ಶೀಲಾ ದೀಕ್ಷಿತ್ ಗೆ ಬಂಪರ್: ಕೇರಳ ರಾಜ್ಯಪಾಲ
ನವದೆಹಲಿ, ಮಾರ್ಚ್ 5: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ತಾವೂ ಹೀನಾಯವಾಗಿ ಸೋತು, ತಮ್ಮ ಪಕ್ಷದ ಸೋಲಿಗೂ ಕಾರಣರಾಗಿದ್ದ ದಿಲ್ಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರಿಗೆ ಕಾಂಗ್ರೆಸ್ ಪಕ್ಷವು ಋಣಸಂದಾಯ ಮಾಡಿದೆ.
ಅತ್ಯಂತ ಹಿರಿಯ ಕಾಂಗ್ರೆಸ್ ನಾಯಕಿ ಶೀಲಾ ದೀಕ್ಷಿತ್ ಅವರನ್ನು ಕೇರಳದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ಕೇರಳದ ರಾಜ್ಯಪಾಲ ನಿಖೀಲ್ ಕುಮಾರ್ ಅವರು ಇತ್ತೀಚೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಶೀಲಾ ದೀಕ್ಷಿತ್ ಅವರನ್ನು ಮಂಗಳವಾರ ತಮ್ಮ ಕಚೇರಿಗೆ ಕರೆಯಿಸಿಕೊಂಡಿದ್ದ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಈ ನೇಮಕಾತಿ ಬಗ್ಗೆ ಸೂಚನೆ ನೀಡಿದ್ದರು.

75 ವರ್ಷದ ದೀಕ್ಷಿತ್ ಅವರು 1998ರಿಂದ 2013ರವರೆಗೂ ದಿಲ್ಲಿ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು. ಆದರೆ (ಸುದೀರ್ಘ ಕಾಲದ) ಆಡಳಿತ ವಿರೋಧಿ ಅಲೆಯಲ್ಲಿ ಜತೆಗೆ ಧುತ್ತನೆ ಬಿರುಗಾಳಿಯಂತೆ ಕಾಣಿಸಿಕೊಂಡ ಆಮ್ ಆದ್ಮಿ ಪಕ್ಷದ ವಿರುದ್ಧ ಸುಂಟರಗಾಳಿಗೆ ಸಿಕ್ಕಿದ ಹೆಮ್ಮರ ಉರುಳಿಬಿದ್ದಿತ್ತು. ಎಎಪಿ ನಾಯಕ ಅರವಿಂದ್ ಕೇಜ್ರಿವಾಲಾ ವಿರುದ್ಧ ಭಾರಿ ಅಪಜಯ ಅನುಭವಿಸಿದರು.
ಅಂದಹಾಗೆ ಶೀಲಾ ದೀಕ್ಷಿತ್ ಅವರು 1984 ಮತ್ತು 1989 ಅವಧಿಯಲ್ಲಿ ಉತ್ತರಪ್ರದೇಶದ ಕನೌಜ್ ಸಂಸದೀಯ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಆದರೆ ದಿಲ್ಲಿ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಶೀಲಾರ ವಿರುದ್ಧ ಭಾರಿ ಪ್ರಮಾಣದ ಭ್ರಷ್ಟಾಚಾರ ಆರೋಪಗಳು ಕೇಳಿಬಂದಿದ್ದವು.












Click it and Unblock the Notifications