Delhi hit and run case: ಸಂತ್ರಸ್ತೆ ಮನೆಗೆ ಭೇಟಿ ನೀಡಿ ಸರ್ಕಾರಿ ಉದ್ಯೋಗದ ಭರವಸೆ ನೀಡಿದ ಸಿಸೋಡಿಯಾ
ನವದೆಹಲಿ, ಜ. 04: ರಾಷ್ಟ್ರ ರಾಜಧಾನಿ ದೆಹಲಿಯ ಕಾಂಜಾವಾಲಾ ಪ್ರದೇಶದಲ್ಲಿ ಹೊಸ ವರ್ಷದ ಮುಂಜಾನೆ ನಡೆದ ಅಪಘಾತದ ಆಘಾತಕಾರಿ ಘಟನೆ ಜನರನ್ನು ಬೆಚ್ಚಿಬೀಳಿಸಿದೆ. ದೇಶವನ್ನೇ ಬೆಚ್ಚಿ ಬೀಳಿಸಿರುವ ಘಟನೆ ಇದಾಗಿದೆ. ಬುಧವಾರ ಸಂತ್ರಸ್ತ ಕುಟುಂಬವನ್ನು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಭೇಟಿಯಾಗಿದ್ದಾರೆ.
ಬುಧವಾರ ಮೃತ ಅಂಜಲಿ ಸಿಂಗ್ ಕುಟುಂಬವನ್ನು ಭೇಟಿಯಾದ ಅವರು, ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗದ ಭರವಸೆ ನೀಡಿದ್ದಾರೆ.
ಹೊಸ ವರ್ಷದ ಮುಂಜಾನೆ 20 ವರ್ಷದ ಯುವತಿ ಅಂಜಲಿ ಸಿಂಗ್ ಸ್ಕೂಟರ್ನಲ್ಲಿ ಮನೆಗೆ ಮರಳುತ್ತಿದ್ದಾಗ ಸುಲ್ತಾನ್ಪುರಿಯಿಂದ ಕಾಂಜಾವಾಲಾಗೆ ಹೋಗುವ ರಸ್ತೆಯಲ್ಲಿ ಅವರಿಗೆ ಅಪಘಾತವಾಗಿತ್ತು. ಅಪಘಾತದಲ್ಲಿ ಮೃತಪಟ್ಟಿದ್ದ ಅವರ ದೇಹ ಕಾರಿಗೆ ಸಿಲುಕಿಕೊಂಡಿತ್ತು. ಕಾರು ಸುಮಾರು 12 ಕಿಲೋಮೀಟರ್ ಆಕೆಯ ಮೃತದೇಹವನ್ನು ಎಳೆದೊಯ್ದದಿತ್ತು. ಬಳಿಕ ಆಕೆಯ ಶವ ದೆಹಲಿಯ ಕಾಂಜಾವಾಲಾದಲ್ಲಿ ಪತ್ತೆಯಾಗಿತ್ತು. ಘಟನೆ ನಡೆದಾಗ ಕಾರಿನಲ್ಲಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಕುಟುಂಬವನ್ನು ಭೇಟಿ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿಮನೀಶ್ ಸಿಸೋಡಿಯಾ, "ಇದೊಂದು ಭೀಕರ ಅನಾಗರಿಕ ಘಟನೆಯಾಗಿದೆ. ಆಕೆಯ ಕುಟುಂಬದ ಒಬ್ಬ ಸದಸ್ಯರಿಗೆ ನಾವು ಉದ್ಯೋಗ ನೀಡುತ್ತೇವೆ" ಎಂದು ಭರವಸೆ ನೀಡಿದ್ದಾರೆ.
ಇನ್ನು, "ನಾನು ಸಂತ್ರಸ್ತೆಯ ತಾಯಿಯೊಂದಿಗೆ ಮಾತನಾಡಿದೆ. ಅವರಿಗೆ ನ್ಯಾಯ ಸಿಗಲಿದೆ. ನಾವು ಅತ್ಯುತ್ತಮ ವಕೀಲರನ್ನು ನೇಮಿಸುತ್ತೇವೆ. ಸಂತ್ರಸ್ತೆಯ ತಾಯಿ ಅಸ್ವಸ್ಥಗೊಂಡಿದ್ದಾರೆ. ಆಕೆಗೆ ಸೂಕ್ತ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳುತ್ತೇವೆ. ಆಕೆಯ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಸಂತ್ರಸ್ತ ಕುಟುಂಬದೊಂದಿಗೆ ಸರ್ಕಾರ ನಿಂತಿದೆ. ಭವಿಷ್ಯದಲ್ಲಿ ಅವರಿಗೆ ಯಾವುದೇ ಅಗತ್ಯವಿದ್ದರೂ ನಾವು ಅಗತ್ಯವನ್ನು ಪೂರೈಸುತ್ತೇವೆ" ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಂಗಳವಾರ ಟ್ವೀಟ್ ಮಾಡಿದ್ದರು.
ಮಂಗಳವಾರ ಸಂಜೆ ಬಿಗಿ ಭದ್ರತೆಯ ನಡುವೆ 20 ವರ್ಷದ ಅಂಜಲಿ ಸಿಂಗ್ ಅವರ ಅಂತ್ಯಕ್ರಿಯೆ ನಡೆಸಲಾಯಿತು. ಸುಲ್ತಾನ್ಪುರಿಯ ಕರಣ್ ವಿಹಾರ್ನಲ್ಲಿರುವ ಅಂಜಲಿಯ ಮನೆಯ ಹೊರಗೆ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಸಂಜೆ 4 ಗಂಟೆ ಸುಮಾರಿಗೆ ಅಂಜಲಿಯ ಶವವನ್ನು ಆಕೆಯ ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ನಂತರ ಸಂಜೆ 6 ಗಂಟೆ ಸುಮಾರಿಗೆ ಅಂತ್ಯಕ್ರಿಯೆಗೆ ಕೊಂಡೊಯ್ಯಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ ಪೊಲೀಸರ ವಿರುದ್ಧ ಜನರು ಘೋಷಣೆಗಳನ್ನು ಕೂಗುತ್ತಿದ್ದರು.

ಇತ್ತ, ದೆಹಲಿ ಪೊಲೀಸ್ ಸಹಾಯಕ ಸಬ್ ಇನ್ಸ್ಪೆಕ್ಟರ್ ಅವರ ಖಾಸಗಿ ಕಾರು ಬುಧವಾರ ಮುಂಜಾನೆ ದ್ವಾರಕಾದಲ್ಲಿ ಪೊಲೀಸ್ ನಿಯಂತ್ರಣ ಕೊಠಡಿ (ಪಿಸಿಆರ್) ವ್ಯಾನ್ ಸೇರಿದಂತೆ ಇತರ ಆರು ವಾಹನಗಳಿಗೆ ಡಿಕ್ಕಿ ಹೊಡೆದಿದ್ದು, ಹಲವರು ಗಾಯಗೊಂಡಿದ್ದಾರೆ. ಎಎಸ್ಐಗೂ ಗಾಯಗಳಾಗಿವೆ. ಘಟನೆ ಸಂಬಂಧ ರಸ್ತೆ ಅಪಘಾತ ಪ್ರಕರಣವನ್ನು ದಾಖಲಿಸಿದ್ದಾರೆ ಆದರೆ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications