ಟ್ ವಾಂಟೆಡ್ ಗ್ಯಾಂಗ್ಸ್ಟರ್ ಗೋಲ್ಡಿ ಬ್ರಾರ್ನನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ.
'ಆತನನ್ನು ಖಂಡಿತವಾಗಿಯೂ ಭಾರತಕ್ಕೆ ಕರೆತರಲಾಗುವುದು' ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಶುಕ್ರವಾರ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 'ಗೋಲ್ಡಿ ಬ್ರಾರ್ನನ್ನು ಅಮೆರಿಕದ ಕ್ಯಾಲಿಫೋರ್ನಿಯಾ ಪೊಲೀಸರು ಬಂಧಿಸಿದ್ದಾರೆ. ಅಮೆರಿಕ ಪೊಲೀಸರು ಭಾರತ ಸರ್ಕಾರ ಹಾಗೂ ಪಂಜಾಬ್ ಪೊಲೀಸರನ್ನು ಸಂಪರ್ಕಿಸಿದ್ದಾರೆ' ಎಂದು ಮಾನ್ ತಿಳಿಸಿದ್ದಾರೆ.
ಗೋಲ್ಡಿ ಬ್ರಾರ್ ಶೀಘ್ರದಲ್ಲೇ ಪಂಜಾಬ್ ಪೊಲೀಸರ ವಶದಲ್ಲಿ ಇರುತ್ತಾನೆ ಎಂದು ಮಾನ್ ಅಹಮದಾಬಾದ್ನಲ್ಲಿ ಹೇಳಿದ್ದಾರೆ. ಡಿಸೆಂಬರ್ 5 ರಂದು ನಡೆಯಲಿರುವ ಗುಜರಾತ್ ಚುನಾವಣೆಗೆ ಆಮ್ ಆದ್ಮಿ ಪಕ್ಷದ (ಎಎಪಿ) ಪರ ಮಾನ್ ಪ್ರಚಾರ ಮಾಡುತ್ತಿದ್ದಾರೆ.

ಬ್ರಾರ್ನನ್ನು ಖಂಡಿತವಾಗಿಯೂ ಭಾರತಕ್ಕೆ ಕರೆತರುತ್ತೇವೆ
ಬ್ರಾರ್ ಬಂಧನದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಮಾನ್, 'ನಾನು ನಿಮಗೆ ಹೇಳುತ್ತಿದ್ದೇನೆ... ಕ್ಯಾಲಿಫೋರ್ನಿಯಾ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಅವರು ಭಾರತ ಸರ್ಕಾರ ಮತ್ತು ಪಂಜಾಬ್ ಪೊಲೀಸರನ್ನು ಸಂಪರ್ಕಿಸಿ ಆತನ ಬಂಧನದ ಬಗ್ಗೆ ಮಾಹಿತಿ ನೀಡಿದ್ದಾರೆ. ಆತನನ್ನು ಗಡೀಪಾರು ಮಾಡುವ ಅಗತ್ಯವಿದೆಯೇ ಎಂದು ಅವರು ಕೇಳಿದ್ದಾರೆ' ಎಂದು ಮಾನ್ ತಿಳಿಸಿದ್ದಾರೆ.

ಗೋಲ್ಡಿ ಬ್ರಾರ್ಗೆ ಸಂಬಂಧಿಸಿದ ದಾಖಲೆಗಳು ನಮ್ಮ ಬಳಿ ಇವೆ
'ಅಮೆರಿಕದೊಂದಿಗಿನ ಒಪ್ಪಂದದ ಪ್ರಕಾರ, ನಾವು ಖಂಡಿತವಾಗಿಯೂ ಗೋಲ್ಡಿ ಬ್ರಾರ್ ಅವರನ್ನು ಭಾರತಕ್ಕೆ ಕರೆತರುತ್ತೇವೆ. ಇದರಿಂದಾಗಿ ತಮ್ಮ ಪುತ್ರರು ಮತ್ತು ಪುತ್ರಿಯರನ್ನು ಕಳೆದುಕೊಂಡ ಕುಟುಂಬಗಳಿಗೆ ಸ್ವಲ್ಪ ಸಮಾಧಾನ ಆಗುತ್ತದೆ. ಸಿಧು ಮೂಸೆವಾಲಾ ಹತ್ಯೆಯಲ್ಲಿ ಗೋಲ್ಡಿ ಬ್ರಾರ್ ಮುಖ್ಯ ಮಾಸ್ಟರ್ ಮೈಂಡ್. ಆತನಿಗೆ ಸಂಬಂಧಿಸಿದ ದಾಖಲೆಗಳು ನಮ್ಮ ಬಳಿ ಇವೆ,' ಎಂದು ಮಾನ್ ಹೇಳಿದ್ದಾರೆ.
ಪಾಕಿಸ್ತಾನದ ಮೂಲಕ ಗ್ಯಾಂಗ್ ಬಳಸಿ ತನ್ನ ಅಪರಾಧಗಳನ್ನು ಬ್ರಾರ್ ಎಸಗುತ್ತಿದ್ದನೆಂದು ಮಾನ್ ಹೇಳಿದ್ದಾರೆ.
ಆತನನ್ನು ಕರೆತರಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಯಾವ ಸಮಸ್ಯೆಗಳು ಎದುರಾಗಬಹುದೆಂದು ನಾವು ಚರ್ಚೆ ನಡೆಸುತ್ತಿದ್ದೇವೆ. ಆತನನ್ನು ವಿಚಾರಣೆಗೊಳಪಡಿಸಲಾಗುವುದು ಮತ್ತು ಹೆಚ್ಚಿನ ಮಾಹಿತಿ ಬಹಿರಂಗವಾಗಬಹುದು. ಗೋಲ್ಡಿ ಬ್ರಾರ್ ಶೀಘ್ರದಲ್ಲೇ ಪಂಜಾಬ್ ಪೊಲೀಸರ ವಶದಲ್ಲಿ ಇರಲಿದ್ದಾರೆ' ಎಂದು ಮಾನ್ ಹೇಳಿದ್ದಾರೆ.

ಸಿಧು ಮೂಸೆವಾಲಾ ಹತ್ಯೆಯ ಹೊಣೆ ಹೊತ್ತುಕೊಂಡಿದ್ದ ಗೋಲ್ಡಿ ಬ್ರಾರ್
ಈ ವರ್ಷ ಮೇ 29 ರಂದು ಪಂಜಾಬಿನ ಮಾನ್ಸಾ ಜಿಲ್ಲೆಯಲ್ಲಿ ಸಿಧು ಮೂಸೆವಾಲಾ ಎಂದು ಜನಪ್ರಿಯರಾಗಿದ್ದ ಪಂಜಾಬಿ ಗಾಯಕ ಶುಭದೀಪ್ ಸಿಂಗ್ ಸಿಧು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಸದಸ್ಯ ಬ್ರಾರ್ ಕೊಲೆಯ ಹೊಣೆಯನ್ನು ಹೊತ್ತುಕೊಂಡಿದ್ದ.
ವಿದೇಶಕ್ಕೆ ಪರಾರಿಯಾಗಿರುವ ವ್ಯಕ್ತಿಯ ಬಂಧನ ಮತ್ತು ಬಂಧನಕ್ಕೆ ಅವಕಾಶ ನೀಡುವ ರೆಡ್ ಕಾರ್ನರ್ ನೋಟಿಸ್ ಅನ್ನು ಬ್ರಾರ್ ವಿರುದ್ಧ ಹೊರಡಿಸಲಾಗಿದೆ.

2017 ರಲ್ಲಿ ಕೆನಡಾಗೆ ತೆರಳಿದ್ದ ಗೋಲ್ಡಿ ಬ್ರಾರ್
ಪಂಜಾಬ್ನ ಮುಕ್ತಸರ್ ಜಿಲ್ಲೆಯ ಮೂಲದ ಸತೀಂದರ್ಜೀತ್ ಸಿಂಗ್, ಅಲಿಯಾಸ್ ಗೋಲ್ಡಿ ಬ್ರಾರ್, 2017 ರಲ್ಲಿ ವಿದ್ಯಾರ್ಥಿ ವೀಸಾದಲ್ಲಿ ಕೆನಡಾಕ್ಕೆ ತೆರಳಿದ್ದ. ಈತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಸಕ್ರಿಯ ಸದಸ್ಯನೆಂದು ತಿಳಿದುಬಂದಿದೆ.
ನವೆಂಬರ್ 10 ರಂದು ಫರೀದ್ಕೋಟ್ ಜಿಲ್ಲೆಯ ಕೊಟ್ಕಾಪುರದಲ್ಲಿ ನಡೆದ ಡೇರಾ ಸಚ್ಚಾ ಸೌದಾ ಅನುಯಾಯಿ ಪರ್ದೀಪ್ ಸಿಂಗ್ ಹತ್ಯೆಯ ಪ್ರಮುಖ ಸಂಚುಕೋರ ಗೋಲ್ಡಿ ಬ್ರಾರ್ ಎಂದು ಹೇಳಲಾಗುತ್ತಿದೆ. ಈ ವರ್ಷದ ಮೇ ತಿಂಗಳಲ್ಲಿ ನಡೆದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಹೊಂದಿನ ಮಾಸ್ಟರ್ ಮೈಂಡ್ ಸಹ ಗೋಲ್ಡಿ ಬ್ರಾರ್ ಎಂದು ಖಚಿತವಾಗಿದೆ. ಮೂಸೆವಾಲಾ ಹತ್ಯೆಯ ಹೊಣೆಯನ್ನು ಸ್ವತಃ ಗೋಲ್ಡಿ ಬ್ರಾರ್ ಹೊತ್ತುಕೊಂಡಿದ್ದಾರೆ. ಆತ ನಟೋರಿಯಸ್ ಗ್ಯಾಂಗ್ಸ್ಟರ್ ಆಗಿದ್ದು, ಪಂಜಾಬ್ ಪೊಲೀಸರು ಆತನಿಗಾಗಿ ಶೋಧ ನಡೆಸುತ್ತಿದ್ದರು.












Click it and Unblock the Notifications