ದೆಹಲಿ ಮೇಯರ್ ಚುನಾವಣೆ: ದೆಹಲಿಯ ಬೀದಿಗಳಲ್ಲಿ ಆಪ್, ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
ನವದೆಹಲಿ, ಜ. 09: ದೆಹಲಿಯ ಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷದ ನಡುವೆ ನಡೆಯುತ್ತಿರುವ ಗಲಾಟೆ ನಿಲ್ಲುವ ಸೂಚನೆಗಳೆ ಕಾಣುತ್ತಿಲ್ಲ. ಕಳೆದೆರಡು ದಿನಗಳ ಹಿಂದೆ ಆಪ್ ಮತ್ತು ಬಿಜೆಪಿಯ ನೂತನ ಕೌನ್ಸಿಲರ್ಗಳ ಪರಸ್ಪರ ಬಡಿದಾಡಿಕೊಂಡಿದ್ದ ಘಟನೆ ನಡೆದಿತ್ತು.
ಅಂದು ನಾಲ್ಕು ಗೋಡೆಗಳ ನಡುವೆ ನೂತನ ಕೌನ್ಸಿಲರ್ಗಳು ಬಡಿದಾಡಿಕೊಂಡಿದ್ದರೇ, ಈಗ ಈ ಜಗಳ ದೆಹಲಿಯ ಬೀದಿಗಳಿಗೆ ಬಂದಿದೆ. ರಾಷ್ಟ್ರ ರಾಜಧಾನಿಯ ಬೀದಿಗಳಲ್ಲಿ ಎರಡೂ ಪಕ್ಷಗಳು ಪರಸ್ಪರರ ವಿರುದ್ಧ ಘೊಷಣೆಗಳನ್ನು ಕೂಗುತ್ತಾ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಿವೆ.
ಎಎಪಿ ಬೆಂಬಲಿಗರು ಬಿಜೆಪಿ ಪ್ರಧಾನ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದರೆ, ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿ ಮತ್ತು ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ನಿವಾಸಕ್ಕೆ ಮೆರವಣಿಗೆ ಹೋಗಿ ಅಲ್ಲಿ ಪ್ರತಿಭಟನೆ ನಡೆಸಿದರು.

ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿವಾಸದ ಎದುರು ಪ್ರತಿಭಟನೆ ನಡೆಸಲು ನೆರೆದಿದ್ದ 2,000 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ಮೇಲೆ ದೆಹಲಿ ಪೊಲೀಸರು ಜಲಫಿರಂಗಿಗಳನ್ನು ಬಳಸಿ ಚದುರಿಸಿದ್ದಾರೆ.
ದೆಹಲಿಗೆ ಹೊಸ ಮೇಯರ್ ಅನ್ನು ಆಯ್ಕೆ ಮಾಡುವ ಸಭೆಯಲ್ಲಿ ಭಾರಿ ಗಲಾಟೆ ನಡೆದ ಕೆಲವು ದಿನಗಳ ನಂತರ ಸೋಮವಾರ ಎರಡು ಪಕ್ಷಗಳು ಪ್ರತಿಭಟನೆ ಆಯೋಜಿಸಿದ್ದವು. ಮೇಯರ್ ಆಯ್ಕೆಯ ಸಭೆ ಸ್ಥಗಿತಗೊಂಡಿದ್ದರಿಂದ ಬಿಜೆಪಿ ಮತ್ತು ಎಎಪಿ ಕೌನ್ಸಿಲರ್ಗಳು ಹೊಡೆದಾಟ ಮಾಡಿಕೊಂಡಿದ್ದರು. ಮೇಯರ್ಗಾಗಿ ದೆಹಲಿಯ 10 ವರ್ಷಗಳ ಕಾಯುವಿಕೆ ಇನ್ನು ಮುಂದುವರೆಯುತ್ತಿದೆ.
ದೆಹಲಿಯ ಮುನ್ಸಿಪಲ್ ಕಾರ್ಪೋರೇಶನ್ನ ಪ್ರಧಾನ ಕಛೇರಿಯ ಸಿವಿಕ್ ಸೆಂಟರ್ನಲ್ಲಿ ಶುಕ್ರವಾರ ನಡೆದ ಘರ್ಷಣೆಯಲ್ಲಿ ತಮ್ಮ ಕೌನ್ಸಿಲರ್ಗಳು ಗಾಯಗೊಂಡಿದ್ದಾರೆ ಎಂದು ಎರಡೂ ಪಕ್ಷಗಳು ಆರೋಪಿಸಿಕೊಂಡಿವೆ.
ಕಳೆದ ತಿಂಗಳು ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 250 ಸ್ಥಾನಗಳಲ್ಲಿ 134 ಸ್ಥಾನಗಳನ್ನು ಗೆದ್ದಿದ್ದ ಎಎಪಿ, ಶೆಲ್ಲಿ ಒಬೆರಾಯ್ ಮತ್ತು ಅಶು ಠಾಕೂರ್ ಅವರನ್ನು ಉನ್ನತ ಹುದ್ದೆಗೆ ತನ್ನ ಅಭ್ಯರ್ಥಿಗಳಾಗಿ ಹೆಸರಿಸಿದೆ. 104 ವಾರ್ಡ್ಗಳನ್ನು ಗೆದ್ದಿರುವ ಬಿಜೆಪಿ ಮೇಯರ್ ಸ್ಥಾನಕ್ಕೆ ರೇಖಾ ಗುಪ್ತಾ ಅವರನ್ನು ಕಣಕ್ಕಿಳಿಸಿದೆ.

