ಲಾಲು ಸಂಗವನ್ನು ಕೈಬಿಡಲು ನಿತೀಶ್ ಕುಮಾರ್ ನಿರ್ಧಾರ?
ಲಾಲು ಪ್ರಸಾದ್ ಯಾದವ್ ಕುಟುಂಬದ ಮೇಲೆ ಭ್ರಷ್ಟಾಚಾರದ ದಾಳಿ ಹಿನ್ನೆಲೆ. ಬಿಹಾರದಲ್ಲಿ ಲಾಲು ಪ್ರಸಾದ್ ಯಾದವ್ ಅವರ ಜತೆಗಿನ ಸ್ನೇಹಕ್ಕೆ ಇತಿಶ್ರೀ ಹಾಡಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಚಿಂತನೆ.
ಪಾಟ್ನಾ, ಜುಲೈ 8: ಮಾಜಿ ರೈಲ್ವೇ ಸಚಿವ ಲಾಲು ಪ್ರಸಾದ್ ಯಾದವ್ ಹಾಗೂ ಆಪ್ತರ ನಿವಾಸಗಳ ಮೇಲೆ ಶನಿವಾರ ನಡೆದ ಕೇಂದ್ರೀಯ ತನಿಖಾ ದಳ (ಸಿಬಿಐ) ದಾಳಿ ಹಾಗೂ ಲಾಲು ಪ್ರಸಾದ್ ಅವರ ಪುತ್ರಿ ಮಿಸಾ ಭಾರತಿ ಅವರ ಮೇಲೆ ಅಕ್ರಮ ಆಸ್ತಿ ಪ್ರಕರಣದ ಹಿನ್ನೆಲೆಯಲ್ಲಿ ಶನಿವಾರವೇ ನಡೆದ ಜಾರಿ ನಿರ್ದೇಶನಾಲಯದ ದಾಳಿಗಳ ಬೆನ್ನಲ್ಲೇ ತರಹೇವಾರಿ ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ನಿರಂತರವಾಗಿ ಲಾಲು, ಅವರ ಕುಟುಂಬ ಸದಸ್ಯರು ಹಾಗೂ ಅವರ ಆಪ್ತರು ಭ್ರಷ್ಟಾಚಾರದ ಆರೋಪಗಳಲ್ಲಿ ಸಿಲುಕಿ ಹಾಕಿಕೊಳ್ಳುತ್ತಿರುವುದನ್ನು ಗಂಭೀರವಾಗಿ ತೆಗೆದುಕೊಂಡಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಬಿಹಾರದಲ್ಲಿ ತಮ್ಮ ಸರ್ಕಾರಕ್ಕೆ ಬೆಂಬಲ ನೀಡಿರುವ ಲಾಲು ಪ್ರಸಾದ್ ಅವರ ಸ್ನೇಹ ತ್ಯಜಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆಂದು ಹೇಳಲಾಗಿದೆ.
ಲಾಲು ಪ್ರಸಾದ್ ಅವರ ಪಕ್ಷವಾದ ರಾಷ್ಟ್ರೀಯ ಜನತಾ ದಳವನ್ನು (ಆರ್ ಜೆಡಿ) ನಿತೀಶ್ ಹೊರಗಿಟ್ಟರೆ, ಅವರ ಸರ್ಕಾರಕ್ಕೆ ಯಾರು ಬೆಂಬಲ ನೀಡುತ್ತಾರೆ? ನಿತೀಶ್ ಅವರ ಮುಂದಿನ ಯೋಜನೆಗಳೇನು ಎಂಬುದರ ಸಂಕ್ಷಿಪ್ತ ವಿವರಣೆ ಇಲ್ಲಿದೆ.

ಬಹುಮತಕ್ಕೆ ಬೇಕು 122 ಸ್ಥಾನಗಳು
ಪ್ರಸ್ತುತ ಬಿಹಾರ ವಿಧಾನಸಭೆಯಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷ 71 ಸೀಟುಗಳನ್ನು ಪಡೆದಿದ್ದರೆ, ಲಾಲು ಪ್ರಸಾದ್ ಅವರ ಪಕ್ಷ 80 ಸ್ಥಾನಗಳನ್ನು ಗೆದ್ದುಕೊಂಡಿದೆ. ಅಲ್ಲಿ ಒಟ್ಟು ಸ್ಥಾನಗಳ ಸಂಖ್ಯೆ 243 ಇದ್ದು, ಸರ್ಕಾರ ರಚಿಸಲು ಬೇಕಾದ ಬಹುಮತಕ್ಕೆ 122 ಸ್ಥಾನಗಳು ಬೇಕಿವೆ.

