ದೆಹಲಿ ಫಲಿತಾಂಶ; 'ಚಾಣಕ್ಯ' ಬಲದ ಬಗ್ಗೆ ಎಚ್ಡಿಕೆ ಟ್ವೀಟ್
ಬೆಂಗಳೂರು, ಫೆಬ್ರವರಿ 11 : ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಆಮ್ ಆದ್ಮಿ ಪಕ್ಷ ರಾಷ್ಟ್ರ ರಾಜಧಾನಿಯಲ್ಲಿ ಸ್ಪಷ್ಟ ಬಹುಮತ ಪಡೆದಿದೆ. ಬಿಜೆಪಿಗೆ ಮುಖಭಂಗವಾಗಿದ್ದು, ಎರಡು ಅಂಕಿಗಳಷ್ಟು ಸ್ಥಾನವನ್ನು ಗೆದ್ದಿಲ್ಲ.
70 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ 60ಕ್ಕೂ ಅಧಿಕ ಸ್ಥಾನಗಳನ್ನು ಪಡೆದಿದ್ದು, ಪುನಃ ಅಧಿಕಾರ ಹಿಡಿಯಲಿದೆ.
ದೆಹಲಿ ಗದ್ದುಗೆಗಾಗಿ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ನಡುವೆ ಭಾರಿ ಪೈಪೋಟಿ ನಡೆದಿತ್ತು. ಚುನಾವಣಾ ಪ್ರಚಾರದ ಸಮಯದಿಂದಲೂ ಹಿಂದೆ ಇದ್ದ ಕಾಂಗ್ರೆಸ್ ಚುನಾವಣೆಯಲ್ಲಿ 1 ಸ್ಥಾನ ಗೆಲ್ಲವೂ ವಿಫಲವಾಗಿದೆ. ಒಂದು ಸಮಯದಲ್ಲಿ ದೆಹಲಿಯಲ್ಲಿ ಆಳಿದ್ದ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದೆ.
ಅರವಿಂದ ಕ್ರೇಜಿವಾಲ್ ಮತ್ತು ಆಮ್ ಆದ್ಮಿ ಪಕ್ಷ ನಾಯಕರಿಗೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಶುಭಾಶಯಗಳನ್ನು ಸಲ್ಲಿಸಿದ್ದಾರೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ದೆಹಲಿ ಫಲಿತಾಂಶದ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಮತದಾರರಿಗೆ ಅಭಿನಂದನೆಗಳು
ಹಣ, ತೋಳ್ಬಲಗಳಿಲ್ಲದೆಯೂ ಅಭಿವೃದ್ಧಿಯನ್ನೇ ಮಾನದಂಡವಾಗಿಸಿ ಯಶಸ್ವಿ ರಾಜಕಾರಣದ ಸಾಧ್ಯತೆಯನ್ನು ಸಾಕ್ಷಿಕರಿಸಿದ AAP ಹಾಗೂ ದೆಹಲಿ ಮತದಾರರಿಗೆ ಅಭಿನಂದನೆಗಳು ಎಂದು ಎಚ್. ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಚಾಣಕ್ಯ' ಬಲ ಪ್ರದರ್ಶಿಸಿದರೂ
ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಸೇರಿದಂತೆ ಇಡೀ ಕೇಂದ್ರ ಸರಕಾರ ತನ್ನ 'ಚಾಣಕ್ಯ' ಬಲ ಪ್ರದರ್ಶಿಸಿದರೂ ದೆಹಲಿಯ ಪ್ರಬುದ್ಧ ಮತದಾರ ತನ್ನ ನಿಲುವು ಬದಲಿಸಲಿಲ್ಲ ಎಂದು ಎಚ್. ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಪ್ರಾದೇಶಿಕ ಪಕ್ಷದ ಅಗತ್ಯತೆ
ಅಭಿವೃದ್ಧಿ ಹರಿಕಾರನನ್ನು 'ಭಯೋತ್ಪಾದಕ' ಎಂದಿದ್ದಕ್ಕಾಗಿ ತಕ್ಕ ಪಾಠ ಕಲಿಸಿದ್ದಾರೆ. ಈ ಮೂಲಕ ಪ್ರಾದೇಶಿಕ ಪಕ್ಷದ ಅಗತ್ಯತೆಯನ್ನು ಎತ್ತಿಹಿಡಿದ ದೆಹಲಿಯ ಮತದಾರರು ತಮ್ಮ ಆದ್ಯತೆ ಅಭಿವೃದ್ಧಿಗೆ ಅಷ್ಟೇ ಎಂಬುದರ ಮೇಲ್ಪಂಕ್ತಿ ಹಾಕಿದ್ದಾರೆ ಎಂದು ಎಚ್. ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ದಿನೇಶ್ ಗುಂಡೂರಾವ್ ಟ್ವೀಟ್
ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ. ಅರವಿಂದ ಕೇಜ್ರಿವಾಲ್ಗೆ ಅಭಿನಂದನೆ ಸಲ್ಲಿಸಿದ್ದಾರೆ.












Click it and Unblock the Notifications