ದೆಹಲಿಯ ಬಿಜೆಪಿಯ ಏಳು ಲೋಕಸಭಾ ಸಂಸದರು, ಎಎಪಿಯ ಮೂವರು ರಾಜ್ಯಸಭಾ ಸದಸ್ಯರು ಮತ್ತು ದೆಹಲಿ ಸ್ಪೀಕರ್ ನಾಮನಿರ್ದೇಶನ ಮಾಡಿದ 14 ಶಾಸಕರು ಮೇಯರ್ ಚುನಾವಣೆಯಲ್ಲಿ ಭಾಗವಹಿಸಲಿದ್ದಾರೆ.
ಇನ್ನು ಈ ಗಲಾಟೆಗೆ ತುಪ್ಪ ಸುರಿಯುವಂತೆ 9 ಕೌನ್ಸಿಲರ್ಗಳನ್ನು ಹೊಂದಿರುವ ಕಾಂಗ್ರೆಸ್ ಮತದಾನದಲ್ಲಿ ಭಾಗವಹಿಸದಿರಲು ನಿರ್ಧರಿಸಿದೆ.
ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು 10 ನಾಮನಿರ್ದೇಶಿತ ಸದಸ್ಯರನ್ನು ನಾಗರಿಕ ಸಂಸ್ಥೆಗೆ ನೇಮಿಸುವ ಕ್ರಮವು ಕೂಡ ಗಲಾಟೆಗೆ ಮತ್ತೊಂದು ಕಾರಣವಾಗಿದೆ. ರಾಜ್ಯ ಸರ್ಕಾರದ ಜೊತೆಗೆ ಸಮಾಲೋಚನೆ ನಡೆಸದೆ ನೇಮಕಾತಿಗಳನ್ನು ಮಾಡಿದ್ದಕ್ಕಾಗಿ ಎಎಪಿ ವಿಕೆ ಸಕ್ಸೇನಾ ವಿರುದ್ಧ ವಾಗ್ದಾಳಿ ನಡೆಸುತ್ತಿದೆ, ಇತ್ತ ಬಿಜೆಪಿಯು ಲೆಫ್ಟಿನೆಂಟ್ ಗವರ್ನರ್ ಅವರು ಹಾಗೆ ಮಾಡುವ ಹಕ್ಕು ಹೊಂದಿದ್ದಾರೆ ಎಂದು ಸಮರ್ಥಿಸಿಕೊಂಡಿದೆ.
ಮೇಯರ್ ಚುನಾವಣೆಗೂ ಮುನ್ನ ಪದಾಧಿಕಾರಿಗಳನ್ನು ನಾಮನಿರ್ದೇಶನ ಮಾಡಿರುವುದು ಬಿಜೆಪಿ ಪರವಾಗಿ ಮತ ಹಾಕುವಂತೆ ಮಾಡುವ ಷಡ್ಯಂತ್ರ ಎಂದು ಎಎಪಿ ಆರೋಪಿಸಿದೆ. ನಿಯಮಗಳ ಪ್ರಕಾರ, ನಾಮನಿರ್ದೇಶಿತ ಸದಸ್ಯರು ಚುನಾವಣೆಯಲ್ಲಿ ಮತ ಚಲಾಯಿಸುವಂತಿಲ್ಲ.
ಮೇಯರ್ ಚುನಾವಣೆಯ ಅಧ್ಯಕ್ಷತೆ ವಹಿಸಲು ಬಿಜೆಪಿ ಕೌನ್ಸಿಲರ್ ಸತ್ಯ ಶರ್ಮಾ ಅವರನ್ನು ತಾತ್ಕಾಲಿಕ ಸ್ಪೀಕರ್ ಆಗಿ ನೇಮಿಸಿದ್ದಕ್ಕಾಗಿ ಲೆಫ್ಟಿನೆಂಟ್ ಗವರ್ನರ್ ಅವರನ್ನು ಎಎಪಿ ಕಟುವಾಗಿ ಟೀಕಿಸಿದೆ. ಆ ಸ್ಥಾನಕ್ಕೆ ಸದನದ ಹಿರಿಯ ಕೌನ್ಸಿಲರ್ ಮುಖೇಶ್ ಗೋಯಲ್ ಅವರನ್ನು ಆಪ್ ಶಿಫಾರಸು ಮಾಡಿತ್ತು.












Click it and Unblock the Notifications