ಆರ್ ಜೆಡಿ ಕೈಬಿಟ್ಟರೆ ಸರ್ಕಾರ ಪತನ ಗ್ಯಾರಂಟಿ!
ಅಲ್ಲಿ ಸದ್ಯಕ್ಕೆ ಆರ್ ಜೆಡಿ ಹಾಗೂ ಜೆಡಿಯು ಸೇರಿ 151 ಸ್ಥಾನಗಳ ಲೆಕ್ಕದೊಂದಿಗೆ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸಿವೆ. ಆದರೆ, ಈಗ ನಿತೀಶ್ ಅವರು ಲಾಲು ಪ್ರಸಾದ್ ಅವರ ಪಕ್ಷದೊಂದಿಗಿನ ದೋಸ್ತಿ ಕಳಚಿಕೊಂಡರೆ ಅವರ ಸರ್ಕಾರ ಪತನವಾಗುವುದಂತೂ ನಿಶ್ಚಿತ.

ಬಿಜೆಪಿಯಿಂದ ಬೆಂಬಲ ಸಿಗುವ ಸಾಧ್ಯತೆ
ಆದರೆ, ಲಾಲು ಅವರ ಸಖ್ಯ ಕಳೆದುಕೊಂಡರೂ ನಿತೀಶ್ ಅವರಿಗೆ ಸರ್ಕಾರ ಪತನವಾಗುವ ಭೀತಿಯಿಲ್ಲ. ಲಾಲು ಪಕ್ಷವನ್ನು ಹೊರಗಿಟ್ಟರೆ ಅವರಿಗೆ ಬಿಜೆಪಿಯಿಂದ ಬೆಂಬಲ ಸಿಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಬಿಜೆಪಿ ಬೆಂಬಲ ಸಿಕ್ಕರೆ ಸರ್ಕಾರ ಸೇಫ್!
ಬಿಹಾರ ವಿಧಾನಸಭೆಯಲ್ಲಿ ಬಿಜೆಪಿಯು 53 ಸ್ಥಾನಗಳನ್ನು ಪಡೆದಿದೆ. ಈ ಎರಡೂ ಸೇರಿದರೆ ಒಟ್ಟು 124 ಸ್ಥಾನಗಳಾಗುತ್ತವೆ. ಬಹುಮತ ಸಾಬೀತುಪಡಿಸಲು ಬೇಕಾದ 122 ಸ್ಥಾನಗಳಿಗಿಂತ ಸುಮಾರು 2 ಸ್ಥಾನ ಹೆಚ್ಚೇ ಆಗುತ್ತದೆ. ಆದ್ದರಿಂದ ಬಿಜೆಪಿ ಬೆಂಬಲ ಸಿಗುವುದಾದರೆ ನಿತೀಶ್ ಸರ್ಕಾರ ಉಳಿಯುತ್ತದೆ.

ನಿತೀಶ್ ಮನವೊಲಿಕೆಯಲ್ಲಿ ಸೋತಿದ್ದ ಲಾಲು
ಇತ್ತೀಚೆಗೆ, ಬಿಜೆಪಿ ನೇತೃತ್ವದ ಎನ್ ಡಿಎ, ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿಯನ್ನು ಕಣಕ್ಕಿಳಿಸಿದಾಗಲೇ ನಿತೀಶ್ ಕುಮಾರ್ ಅವರು ಎನ್ ಡಿಎ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ಅವರಿಗೆ ಬೆಂಬಲ ಸೂಚಿಸಿದ್ದರು. ಅತ್ತ ಕಾಂಗ್ರೆಸ್ ನೇತೃತ್ವದ ಯುಪಿಎ, ಬಿಹಾರ ಮೂಲದವರೇ ಆದ ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರನ್ನು ಕಣಕ್ಕಿಳಿಸಿತ್ತು. ಮೀರಾ ಬೆಂಬಲಿಸುವುದು ಲಾಲು ಅವರ ಅಪೇಕ್ಷೆಯಾಗಿತ್ತು. ಆಗಲೇ ಅವರು ನಿತೀಶ್ ಮನವೊಲಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿರಲಿಲ್ಲ. ಆಗಲೇ ಅವರಿಬ್ಬರ ದಾರಿ ಕವಲಾಗಿತ್ತೆಂದೂ ಹೇಳಲಾಗುತ್ತಿದೆ.












Click it and Unblock the Notifications