ನೋಟ್ ಬ್ಯಾನ್ ಬೆನ್ನಲ್ಲೇ ಕೇಂದ್ರದ ಮತ್ತೊಂದು ಮಹತ್ವದ ಆದೇಶ
ಕಪ್ಪುಹಣ ತಡೆಗಟ್ಟುವ ನಿಟ್ಟಿನಲ್ಲಿ ಮತ್ತೊಂದು ಕಠಿಣ ನಿಲುವು ತಳೆದಿರುವ ಕೇಂದ್ರ ಸರಕಾರ, ಅಕೌಂಟಿಗೆ 2.5 ಲಕ್ಷ ರೂಪಾಯಿಗಿಂತ ಅಧಿಕ ಹಣ ಠೇವಣಿಯಾದರೆ ಅದರ ಮೇಲೆ ಆದಾಯ ತೆರಿಗೆ ವಿಧಿಸುವ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿದೆ.
ನವದೆಹಲಿ, ನ 10: ಐನೂರು ಮತ್ತು ಸಾವಿರ ಮುಖಬೆಲೆಯ ನೋಟನ್ನು ನಿಷೇಧಿಸಿ ಕ್ರಾಂತಿಕಾರಿ ನಿರ್ಧಾರ ತೆಗೆದುಕೊಂಡ ನರೇಂದ್ರ ಮೋದಿ ಸರಕಾರ ಮತ್ತೊಂದು ಮಹತ್ವದ ಆದೇಶವನ್ನು ಬುಧವಾರ (ನ 9) ರಾತ್ರಿ ಹೊರಡಿಸಿದೆ.
ಕಪ್ಪುಹಣ ತಡೆಗಟ್ಟುವ ನಿಟ್ಟಿನಲ್ಲಿ ಮತ್ತೊಂದು ಕಠಿಣ ನಿಲುವು ತಳೆದಿರುವ ಕೇಂದ್ರ ಸರಕಾರ, ಅಕೌಂಟಿಗೆ 2.5 ಲಕ್ಷ ರೂಪಾಯಿಗಿಂತ ಅಧಿಕ ಹಣ ಠೇವಣಿಯಾದರೆ ಅದರ ಮೇಲೆ ಆದಾಯ ತೆರಿಗೆ ವಿಧಿಸುವ ಸಾಧ್ಯತೆ ಬಗ್ಗೆ ಎಚ್ಚರಿಕೆ ನೀಡಿದೆ. (ಬ್ಯಾಂಕುಗಳಿಗೆ ವಾರಾಂತ್ಯ ರಜೆಯಿಲ್ಲ, ನ10 ರಿಂದ ಹೊಸ ನೋಟು)
ಇದಲ್ಲದೇ ನವೆಂಬರ್ ಹತ್ತರಿಂದ ಡಿಸೆಂಬರ್ 30, 2016ರ ವರೆಗೆ ನಡೆಯುವ ವಹಿವಾಟಿನ ಬಗ್ಗೆ ಹದ್ದಿನ ಕಣ್ಣು ಇಡಲು ಎಲ್ಲಾ ವಲಯದ ಬ್ಯಾಂಕುಗಳಿಗೆ ಕೇಂದ್ರ ಹಣಕಾಸು ಸಚಿವಾಲಯ ಆದೇಶ ನೀಡಿದೆ.
ಅಕೌಂಟ್ ಹೊಂದಿರುವವರ ಆದಾಯ ಮತ್ತು ಸಲ್ಲಿಸಿದ ಐಟಿ ರಿಟರ್ನ್ ಅನ್ನು ತಾಳೇ ಹಾಕಿ ಆದಾಯ ತೆರಿಗೆ ಇಲಾಖೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ. ಒಂದು ವೇಳೆ ಈ ಅವಧಿಯಲ್ಲಿ ಜಮಾ ಆದ ಮೊತ್ತ 'ಅಕ್ರಮ' ಎಂದು ಸಾಬೀತಾದರೆ ಭಾರೀ ಪ್ರಮಾಣದ ತೆರಿಗೆ ವಿಧಿಸಲು ಕೇಂದ್ರ ಸರಕಾರ ನಿರ್ಧರಿಸಿದೆ.
ಇಂತಹ ಸಂದರ್ಭದಲ್ಲಿ ಐಟಿ ಸೆಕ್ಷನ್ 270 (ಎ) ಅಡಿಯಲ್ಲಿ ಶೇ. 200ರಷ್ಟು ತೆರಿಗೆ ವಿಧಿಸಲಾಗುವುದು ಎಂದು ಕೇಂದ್ರ ಸರಕಾರ ತನ್ನ ಬುಧವಾರದ ಪ್ರಕಟಣೆಯಲ್ಲಿ ತಿಳಿಸಿದೆ. ಬುಧವಾರದ ಪ್ರಕಟಣೆಯ ಕೆಲವೊಂದು ಪ್ರಮುಖಾಂಶಗಳನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಚಿನ್ನ ಬೆಳ್ಳಿ ಖರೀದಿ
ಭಾರೀ ಪ್ರಮಾಣದಲ್ಲಿ ಚಿನ್ನ ಬೆಳ್ಳಿ ಖರೀದಿಸುವವರು ಪ್ಯಾನ್ (PAN) ನಂಬರ್ ನೀಡುವುದು ಖಡ್ಡಾಯ. ಒಂದು ವೇಳೆ ಚಿನ್ನದಂಗಡಿಯವರು ಪ್ಯಾನ್ ನಂಬರ್ ನೀಡದೇ ವ್ಯವಹಾರ ನಡೆಸಿದರೆ ಅಂಗಡಿ ಮಾಲೀಕರ ವಿರುದ್ದ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ಸರಕಾರ ಎಚ್ಚರಿಕೆ ನೀಡಿದೆ.

ಎರಡುವರೆ ಲಕ್ಷಕ್ಕಿಂತ ಮೇಲೆ
ಎರಡುವರೆ ಲಕ್ಷಕ್ಕಿಂತ ಮೇಲೆ ನಡೆಯುವ ಬ್ಯಾಂಕ್ ವ್ಯವಹಾರದ ಮೇಲೆ ಮಾತ್ರ ಕೇಂದ್ರ ಸರಕಾರ ಟ್ಯಾಕ್ಸ್ ವಿಧಿಸಲು ಮುಂದಾಗಿದೆ. ಹಾಗಾಗಿ, ಇದಕ್ಕಿಂತ ಕಮ್ಮಿಯ ಹಣದ ವ್ಯವಹಾರದ ಬಗ್ಗೆ ಸಾರ್ವಜನಿಕರು ಗೊಂದಲ ಮತ್ತು ಭಯ ಪಡಬೇಕಾಗಿಲ್ಲ - ಕೇಂದ್ರ ಸರಕಾರ.

ಆನ್ಲೈನ್ ಬ್ಯಾಂಕಿಂಗ್
ಇಂಟರ್ನೆಟ್ ಬ್ಯಾಂಕಿಂಗ್, ಇಸಿಎಸ್, ಆಲ್ ಲೈನ್ ಬ್ಯಾಂಕಿಂಗ್ ಅಥವಾ ಶಾಪ್ಪಿಂಗ್ ಮೇಲೆ ಯಾವುದೇ ನಿರ್ಬಂಧ ಹೇರಲಾಗಿಲ್ಲ. ಡಿಸೆಂಬರ್ 30ರ ವರೆಗೆ ಹಳೇ ನೋಟನ್ನು ಹಿಂದಿರುಗಿಸಲು ಆಗದೇ ಇದ್ದಲ್ಲಿ, ಸೂಕ್ತ ವಿವರ, ಅಫಿಡವಿಟ್ ಮತ್ತು ಗುರುತಿನ ಚೀಟಿಯೊಂದಿಗೆ 31.03.17ರೊಳಗೆ ಹಿಂದಿರುಗಿಸಲು ಅವಕಾಶವಿದೆ ಎಂದು ಮತ್ತೆ ಕೇಂದ್ರ ಸರಕಾರ ತಿಳಿಸಿದೆ.

ವದಂತಿಗೆ ಕಿವಿಗೊಡಬೇಡಿ
ಯಾವುದೇ ರೀತಿಯ ವದಂತಿಗೆ ಸಾರ್ವಜನಿಕರು ಕಿವಿಗೊಡಬಾರದು. ಸಾರ್ವಜನಿಕರಲ್ಲಿ ಯಾವುದೇ ಗೊಂದಲವಿದ್ದರೆ ಬ್ಯಾಂಕ್ ಅಥವಾ ಅಂಚೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ. ನಿಮ್ಮ ದುಡ್ಡು ನಿಮ್ಮದಾಗಿಯೇ ಇರುತ್ತದೆ - ಕೇಂದ್ರ ಸರಕಾರ.

ಹಣಕಾಸು ಸಚಿವಾಲಯದ ಸ್ಪಷ್ಟನೆ
ಹೊಸ ನೋಟುಗಳ ಪೂರೈಕೆ ಆಗಬೇಕಿರುವುದರಿಂದ ಮತ್ತು ಗ್ರಾಹಕರಿಗೆ ನೋಟು ವಿತರಣೆಯಲ್ಲಿ ವ್ಯತ್ಯಯ ಆಗಬಾರದು ಎನ್ನುವ ನಿಟ್ಟಿನಲ್ಲಿ, ಒಂದು ದಿನಕ್ಕೆ 10 ಸಾವಿರ, ವಾರಕ್ಕೆ 20 ಸಾವಿರ ರೂಪಾಯಿ ಪಡೆಯುವುದಕ್ಕೆ ಮಿತಿಗೊಳಿಸಲಾಗಿದೆ.ಈ ಮಿತಿಯನ್ನು ಮುಂದಿನ ದಿನಗಳಲ್ಲಿ ಹಿಂದಕ್ಕೆ ಪಡೆಯಲಾಗುವುದು.












Click it and Unblock the Notifications