2ಜಿ ಸ್ಪೆಕ್ಟ್ರಂ: ಡಿ.21ಕ್ಕೆ ಆರೋಪಿಗಳ ಅಸಲಿಯತ್ತು ಬಟಾಬಯಲು
ನವದೆಹಲಿ, ಡಿಸೆಂಬರ್ 5: ಯುಪಿಎ ಮೈತ್ರಿ ಸರ್ಕಾರದ ಅವಧಿಯಲ್ಲಿ ನಡೆದ ಬಹುಕೋಟಿ 2ಜಿ ಸ್ಪೆಕ್ಟ್ರಂ ಹಗರಣದ ಆರೋಪಿಗಳ ಅಸಲಿಯತ್ತು ಡಿಸೆಂಬರ್ 21ಕ್ಕೆ ಬಟಾಬಯಲಾಗಲಿದೆ.
2ಜಿ ಸ್ಪೆಕ್ಟ್ರಂ ಹಗರಣದ ಅಂತಿಮ ತೀರ್ಪುನ್ನು ಡಿಸೆಂಬರ್ 21ರಂದು ಪ್ರಕಟಿಸಲಾಗುವುದು ಎಂದು ಇಂದು (ಮಂಗಳವಾರ) ನವದೆಹಲಿಯ ಪಟಿಯಾಲ ವಿಶೇಷ ನ್ಯಾಯಾಲಯ ತಿಳಿಸಿದೆ. ಅಂದು ಅಂದರೆ ಡಿ.21ರಂದು 2ಜಿ ಸ್ಪೆಕ್ಟ್ರಂ ಹಗರಣದ ಎಲ್ಲಾ ಆರೋಪಿಗಳು ಖುದ್ದು ಹಾಜರಿರಬೇಕು ಎಂದು ನ್ಯಾಯಾಲಯ ಖಡಕ್ ಸೂಚನೆ ನೀಡಿದೆ.

2008 ರಲ್ಲಿ ಸುಮಾರು 1,76,000 ಕೋಟಿ ರೂ. 2ಜಿ ತರಂಗಗುಚ್ಛ ಹಗರಣ ಬೆಳಕಿಗೆ ಬಂದಿದ್ದು, ಅಂದಿನ ಯುಪಿಎ ಮೈತ್ರಿ ಸರ್ಕಾರ ಹಲವು ಟೆಲಿಕಾಂ ಕಂಪನಿಗಳಿಗೆ ಬೇಕಾಬಿಟ್ಟಿ ಲೈಸೆನ್ಸ್ ನೀಡಿದ ಆರೋಪದಿಂದಾಗಿ 2 ಜಿ ಸ್ಪೆಕ್ಟ್ರಂ ಸುದ್ದಿಯಾಗಿತ್ತು. ಇದು ಯುಪಿಎ ಸರ್ಕಾರದ ಬಹುಮುಖ್ಯ ಹಗರಣ ಎನಿಸಿಕೊಂಡಿದೆ.
2ಜಿ ಸ್ಪೆಕ್ಟ್ರಂ ಹಗರಣದ ಸಂಬಂಧ 2014 ರಲ್ಲಿ ಎ.ರಾಜಾ, ಕನ್ನಿಮೋಳಿ ಸೇರಿದಂತೆ 19 ಜನರ ವಿರುದ್ಧ ಜಾರಿ ನಿರ್ದೇಶನಾಲಯ ಚಾರ್ಜ್ ಶೀಟ್ ಸಲ್ಲಿಸಿತ್ತು. ಸರ್ಕಾರದ ಬೊಕ್ಕಸಕ್ಕೆ ಬಹುಕೋಟಿ ನಷ್ಟವನ್ನುಂಟುಮಾಡಿದ ಈ ಹಗರಣದ ಅಂತಿಮ ತೀರ್ಪುನ್ನು ಡಿಸೆಂಬರ್ 21ಕ್ಕೆ ನವದೆಹಲಿಯ ಪಟಿಯಾಲ ವಿಶೇಷ ನ್ಯಾಯಾಲಯ ಘೋಷಿಸಲಿದೆ.












Click it and Unblock the Notifications