ಉತ್ತರ ಭಾರತದಲ್ಲಿ ದಟ್ಟವಾದ ಮಂಜು: 100 ವಿಮಾನಗಳು ಸ್ಥಗಿತ
ನವದೆಹಲಿ ಡಿಸೆಂಬರ್ 28: ದೆಹಲಿಯಲ್ಲಿ ಬುಧವಾರ ಮತ್ತೆ ದಟ್ಟವಾದ ಮಂಜು ಕವಿದಿದ್ದು, ತೀವ್ರ ಚಳಿಯ ವಾತಾವರಣ ಮುಂದುವರಿದಿದೆ. ಇದರಿಂದಾಗಿ ದೆಹಲಿಯೊಂದರಲ್ಲೇ 100 ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. "ಮೂರು ದಿನಗಳ ಕೆಟ್ಟ ಹವಾಮಾನದಿಂದಾಗಿ (ಮಂಜು) ದೆಹಲಿ ವಿಮಾನ ನಿಲ್ದಾಣದಿಂದ 100 ಕ್ಕೂ ಹೆಚ್ಚು ವಿಮಾನಗಳು ವಿಳಂಬವಾಗಿವೆ ಎಂದು ವರದಿಯಾಗಿದೆ. ಕೆಲವನ್ನು ಹತ್ತಿರದ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಗಿದೆ" ಎಂದು ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ಎಎನ್ಐಗೆ ತಿಳಿಸಿದ್ದಾರೆ.
ಬಿಡುವಿಲ್ಲದ ವರ್ಷಾಂತ್ಯದ ರಜೆಯ ನಡುವೆ ದೆಹಲಿಯ ವಿಮಾನ ನಿಲ್ದಾಣದಲ್ಲಿ ದಟ್ಟಣೆಯನ್ನು ನಿಭಾಯಿಸುತ್ತಿದ್ದರೂ ಸಹ, ಉತ್ತರ ಭಾರತದ ಹೆಚ್ಚಿನ ಭಾಗಗಳನ್ನು ಆವರಿಸಿರುವ ದಟ್ಟವಾದ ಮಂಜಿನಿಂದಾಗಿ ವಿಮಾನ ಪ್ರಯಾಣಿಕರ ಸಮಸ್ಯೆಗಳು ಹೆಚ್ಚಾಗಿವೆ.
ಕಳೆದ ಕೆಲವು ದಿನಗಳಿಂದ ದೇಶದ ಉತ್ತರ ಭಾಗಗಳ ಮೇಲೆ ಪರಿಣಾಮ ಬೀರುತ್ತಿರುವ ಕಳಪೆ ಗೋಚರತೆ, ಬುಧವಾರ ಮತ್ತೊಮ್ಮೆ ವಿಮಾನ ಸಂಚಾರವನ್ನು ಅಡ್ಡಿಪಡಿಸಿತು. ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಯ ಪ್ರಕಾರ, ಕೆಲವು ವಿಮಾನಯಾನ ಸಂಸ್ಥೆಗಳು ತುರ್ತಾಗಿ ತಮ್ಮ ಪೈಲಟ್ಗಳನ್ನು ನಿಯೋಜಿಸದಿರುವುದು ವಿಮಾನಗಳ ವಿಳಂಬಕ್ಕೆ ಮತ್ತೊಂದು ಕಾರಣವಾಗಿದೆ.
ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಗಳು, ಫ್ಲೈಟ್ ಸ್ಥಿತಿಯನ್ನು ಪರಿಶೀಲಿಸಲು ದೆಹಲಿ ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (DIAL) ಮಂಗಳವಾರ ಪ್ರಯಾಣಿಕರಿಗೆ ಸಲಹೆ ನೀಡಿದೆ.
"ದೆಹಲಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮತ್ತು ಟೇಕ್-ಆಫ್ಗಳಿಗೆ ಗೋಚರತೆ ಮುಖ್ಯವಾಗಿದೆ. ಇದು ವಿಮಾನಗಳ ಹಾರಾಟದ ಮೇಲೆ ಪರಿಣಾಮ ಬೀರಬಹುದು" ಎಂದು DIAL ಹೇಳಿದೆ. CAT-III ಇನ್ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ (ILS) ಕಡಿಮೆ ಗೋಚರತೆಯಲ್ಲಿ ವಿಮಾನಗಳು ಸುರಕ್ಷಿತವಾಗಿ ಇಳಿಯಲು ಅನುಮತಿಸುತ್ತದೆ.
ದೆಹಲಿ ವಿಮಾನ ನಿಲ್ದಾಣದಲ್ಲಿ ಫ್ಲೈಟ್ ಇನ್ಫರ್ಮೇಷನ್ ಡಿಸ್ಪ್ಲೇ ಸಿಸ್ಟಮ್ (FIDS) ಪ್ರಕಾರ 18 ವಿಮಾನಗಳು ತೀವ್ರವಾದ ಕಡಿಮೆ ಗೋಚರತೆಯಿಂದಾಗಿ 12:00 ಗಂಟೆಗಳವರೆಗೆ ವಿಳಂಬವಾಗಿದೆ. ದಟ್ಟವಾದ ಮಂಜು ಗೋಚರತೆಯನ್ನು ಕಡಿಮೆಗೊಳಿಸಿದ್ದರಿಂದ ಮಂಗಳವಾರ ಸುಮಾರು ಆರು ಗಂಟೆಗಳ ಕಾಲ ಪಶ್ಚಿಮ ಬಂಗಾಳದ ಬಾಗ್ಡೋಗ್ರಾ ವಿಮಾನ ನಿಲ್ದಾಣದಲ್ಲಿ ವಿಮಾನ ಸೇವೆಗಳ ಮೇಲೆ ಪರಿಣಾಮ ಬೀರಿತು. ಈ ಅಡಚಣೆಯು ನೂರಾರು ಪ್ರಯಾಣಿಕರಿಗೆ ಅನಾನುಕೂಲವನ್ನು ಉಂಟುಮಾಡಿತು. ಮಂಗಳವಾರ ವಿಸ್ತಾರಾ, ಸ್ಪೈಸ್ಜೆಟ್, ಇಂಡಿಗೋ ವಿಳಂಬ ಮತ್ತು ತಿರುವುಗಳಿಗೆ ವಿಷಾದ ವ್ಯಕ್ತಪಡಿಸಿವೆ.
"ದೆಹಲಿಯಲ್ಲಿ ಬೆಳಗಿನ ಜಾವದ ಮಂಜು ನೆಟ್ವರ್ಕ್ನಾದ್ಯಂತ ಭಾರಿ ವಿಳಂಬವನ್ನು ಉಂಟುಮಾಡಿದೆ. ಉಂಟಾದ ಅನಾನುಕೂಲತೆಯನ್ನು ಕಡಿಮೆ ಮಾಡಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ.." ಎಂದು ಇಂಡಿಗೋ ಮಂಗಳವಾರ ಹೇಳಿದೆ.