ಅಪನಗದೀಕರಣ ಒಂದು 'ಮನಿ ಲಾಂಡರಿಂಗ್' ಯೋಜನೆ : ರಾಹುಲ್ ಗಾಂಧಿ
ಅಮ್ರೇಲಿ, ನವೆಂಬರ್ 30: ಅಪನಗದೀಕರಣ ಒಂದು ಮನಿ ಲಾಂಡರಿಂಗ್ ಯೋಜನೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಗುಜರಾತ್ ನ ಅಮ್ರೇಲಿಯಲ್ಲಿ ಇಂದು ಕಾಂಗ್ರೆಸ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಎನ್ಡಿಎ ಸರಕಾರ ಅಧಿಕಾರಕ್ಕೆ ಬಂದ ನಂತರ ಅಮಿತ್ ಶಾ ಪುತ್ರ ಜಯ್ ಶಾ ಕಂಪನಿಯ ವ್ಯವಹಾರದಲ್ಲಿ ಭಾರೀ ಏರಿಕೆಯಾಗಿದೆ ಎಂದು ಹೇಳಿದರು.

"ಅಪನಗದೀಕರಣನ್ನು ತಕ್ಷಣ ಜಾರಿಗೆ ತರಲಾಯಿತು. ಬಹುಶಃ ಅವರಿಗೆ ರೂ. 500 ಮತ್ತು ರೂ. 1000 ನೊಟುಗಳು ಇಷ್ಟವಿರಲಿಲ್ಲ ಎಂದು ಕಾಣಿಸುತ್ತದೆ. ನವೆಂಬರ್ 8ರಂದು ಇಡೀ ದೇಶವೇ ಸಾಲು ನಿಂತಿತ್ತು. ಯಾರಾದರೂ ಗುಜರಾತಿನ ದೊಡ್ಡ ಉದ್ಯಮಗಳು ಬ್ಯಾಂಕಿನ ಮುಂದೆ ಸಾಲುಗಟ್ಟಿ ನಿಂತಿದ್ದನ್ನು ನೀವು ನೋಡಿದ್ದೀರಾ? ಮರ್ಸಿಡೆಸ್ ಕಾರಿನಲ್ಲಿ ಬಂದ ಯಾರಾದರೂ ಸಾಲು ನಿಂತಿದ್ದು ನೋಡಿದ್ದೀರಾ?," ಎಂದು ಪ್ರಶ್ನಿಸಿದ್ದಾರೆ.
"ಯಾರೆಲ್ಲಾ ಮರ್ಸಿಡೆಸ್ ಕಾರು ಚಲಾಯಿಸುತ್ತಾರೋ ಅವರೆಲ್ಲಾ ಬ್ಯಾಂಕಿಗೆ ಹಿಂಬದಿ ಬಾಗಿಲಿನಿಂದ ನುಗ್ಗಿ ಅವರ ಕಪ್ಪು ಹಣವನ್ನು ಬದಲಾವಣೆ ಮಾಡಿಕೊಂಡಿದ್ದಾರೆ," ಎಂದು ಕಿಡಿಕಾರಿದರು.
ಮುಂದುವರಿದು ಮಾತನಾಡಿದ ರಾಹುಲ್ ಗಾಂಧಿ, "ಇದು ಅಪನಗದೀಕರಣದ ಸತ್ಯಾಂಶ. ಕಳ್ಳರು ತಮ್ಮ ಕಪ್ಪು ಹಣವನ್ನು ಬದಲಾವಣೆ ಮಾಡಿಕೊಂಡರು. ಆದರೆ ನೀವು ಮಾತ್ರ ಸಾಲಿನಲ್ಲಿ ನಿಂತೇ ಇದ್ದಿರಿ," ಎಂದು ಹೇಳಿದರು.
ಇದೇ ವೇಳೆ ಅಮಿತ್ ಶಾ ಪುತ್ರ ಜಯ್ ಶಾ ಮೇಲೆ ಹರಿಹಾಯ್ದ ರಾಹುಲ್ ಗಾಂಧಿ, "ಮಾಯಾಜಾಲದಿಂದ ಮೂರು ತಿಂಗಳಲ್ಲಿ ಅಮಿತ್ ಶಾ ಪುತ್ರ ಜಯ್ ಶಾ ರೂ. 50,000 ದಿಂದ ರೂ. 80 ಕೋಟಿಗೆ ತಮ್ಮ ವ್ಯವಹಾರವನ್ನು ವಿಸ್ತರಿಸಿಕೊಂಡರು. ಎಲ್ಲರೂ ಲಾಭಕರ ಉದ್ಯಮ ನಡೆಸಿದ ನಂತರ ಕಂಪೆನಿಯನ್ನು ಮುಂದುವರಿಸುತ್ತಾರೆ. ಆದರೆ ಮೂರು ತಿಂಗಳ ನಂತರ ಕಂಪನಿಯನ್ನು ಮುಚ್ಚಲಾಯಿತು," ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುಜರಾತ್ ಚುನಾವಣೆಗೂ ಮೊದಲು ಸಂಸತ್ ಚಳಿಗಾಲದ ಅಧಿವೇಶನ ಆರಂಭಿಸಲು ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಧೈರ್ಯವಿಲ್ಲ. ರಾಫೆಲ್ ಡೀಲ್, ಜಯ್ ಶಾ ವಿಷಯಗಳನ್ನು ಎದುರಿಸಲು ಕೇಂದ್ರ ಸರಕಾರ ಸಿದ್ಧವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.












Click it and Unblock the Notifications