ತಿತ್ಲಿ ಚಂಡಮಾರುತದ ಹೊಡೆತಕ್ಕೆ 62 ಬಲಿ, 8 ದಿನದಿಂದ ವಿದ್ಯುತ್ ಇಲ್ಲ
ಭುವನೇಶ್ವರ್ (ಒಡಿಶಾ), ಅಕ್ಟೋಬರ್ 21: ಇತ್ತೀಚೆಗೆ ಬೀಸಿದ ತಿತ್ಲಿ ಚಂಡಮಾರುತವು ಬಲಿ ತೆಗೆದುಕೊಂಡ ಜೀವಗಳ ಸಂಖ್ಯೆ 62ಕ್ಕೆ ಏರಿಕೆ ಆಗಿದೆ. ಈ ಬಗ್ಗೆ ಸರಕಾರ ಅಧಿಕೃತ ಮಾಹಿತಿ ನೀಡಿದೆ. ಅನಾಹುತದಲ್ಲಿ ಈಗಲೂ 10 ಮಂದಿ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಂಜಾಂ, ಗಜಪತಿ ಹಾಗೂ ರಾಯಗಡ ಜಿಲ್ಲೆಯಲ್ಲಿ ಪರಿಸ್ಥಿತಿ ಪರಿಶೀಲನೆ ನಡೆಸಿದ ಸರಕಾರದ ಮುಖ್ಯ ಕಾರ್ಯದರ್ಶಿ ಆದಿತ್ಯ ಪ್ರಸಾದ್ ಪಧಿ ಪರಿಹಾರ ಕಾರ್ಯಾಚರಣೆ ನಿಗಾ ಮಾಡುತ್ತಿದ್ದಾರೆ. 62 ಮಂದಿ ಸಾವನ್ನಪ್ಪಿದ್ದು, ಆ ಪೈಕಿ 43 ಮಂದಿ ಗಜಪತಿ ಜಿಲ್ಲೆಗೆ ಸೇರಿದವರು. ಮೂರು ಜಿಲ್ಲೆಗಳಲ್ಲಿ ಗಜಪತಿಯಲ್ಲಿ ಚಂಡಮಾರುತದಿಂದ ಹೆಚ್ಚು ಹಾನಿಯಾಗಿದೆ.
ನಾಸಾ ಉಪಗ್ರಹದ ಕಣ್ಣಲ್ಲಿ ತಿತ್ಲಿ ಮತ್ತು ಲುಬಾನ್ ಚಂಡಮಾರುತ
ಗಾಯಾಳುಗಳ ಪೈಕಿ ಆಂಧ್ರಪ್ರದೇಶದ ಮೂವರು ಮೀನುಗಾರರು ಸಹ ಇದ್ದಾರೆ. ಗಜಪತಿ ಜಿಲ್ಲೆಯಲ್ಲಿ ಇನ್ನೂ 10 ಮಂದಿ ಸಾವನ್ನಪ್ಪಿರಬಹುದು. ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಗಜಪತಿ ಜಿಲ್ಲೆಯ ಮೋಹನ ಬ್ಲಾಕ್ ನ ಭುಯನಪಾದ ಹಳ್ಳಿಯ ಚರಂಡಿಯಲ್ಲಿ ಒಂದು ಶವ ದೊರೆತಿದೆ ಎಂದು ಪಧಿ ಹೇಳಿದ್ದಾರೆ.
57 ಸಾವಿರ ಮನೆಗಳು, 2.7 ಲಕ್ಷ ಹೆಕ್ಟೇರ್ ಭೂಮಿಗೆ ಹಾನಿ
ತಿತ್ಲಿ ಚಂಡಮಾರುತದಿಂದ 57 ಸಾವಿರ ಮನೆಗಳು ಹಾಗೂ 2.7 ಲಕ್ಷ ಹೆಕ್ಟೇರ್ ಭೂಮಿಗೆ ಹಾನಿಯಾಗಿದೆ. ಹಲವಾರು ಕುಟುಂಬಗಳ ಸ್ಥಿತಿ ಬಹಳ ಚಿಂತಾಜನಕವಾಗಿದೆ. ಇನ್ನು ಚಂಡಮಾರುತದ ಭೀಕರ ಪರಿಣಾಮ ಎದುರಿಸುತ್ತಿರುವ ಗಜಪತಿ ಜಿಲ್ಲೆಯಲ್ಲಿ 11 ಕೋಟಿ ರುಪಾಯಿ ನಗದು ಪರಿಹಾರ ಹಾಗೂ ಎಕ್ಸ್ ಗ್ರೇಷಿಯಾ ಎಂದು ವಿತರಿಸಲಾಗಿದೆ.
