ಜಿಎಸ್ಟಿ ಮತ್ತು ಅಪನಗದೀಕರಣದಿಂದ ಜಿಡಿಪಿಗೆ ಹೊಡೆತ – ಮನಮೋಹನ್ ಸಿಂಗ್
ನವದೆಹಲಿ, ಸೆಪ್ಟೆಂಬರ್ 19: ಅವಸರದ ಜಿಎಸ್ಟಿ ಅನುಷ್ಠಾನ ಮತ್ತು ಅಪನಗದೀಕರಣ ಜಿಡಿಪಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಮಾಜಿ ಪ್ರಧಾನಿ, ಹಿರಿಯ ಆರ್ಥಿಕ ತಜ್ಞ ಮನ್ ಮೋಹನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
CNBC-TV 18ಕ್ಕೆ ಸಂದರ್ಶನ ನೀಡಿದ ಮನ್ ಮೋಹನ್ ಸಿಂಗ್, "ಅಪನಗದೀಕರಣ ಮತ್ತು ಜಿಎಸ್ಟಿ ಜಿಡಿಪಿ ಬೆಳವಣಿಗೆ ಮೇಲೆ ಪರಿಣಾಮ ಬೀರಿದೆ. ಅಪನಗದೀಕರಣ ಮತ್ತು ಜಿಎಸ್ಟಿಯು ಅಸಂಘಟಿತ ವಲಯ, ಸಣ್ಣ ಉದ್ಯಮಗಳ ಮೇಲೆ ಋಣಾತ್ಮಕ ಪರಿಣಾಮ ಬೀರಿದೆ. ಈ ಎರಡೂ ವಲಯಗಳು ಜಿಡಿಪಿಗೆ ಶೇ. 40 ರಷ್ಟು ಕೊಡುಗೆ ನೀಡುವುದರಿಂದ, ಜಿಡಿಪಿಯಲ್ಲಿ ಕುಸಿತವಾಗಿದೆ," ಎಂದು ವಿಶ್ಲೇಷಿಸಿದ್ದಾರೆ.

ಜಿಎಸ್ಟಿ ಮತ್ತು ಅಪನಗದೀಕರಣ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಹೇಳಿರುವ ಮನ್ ಮೋಹನ್ ಸಿಂಗ್, "ಅವಸರ ಅವಸರವಾಗಿ ಜಿಎಸ್ಪಿ ಮತ್ತು ಅಪನಗದೀಕರಣ ಜಾರಿಗೆ ತಂದಿದ್ದರಿಂದ ಹಲವು ಸಮಸ್ಯೆಗಳು ಉಂಟಾಗಿದ್ದು ಅವೆಲ್ಲಾ ಈಗ ನಿಧಾನಕ್ಕೆ ಹೊರ ಬರುತ್ತಿವೆ. ಜಿಡಿಪಿಯ ಮೇಲೆ ಇವುಗಳ ಪರಿಣಾಮ ಇನ್ನೂ ಮುಂದುವರಿಯಲಿದೆ," ಎಂದು ಹೇಳಿದ್ದಾರೆ.
ಈ ಹಿಂದೆ ಅಪನಗದೀಕರಣದ ಸಂದರ್ಭ ರಾಜ್ಯಸಭೆಯಲ್ಲಿ ಮಾತನಾಡಿದ್ದ ಮನ್ ಮೋಹನ್ ಸಿಂಗ್, ಅಪನಗದೀಕರಣ 'ಶುದ್ಧ ತಪ್ಪು ತೀರ್ಮಾನ' ಹಾಗೂ 'ಸಂಘಟಿತ ಲೂಟಿ' ಮತ್ತು 'ಕಾನೂನಾತ್ಮಕ ದರೋಡೆ' ಎಂದು ವ್ಯಾಖ್ಯಾನಿಸಿದ್ದರು.












Click it and Unblock the Notifications