Delhi MCD Election: 15 ವರ್ಷಗಳ 'ಕೈ' ಆಡಳಿತ, 15 ವರ್ಷಗಳ 'ಕಮಲ' ಆಡಳಿತಕ್ಕೆ ತಡೆಯೊಡ್ದಿದ ಎಎಪಿ
ನವದೆಹಲಿ, ಡಿಸೆಂಬರ್ 7: ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ಸ್ಪಷ್ಟ ಬಹುಮತದತ್ತ ಹೆಜ್ಜೆ ಇಟ್ಟಿದೆ. ಈ ಹಿನ್ನೆಲೆಯಲ್ಲಿ ಎಎಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ.
ಎಎಪಿಯ ವಿಜಯಯಾತ್ರೆಯ ಬಗ್ಗೆ ಪ್ರತಿಕ್ರಿಯಿಸಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, 'ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯಲ್ಲಿ 15 ವರ್ಷಗಳ ಕಾಂಗ್ರೆಸ್ ಆಡಳಿತವನ್ನು ಮತ್ತು ಈಗ ದೆಹಲಿ ಮಹಾನಗರ ಪಾಲಿಕೆಯಲ್ಲಿ 15 ವರ್ಷಗಳ ಬಿಜೆಪಿ ಆಡಳಿತವನ್ನು ಬೇರು ಸಮೇತ ಕಿತ್ತುಹಾಕಿದ್ದಾರೆ' ಎಂದು ತಿಳಿಸಿದ್ದಾರೆ.
ದೆಹಲಿಯ ಜನರು ದ್ವೇಷದ ರಾಜಕಾರಣವನ್ನು ಇಷ್ಟಪಡುವುದಿಲ್ಲ. ಶಾಲೆಗಳು, ಆಸ್ಪತ್ರೆಗಳು, ವಿದ್ಯುತ್, ಸ್ವಚ್ಛತೆ ಮತ್ತು ಮೂಲ ಸೌಕರ್ಯಗಳಿಗೆ ಮತ ಹಾಕುತ್ತಾರೆ ಎಂದು ಹೇಳಿದ್ದಾರೆ.
ದೆಹಲಿ ಫಲಿತಾಂಶದ ವಿಚಾರವಾಗಿ ಮಾತನಾಡಿರುವ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ, 'ದೆಹಲಿ ಜನತೆಯಿಂದ ಬಿಜೆಪಿಗೆ ತಕ್ಕ ಉತ್ತರ ಸಿಕ್ಕಿದೆ. ಅಭಿವೃದ್ಧಿ ಕೆಲಸ ಮಾಡುವವರಿಗೆ ಜನ ಮತ ಹಾಕಿದ್ದಾರೆ. ಅರವಿಂದ್ ಕೇಜ್ರಿವಾಲ್ ಮೇಲೆ ಬಿಜೆಪಿ ಎಸೆಯಲು ಯತ್ನಿಸಿದ ಕೆಸರನ್ನು ಇಂದು ದೆಹಲಿ ಅಳಿಸಿ ಹಾಕಿದೆ. ದೆಹಲಿಯನ್ನು ವಿಶ್ವದ ಅತ್ಯಂತ ಸುಂದರ ನಗರವನ್ನಾಗಿ ಪರಿವರ್ತಿಸುತ್ತೇವೆ ಎಂದು ತಿಳಿಸಿದ್ದಾರೆ.
ಮಧ್ಯಾಹ್ನ 12.30 ಕ್ಕೆ, ದೆಹಲಿಯ ಒಟ್ಟು 250 ಕ್ಷೇತ್ರಗಳಲ್ಲಿ 133 ರಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ 104 ವಾರ್ಡ್ಗಳಲ್ಲಿ ಮುಂದಿದೆ.
ಈಗ ಹೊರಬಂದಿರುವ 175 ಕ್ಷೇತ್ರಗಳ ಫಲಿತಾಂಶದ ಪೈಕಿ ಎಎಪಿಯ 100, ಬಿಜೆಪಿಯ 70, ಕಾಂಗ್ರೆಸ್ನ 4 ಮತ್ತು ಒಂದು ಸ್ವತಂತ್ರ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.
ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಎಪಿ ಸ್ಪಷ್ಟ ಬಹುಮತದತ್ತ ಸಾಗುತ್ತಿದ್ದಂತೆ ಪಕ್ಷದ ಸಾವಿರಾರು ಕಾರ್ಯಕರ್ತರು ಹೊರಬಂದು ಸಂಭ್ರಮಾಚಣೆ ಮಾಡುತ್ತಿದ್ದಾರೆ.
'ದೆಹಲಿ ಮಹಾನಗರ ಪಾಲಿಕೆಯಲ್ಲೂ ಕೇಜ್ರಿವಾಲ್' ಎಂಬ ಘೋಷಣೆಗಳನ್ನು ಮೊಳಗಿಸುತ್ತಿದ್ದಾರೆ.