2,770 ಕೋಟಿ ರುಪಾಯಿ ಪರಿಹಾರ ಹಣ ಅಗತ್ಯವಿದೆ
ಪ್ರಾಥಮಿಕ ಅಂದಾಜಿನ ಪ್ರಕಾರ 2,770 ಕೋಟಿ ರುಪಾಯಿ ಅಗತ್ಯವಿದೆ. ಅಂತಿಮ ವರದಿಗಾಗಿ ಕಾಯುತ್ತಿದ್ದೇವೆ. ರಾಜ್ಯ ಸರಕಾರಕ್ಕೆ ಮನವಿ ಮಾಡಿದ್ದೇವೆ. ತಕ್ಷಣಕ್ಕೆ ರಸ್ತೆಗಳನ್ನು ದುರಸ್ತಿ ಮಾಡುವುದು, ಪುನರ್ವಸತಿ ಹಾಗೂ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳುವುದು ನಮ್ಮ ಆದ್ಯತೆ ಎಂದು ಪಧಿ ಹೇಳಿದ್ದಾರೆ.
'ತಿತ್ಲಿ'ಗೆ ಹೆದರಿ ಗುಹೆಯಲ್ಲಿ ಅಡಗಿದ್ದ 12 ಜನರ ಮೇಲೆ ಎರಗಿದ ಯಮರಾಯ!
ಒಡಿಶಾ ಸರಕಾರ ಸಾಹುಕಾರ್ ರೀತಿ ವರ್ತಿಸುತ್ತಿದೆ
ಚಂಡಮಾರುತದಿಂದ ಹಾನಿಗೊಳಗಾದ ಗಜಪತಿ ಜಿಲ್ಲೆಗೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಭೇಟಿ ನೀಡಿದ್ದಾರೆ. ಒಡಿಶಾ ಸರಕಾರ 'ಸಾಹುಕಾರ್' (ಹಣವನ್ನು ಸಾಲಕ್ಕೆ ಕೊಡುವವರು) ಥರ ವರ್ತಿಸುತ್ತಿದೆ. ಮೃತಪಟ್ಟ ಕುಟುಂಬಗಳಿಗೆ ಎಕ್ಸ್ ಗ್ರೇಷಿಯಾ 10 ಲಕ್ಷ ರುಪಾಯಿ ಘೋಷಿಸಿ, ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಎಂಟು ದಿನವಾದರೂ ವಿದ್ಯುತ್ ಸಂಪರ್ಕ ಸರಿಹೋಗಿಲ್ಲ
ಪರಿಹಾರವನ್ನು 4 ಲಕ್ಷದಿಂದ 10 ಲಕ್ಷ ರುಪಾಯಿಗೆ ಏರಿಸಿದ್ದೇವೆ ಎಂದು ರಾಜ್ಯದ ಸಚಿವರು ಹೇಳಿಕೆ ನೀಡಿರುವುದು ದುರದೃಷ್ಟಕರ. ಇಂಥ ಪ್ರಾಕೃತಿಕ ವಿಕೋಪದಲ್ಲಿ ತೀರಿಕೊಂಡವರ ಕುಟುಂಬದ ಜತೆ ನಡೆದುಕೊಳ್ಳುವ ಸೂಕ್ಷ್ಮತೆ ಇದೇನಾ? ಎಂದು ಧರ್ಮೇಂದ್ರ ಪ್ರದಾನ್ ಪ್ರಶ್ನೆ ಮಾಡಿದ್ದಾರೆ. ಜತೆಗೆ ಚಂಡಮಾರುತ ಬೀಸಿ ಎಂಟು ದಿನಗಳ ನಂತರವೂ ಗಜಪತಿ ಜಿಲ್ಲೆಯಲ್ಲಿ ವಿದ್ಯುತ್ ಸರಿಹೋಗಿಲ್ಲ ಹೇಗೆ ಎಂದು ಸಹ ಅವರು ಕೇಳಿದ್ದಾರೆ.